ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ಸಿಗೆ ಸೇರ್ಪಡೆ : ಹಾರ್ದಿಕ್ ಪಟೇಲ್
ಅಹಮದಾಬಾದ್, ಮಾರ್ಚ್ 11: ಪಾಟೀದಾರ್ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸಿರುವ ಮುಖಂಡ ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಮಾರ್ಚ್ 12ರಂದು ಕಾಂಗ್ರೆಸ್ ಪಕ್ಷ ಸೇರುತ್ತಿರುವುದಾಗಿ ಹೇಳಿದ್ದಾರೆ.
ಇತ್ತೀಚೆಗೆ ಮದುವೆಯಾಗಿರುವ ಹಾರ್ದಿಕ್ ಪಟೇಲ್ ಅವರು ಮತ್ತೊಮ್ಮೆ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿ ನಿಂತಿದ್ದಾರೆ. ರೈತರು ಹಾಗೂ ಯುವ ಸಮುದಾಯದ ಏಳಿಗೆಗಾಗಿ ನಾನು ಶ್ರಮಿಸುವೆ. ಜಾಮ್ ನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ಇದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದಿದ್ದಾರೆ
ಕಾಂಗ್ರೆಸ್ ಬೆಂಬಲಕ್ಕೆ ಹಾರ್ದಿಕ್ ಪಟೇಲ್ ರೆಡಿ... ಆದ್ರೆ ಷರತ್ತುಗಳು ಅನ್ವಯ!
ಅಹಮದಾಬಾದಿನಲ್ಲಿ ಮಾರ್ಚ್ 12ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಹಾರ್ದಿಕ್ ಪಟೇಲ್ ಸೇರ್ಪಡೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಸದ್ಯ ಜಾಮ್ ನಗರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಪೂನಮ್ ಬೆನ್ ಮಾದಮ್ ಅವರು ಹಾಲಿ ಸಂಸದೆಯಾಗಿದ್ದಾರೆ.
ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದ ಹಾರ್ದಿಕ್ ಪಟೇಲ್, ಪಾಟೀದಾರ್ ಸಮುದಾಯದ ಕನಿಷ್ಠ 12 ಜನರಿಗೆ ಟಿಕೇಟ್ ನೀಡಬೇಕು ಇದಕ್ಕೆ ಒಪ್ಪಿದರೆ ಮಾತ್ರವೇ ಕಾಂಗ್ರೆಸ್ ಪರ ಪ್ರಚಾರಕ್ಕೆ ಸಿದ್ಧ ಎಂಬ ಬೇಡಿಕೆ ಇಟ್ಟಿದ್ದರು. ಸದ್ಯಕ್ಕೆ ಈಗ ಯಾವ ಬೇಡಿಕೆ ಇಟ್ಟುಕೊಂಡು ಕಾಂಗ್ರೆಸ್ ಜತೆ ಸಖ್ಯ ಬೆಳೆಸುತ್ತಿದ್ದಾರೋ ಗೊತ್ತಿಲ್ಲ.
ಗುಜರಾತಿನ ನವತಾರೆ ಹಾರ್ದಿಕ್ ಪಟೇಲ್
ಅಹಮದಾಬಾದ್ ಜಿಲ್ಲೆಯ ವೀರಾಮ್ ಗ್ರಾಮದ 25 ವರ್ಷ ವಯಸ್ಸಿನ ಯುವಕ ಹಾರ್ದಿಕ್ ಪಟೇಲ್ ಈಗ ಗುಜರಾತಿನ ನವತಾರೆ. ಷಹಜನಬಾದ್ ಕಾಲೇಜಿನಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಬಿ.ಕಾಂ ಪದವಿ ಪಡೆದಿರುವ ಹಾರ್ದಿಕ್ ಕೌಟುಂಬಿಕ ವೃತ್ತಿಯಾದ ಜಲ ಉದ್ಯಮವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಬೆಂಬಲವಿಲ್ಲದೆ, ಸಮುದಾಯದ ಶಕ್ತಿ ನಂಬಿಕೊಂಡು ರಾಜಕೀಯಕ್ಕೆ ಬಂದಿದ್ದ ಹಾರ್ದಿಕ್ ಈಗ ದೇಶದ ಅತ್ಯಂತ ಪುರಾತನ ಪಾರ್ಟಿಗೆ ಶರಣೆಂದಿದ್ದಾರೆ.
ಪಟೇಲರ ಮೀಸಲಾತಿ ಮುಗಿಯದ ಸಮಸ್ಯೆ
ಮೂಲತಃ ಕೃಷಿಕರಾದ ಪಟೇಲ್ ಸಮುದಾಯದವರು ಕಾಲಕ್ರಮೇಣ ಜವಳಿ, ವಜ್ರ ಹಾಗೂ ಔಷಧ ತಯಾರಿಕ ಕ್ಷೇತ್ರದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. 70ರ ದಶಕಕ್ಕೂ ಮುನ್ನ ಕಾಂಗ್ರೆಸ್ ಬೆಂಬಲಿಸುತ್ತಿದ್ದ ಈ ಸಮುದಾಯ, 81ಹಾಗೂ 85ರಲ್ಲಿ ದಲಿತ- ಹಿಂದುಳಿದ ವರ್ಗಕ್ಕೆ ಮೀಸಲಾತಿ ವಿರೋಧಿಸಿ ಹೋರಾಟ ನಡೆಸಿದ್ದಾರೆ.
1992ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಯಾವುದೇ ರಾಜ್ಯವು ಶೇ.50ರಷ್ಟು ಮೀಸಲಾತಿ ನೀಡಲು ಅವಕಾಶವಿದೆ. ರಾಜ್ಯದಲ್ಲಿ ಒಬಿಸಿ ಶೇ.27, ಎಸ್ಟಿ-15 ಹಾಗೂ ಎಸ್ಸಿ -7 ಮೀಸಲಾತಿ ಹೊಂದಿದ್ದು, ಹೀಗಾಗಿ ನೀಡಲು ಸಾಧ್ಯವಿಲ್ಲ ಎಂಬುದು ರಾಜ್ಯ ಸರ್ಕಾರದ ವಾದ. ಆದರೆ, ಹಾರ್ದಿಕ್ ಪಟೇಲ್ ಮೀಸಲಾತಿ ಕೊಡಿಸುವ ಭರವಸೆ ಹೊಂದಿದ್ದಾರೆ.
ಅಸೆಂಬ್ಲಿ ಬದಲು ಸಂಸತ್ ಪ್ರವೇಶಕ್ಕೆ ಮುಂದಾದ ಹಾರ್ದಿಕ್
2017 ರ ಡಿಸೆಂಬರ್ ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಹಾರ್ದಿಕ್ ಪಟೇಲ್ ಸ್ಪರ್ಧಿಸುವ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ, ಕೇವಲ 25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಅವರು, ಚುನಾವಣೆಗೆ ಸ್ಪರ್ಧಿಸುವ ಕನಿಷ್ಠ ವಯೋಮಿತಿಯನ್ನು ಹೊಂದಿಲ್ಲದ ಕಾರಣ ಅವರು ಚುನಾವಣೆ ಸ್ಪರ್ಧಿಸಿರಲಿಲ್ಲ. ಈ ಬಗ್ಗೆ ಹಾರ್ದಿಕ್ ಅನೇಕ ಬಾರಿ ಸ್ಪಷ್ಟನೆ ನೀಡಿದ್ದರು. ಆದರೆ, ಪುನಃ ವಿಧಾನಸಭೆ ಚುನಾವಣೆ ಸ್ಪರ್ಧಿಸುವ ನಿರೀಕ್ಷೆಯಿತ್ತು. ಆದರೆ, ಲೋಕಸಭೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
|
ಬಿಜೆಪಿ, ಕಾಂಗ್ರೆಸ್ ಟೀಕಿಸಿದ್ದ ಹಾರ್ದಿಕ್ ಪಟೇಲ್
PAAS ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷವನ್ನು ಹಲವು ಬಾರಿ ಟೀಕಿಸಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಾರದು ಎಂಬ ಅಭಿಪ್ರಾಯ ಹೊಂದಿರುವವರ ಪಟ್ಟಿಯಲ್ಲಿ ಹಾರ್ದಿಕ್ ಪಟೇಲ್ ಅಗ್ರಸಾಲಿನಲ್ಲಿದ್ದಾರೆ. ಆದ್ದರಿಂದ ಎನ್ ಡಿಎ ಗೆ ಪರ್ಯಾಯವಾಗಿ ಹುಟ್ಟಿಕೊಳ್ಳಲಿರುವ ಮಹಾಘಟಬಂಧನಕ್ಕೂ ಈಗಾಗಲೇ ಹಾರ್ದಿಕ್ ತಮ್ಮ ಬೆಂಬಲ ಸೂಚಿಸಿದ್ದರು. ಇದೀಗ ಅಧಿಕೃತವಾಗಿ ಅವರು ಕಾಂಗ್ರೆಸ್ ಗೆ ಸೇರಿದ್ದು, ಕಾಂಗ್ರೆಸ್ ಗೆ ಮತ್ತಷ್ಟು ಬಲ ನೀಡಿದೆ,
ಹಾರ್ದಿಕ್ ಪಟೇಲ್ ಸಮಕಾಲೀನರಾದ ಜಿಗ್ನೇಶ್, ಅಲ್ಪೇಶ್
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದಿದ್ದ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ರಾಧನ್ಪುರ್ ಕ್ಷೇತ್ರದಲ್ಲಿ ಭರ್ಜರಿ ಜಯ ದಾಖಲಿಸಿ, ಶಾಸಕರಾಗಿದ್ದಾರೆ. ಅವರು 55,751 ಮತಗಳನ್ನು ಪಡೆದಿದ್ದು ಹತ್ತಿರದ ಪ್ರತಿ ಸ್ಪರ್ಧಿ ಬಿಜೆಪಿಯ ಲವಿಂಜಿ ಸೋಲಂಕಿಯವರನ್ನು 12,544 ಮತಗಳಿಂದ ಸೋಲಿಸಿದ್ದರು.
ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಅವರು ಬನಸ್ಕಾಂತ ಜಿಲ್ಲೆಯ ವಡ್ಗಾಮ್ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 63,471 ಮತಗಳನ್ನು ಪಡೆದಿದ್ದರು. ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವಿಜಯಕುಮಾರ್ ಚಕ್ರವರ್ತಿಯವರನ್ನು 21,042 ಮತಗಳ ಅಂತರದಿಂದ ಸೋಲಿಸಿದ್ದಾರೆ.