ಗುಜರಾತ್ ಕಾಂಗ್ರೆಸ್ಸಿಗೆ ಹಾರ್ದಿಕ್ ಪಟೇಲ್ ಕಾರ್ಯಾಧ್ಯಕ್ಷ: ಮೋದಿ, ಅಮಿತ್ ಶಾ ಟಾರ್ಗೆಟ್
2017ರ ಗುಜರಾತ್ ಅಸೆಂಬ್ಲಿ ಚುನಾವಣೆಯ ವೇಳೆ ಮೂವರು ಯುವಕರಾದ ಪಾಟೀದಾರ್ ಸಮುದಾಯದ ಹಾರ್ದಿಕ್ ಪಟೇಲ್, ದಲಿತ ಸಮುದಾಯದ ಜಿಗ್ನೇಶ್ ಮೇವಾನಿ ಮತ್ತು ಒಬಿಸಿ ಸಮುದಾಯದ ಅಲ್ಪೇಶ್ ಠಾಕೂರ್ ಮಾಡಿದ ಸದ್ದು, ಬಿಜೆಪಿಯ ಬುಡವನ್ನೇ ಅಲುಗಾಡಿಸಲಾರಂಭಿಸಿತ್ತು.
Recommended Video
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ತವರೂರಾದ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ, ಬಿಜೆಪಿ ಪ್ರಯಾಸದಿಂದ 99 ಸ್ಥಾನವನ್ನು ಗೆದ್ದು ಅಧಿಕಾರವನ್ನು ಉಳಿಸಿಕೊಂಡಿತ್ತು.
ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಹಾರ್ದಿಕ್ ಪಟೇಲ್ ನೇಮಕ
ಭಾರೀ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್ 77 ಸ್ಥಾನವನ್ನು ಗೆದ್ದಿತ್ತು. ಅಂದು ಸೋತು ಗೆದ್ದಿದ್ದ ಕಾಂಗ್ರೆಸ್ಸಿಗೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ್ದು ಈ ಮೂವರೇ. ಅವರಲ್ಲಿ ಈಗ, ಮೇವಾನಿ ಮತ್ತು ಅಲ್ಪೇಶ್ ಠಾಕೂರ್, ಕಾಂಗ್ರೆಸ್ ಜೊತೆಗಿಲ್ಲ.
ಪಾಟೀದಾರ್ ಸಮದಾಯದ ಹೋರಾಟದ ಮೂಲಕ ಗುಜರಾತ್ ರಾಜಕೀಯದಲ್ಲಿ ಮಂಚೂಣಿಗೆ ಬಂದಿದ್ದ ಹಾರ್ದಿಕ್ ಪಟೇಲ್ ಈಗ, ಗುಜರಾತ್ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರ ಹಿಂದೆ, ಅಮಿತ್ ಶಾ ಮತ್ತು ಮೋದಿ ಟಾರ್ಗೆಟ್ ಎಂದು ಹೇಳಲಾಗುತ್ತಿದೆ.
ಪಾಟೀದಾರ್ ಕುಟುಂಬದಿಂದ ಬಂದ ಹಾರ್ದಿಕ್
ಅಹಮದಾಬಾದ್ ಗ್ರಾಮೀಣ ಭಾಗದ ಸಣ್ಣ ಪಾಟೀದಾರ್ ಕುಟುಂಬದಿಂದ ಬಂದ ಹಾರ್ದಿಕ್, ಸರ್ದಾರ್ ಪಟೇಲ್ ಗ್ರೂಪ್ ಎನ್ನುವ ಸಂಘಟನೆಯ ಮೂಲಕ, ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡವರು. ಲಾಲ್ಜಿ ಪಟೇಲ್ ಮೂಲಕ, ಹೋರಾಟದ ಅನುಭವವನ್ನು ಪಡೆದುಕೊಂಡ ಹಾರ್ದಿಕ್, 2015ರ ವೇಳೆ ಆರಂಭವಾದ ಪಾಟೀದಾರ್ ಚಳುವಳಯಲ್ಲಿ ಮೊದಮೊದಲು, ಸರ್ದಾರ್ ಪಟೇಲ್ ಗ್ರೂಪ್ ಸಂಘಟನೆಯ ಸಾಮಾಜಿಕ ಜಾಲಾತಾಣವನ್ನು ನಿಭಾಯಿಸುತ್ತಿದ್ದರು.
ಮೆಹ್ಸಾನಾ ಜಿಲ್ಲೆಯಲ್ಲಿನ ಹಿಂಸಾಚಾರ
ಶಾಂತ ರೀತಿಯಲ್ಲಿ ಸಾಗುತ್ತಿದ್ದ ಈ ಚಳುವಳಿ ರಾಷ್ಟ್ರವ್ಯಾಪಿಯಾಗಿ ಗಮನ ಸೆಳೆದದ್ದು, ಮೆಹ್ಸಾನಾ ಜಿಲ್ಲೆಯಲ್ಲಿ ಹಿಂಸಾಚಾರಕ್ಕೆ ತಿರುಗಿದ ನಂತರ. ಒಂದು ರೀತಿಯಲ್ಲಿ ಗುರುಗಳಂತೆ ಇದ್ದ ಲಾಲ್ಜಿ ಪಟೇಲ್ ಜೊತೆಗಿನ ಮನಸ್ತಾಪದಿಂದ ಹಾರ್ದಿಕ್, ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಎನ್ನುವ ಸಂಘಟನೆಯನ್ನು ಹುಟ್ಟು ಹಾಕಿದ ನಂತರ, ಈ ಚಳುವಳಿಯ ವೇಗ ಇನ್ನಷ್ಟು ಹೆಚ್ಚಾಯಿತು.
ಕಾಂಗ್ರೆಸ್ ಅನ್ನು ಬೆಂಬಲಿಸುವಂತೆ ಮನವಿ
ಈ ವೇಳೆ, ಗುಜರಾತ್ ನಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡ ಹಾರ್ದಿಕ್ ಪಟೇಲ್ ಜೈಲು ಶಿಕ್ಷೆ ಕೂಡಾ ಅನುಭವಿಸಿದ್ದರು. ತಮ್ಮ ಹೋರಾಟದುದ್ದಕ್ಕೂ ಯಾವುದೇ ಪಕ್ಷದ ಜೊತೆ ಹಾರ್ದಿಕ್ ಗುರುತಿಸಿಕೊಂಡಿಲ್ಲದಿದ್ದರೂ, ಅವರ ಟಾರ್ಗೆಟ್ ಬಿಜೆಪಿಯಾಗಿತ್ತು. ಇದಾದ ನಂತರ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ, ಕಾಂಗ್ರೆಸ್ ಅನ್ನು ಬೆಂಬಲಿಸುವಂತೆ ಹಾರ್ದಿಕ್ ಬಹಿರಂಗವಾಗಿಯೇ ತಮ್ಮ ಸಮುದಾಯದವರನ್ನು ವಿನಂತಿಸಿಕೊಂಡಿದ್ದರು.
ರಾಹುಲ್ ಗಾಂಧಿ ಸಮ್ಮುಖದಲ್ಲಿ ಹಾರ್ದಿಕ್, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಮಾರ್ಚ್ 2019ರಲ್ಲಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಹಾರ್ದಿಕ್, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಿದ ಹಾರ್ದಿಕ್ ಪಟೇಲ್ ಅವರನ್ನು ಕಾರ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ, 2022ರಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಕಾಂಗ್ರೆಸ್ ತನ್ನನ್ನು ಸಜ್ಜು ಮಾಡಿಕೊಂಡಂತಿದೆ.
ಗುಜರಾತ್ ನಲ್ಲಿ ಮೋದಿ, ಅಮಿತ್ ಶಾ ಟಾರ್ಗೆಟ್
ಸತತವಾಗಿ ಗುಜರಾತ್ ನಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ, ಹಾರ್ದಿಕ್ ಮುಂದಿನ ದಿನಗಳಲ್ಲಿ ತೀವ್ರ ಪೈಪೋಟಿ ನೀಡುವ ಸಾಧ್ಯತೆಯಿಲ್ಲದಿಲ್ಲ. ಮೋದಿ-ಶಾ ಜೋಡಿಗೆ ಜಾತಿ ಬಲದಿಂದ ಪೆಟ್ಟು ನೀಡಲು ಹಾರ್ದಿಕ್ ಸರಿಯಾದ ಆಯ್ಕೆ ಎನ್ನುವುದು ಒಂದು. ಇನ್ನೊಂದು, ಗುಜರಾತ್ ನವರೇ ಆದ ಅಹ್ಮದ್ ಪಟೇಲ್ ಅವರಿಗೆ ಪರ್ಯಾಯವಾಗಿ ಹಾರ್ದಿಕ್ ಪಟೇಲ್, ಕಾಂಗ್ರೆಸ್ಸಿನಲ್ಲಿ ಬೆಳೆಯಲೂ ಬಹುದು ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.