ಜಗತ್ತಿನ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯಲ್ಲಿ ಏನೇನಿದೆ? ಮಾಹಿತಿ ಇಲ್ಲಿದೆ...
Recommended Video
ಅಹಮದಾಬಾದ್, ಅಕ್ಟೋಬರ್ 31: ಉಕ್ಕಿನ ಮನುಷ್ಯ ಸರ್ದಾರ್ ವಲಭಭಾಯ್ ಪಟೇಲ್ ಅವರ ನೆನಪಲ್ಲಿ ನಿರ್ಮಿಸಿರುವ ಜಗತ್ತಿನ ಅತಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಸೂರತ್ನಲ್ಲಿ ಬುಧವಾರ ಬೆಳಿಗ್ಗೆ 11.30ರಂದು ಉದ್ಘಾಟಿಸಲಿದ್ದಾರೆ.
ಸ್ವತಂತ್ರ ಭಾರತದ ಮೊದಲ ಗೃಹಸಚಿವರಾಗಿದ್ದ ಸರ್ದಾರ್ ಪಟೇಲ್, ಸ್ವತಂತ್ರಪೂರ್ವದಲ್ಲಿ ಹರಿದು ಹಂಚಿಹೋಗಿದ್ದ 562 ಸಣ್ಣ ಸಣ್ಣ ಸಾಮ್ರಾಜ್ಯಗಳನ್ನು ಒಂದುಗೂಡಿಸಿ ಭಾರತ ಗಣರಾಜ್ಯವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.
LIVE: ವಿಶ್ವದ ಅತೀ ಎತ್ತರದ 'ಏಕತೆಯ ಪ್ರತಿಮೆ' ಅನಾವರಣಕ್ಕೆ ಕ್ಷಣಗಣನೆ
ಈ ವೈವಿಧ್ಯಮಯ ಅಸ್ಮಿತೆ ಹೊಂದಿರುವ ರಾಜ್ಯಗಳನ್ನು ದೇಶದ ಹೆಸರಿನಲ್ಲಿ ಒಂದುಗೂಡಿಸಿದ ಏಕತೆಯ ಹರಿಕಾರನ ನೆನಪಿಗಾಗಿ ಪಟೇಲ್ ಅವರ 143ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಅವರ ಬೃಹತ್ ಪ್ರತಿಮೆ ಅನಾವರಣಗೊಳ್ಳುತ್ತಿದೆ.
ಈ ಪ್ರತಿಮೆ ಸಾಕಷ್ಟು ಅಚ್ಚರಿ ಕುತೂಹಲಗಳಿಗೆ ಕಾರಣವಾಗಿದೆ. ಅದರ ವಿಶೇಷತೆಗಳೇನು?, ಜನರ ವೀಕ್ಷಣೆಗೆ ಹೇಗೆ ಲಭ್ಯವಾಗಲಿದೆ ಎಂಬ ಮಾಹಿತಿಗಳು ಇಲ್ಲಿವೆ...
ಪ್ರತಿಮೆ ಇರುವುದು ಎಲ್ಲಿ?
ಗುಜರಾತ್ನ ನರ್ಮದಾ ನದಿ ತೀರದಿಂದ ತುಸು ದೂರದಲ್ಲಿರುವ ರಾಜ್ಪಿಪ್ಲಾ ಎಂಬಲ್ಲಿನ ಸಾಧು ಬೆಟ್ ದ್ವೀಪದಲ್ಲಿ ಈ ಪ್ರತಿಮೆ ನಿರ್ಮಿಸಲಾಗಿದೆ. ಸತ್ಪುರಾ ಮತ್ತು ವಿಂದ್ಯ ಪರ್ವತ ಶ್ರೇಣಿಯ ನಡುವೆ ಪರ್ವತದಂತೆಯೇ ದೊಡ್ಡದಾದ ಪ್ರತಿಮೆ ನಿಂತಿದೆ. ಗುಜರಾತ್ನ ಕೆವಾಡಿಯಾ ಪಟ್ಟಣದಿಂದ ಈ ಪ್ರತಿಮೆ ಬಳಿ ತೆರಳಲು 3.5 ಕಿ.ಮೀ. ಹೆದ್ದಾರಿ ಮಾರ್ಗ ಸಿಗುತ್ತದೆ.
Array |
ಜಗತ್ತಿನ ಅತಿ ಎತ್ತರದ ಪ್ರತಿಮೆ
ಇದು ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ. 182 ಮೀಟರ್ ಉದ್ದವಿರುವ ಇದು, ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧನ ಪ್ರತಿಮೆಗಿಂತಲೂ 23 ಮೀಟರ್ ಎತ್ತರವಿದೆ. ಅಮೆರಿಕದಲ್ಲಿರುವ ಜಗದ್ವಿಖ್ಯಾತ ಲಿಬರ್ಟಿ ಪ್ರತಿಮೆಯ (93 ಮೀಟರ್) ಸುಮಾರು ಎರಡು ಪಟ್ಟು ಎತ್ತರವಿದೆ.
'ಉಕ್ಕಿನ ಮನುಷ್ಯ' ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ಯಾರು?
ಭೂಕಂಪಕ್ಕೂ ಅದುರುವುದಿಲ್ಲ
ಈ ಪ್ರತಿಮೆಯು 60 ಮೀಟರ್ ಸ್ಪೀಡ್ ವೇಗದಲ್ಲಿ ಗಾಳಿ ಬೀಸಿದರೂ, ಭೂಕಂಪ ಸಂಭವಿಸಿದರೂ ತಾಳಿಕೊಳ್ಳುವ ಗಟ್ಟಿತನ ಹೊಂದಿದೆ.
ಈ ಪ್ರತಿಮೆಯನ್ನು ಕೇವಲ ಮೂರೂವರೆ ವರ್ಷದ ಒಳಗೆ ಸುಮಾರು 3000 ಕೆಲಸಗಾರರು ನಿರ್ಮಿಸಿದ್ದಾರೆ. ಇದರಲ್ಲಿ ಲಾರ್ಸನ್ ಆಂಡ್ ಟರ್ಬೊದ (ಎಲ್&ಟಿ) 300 ಎಂಜಿನಿಯರ್ಗಳೂ ಸೇರಿದ್ದಾರೆ.
ಮೋದಿ ಮುಖ್ಯಮಂತ್ರಿಯಾಗಿದ್ದಾಗ ಘೋಷಣೆ
2010ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ವಿಧಾನಸಭೆ ಚುನಾವಣೆಗೂ ಮುನ್ನ ಈ ಯೋಜನೆಯನ್ನು ಘೋಷಿಸಿದ್ದರು. ಇದಕ್ಕೆ ತಗುಲಿರುವ ಸಂಪೂರ್ಣ 3,050 ಕೋಟಿ ವೆಚ್ಚವನ್ನು ಗುಜರಾತ್ ಸರ್ಕಾರವೇ ಭರಿಸಿದೆ.
ಈ ಯೋಜನೆಯನ್ನು ನಿರ್ವಹಿಸಲೆಂದೇ ಮೋದಿ 2011ರಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಏಕತಾ ಟ್ರಸ್ಟ್ (ಎಸ್ವಿಪಿಆರ್ಇಟಿ) ಸ್ಥಾಪಿಸಿದ್ದರು. ದೇಶದ ಎಲ್ಲ ರಾಜ್ಯಗಳಿಂದ 'ಲೋಹ' ಆಂದೋಲನ ನಡೆಸಿ 1,69,000 ಹಳ್ಳಿಗಳಿಂದ ಸುಮಾರು 100 ಮಿಲಿಯನ್ ರೈತರಿಂದ 129 ಟನ್ ಲೋಹವನ್ನು ಸಂಗ್ರಹಿಸಲಾಗಿದೆ.
ಸರ್ದಾರ್ ಪಟೇಲ್ ಸ್ಮರಣೆಯ ಏಕತಾ ಪ್ರತಿಮೆ ನಿರ್ಮಾಣ ಟೈಮ್ ಲೈನ್
ರಾಮ್ ವಾನ್ಜ್ ಸುತಾರ್ ಶಿಲ್ಪಿ
ಪದ್ಮಭೂಷಣ ಪುರಸ್ಕೃತ ಶಿಲ್ಪಿ ರಾಮ್ ವಾನ್ಜ್ ಸುತಾರ್ ಅವರ ನೇತೃತ್ವದಲ್ಲಿ ಪ್ರತಿಮೆ ನಿರ್ಮಿಸಲಾಗಿದ್ದು, ಚೀನಾದ ಜಿಯಾಂಗ್ಸಿ ಟೊಂಕಿನೆ ಕಂಪೆನಿಯ ಲೋಹ ಲೇಪನ ಕಾರ್ಯ ಮಾಡಿದೆ.
ಈ ಪ್ರತಿಮೆಯನ್ನು ವೀಕ್ಷಿಸಲು ಅನುಕೂಲವಾಗುವಂತೆ 153 ಮೀಟರ್ ಎತ್ತರದಲ್ಲಿ ಒಂದೇ ಬಾರಿಗೆ ಸುಮಾರು 200 ಮಂದಿ ನಿಲ್ಲಲು ವ್ಯವಸ್ಥೆ ಕಲ್ಪಿಸಲಾಗಿದೆ. ಅದರ ಹಿನ್ನೆಲೆಯಲ್ಲಿ ಸರ್ದಾರ್ ಸರೋವರ್ ಅಣೆಕಟ್ಟಿನ ಭವ್ಯ ನೋಟವೂ ಸಿಗುತ್ತದೆ.
Array |
ಮೂರು ಪದರದಲ್ಲಿ ರಚನೆ
5700 ಟನ್ ಉಕ್ಕು, 18,500 ಟನ್ ಕಾಂಕ್ರೀಟ್ ಅನ್ನು ಪ್ರತಿಮೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಈ ಪ್ರತಿಮೆ ಮೂರು ಪದರದ ರಚನೆಯಾಗಿದೆ. ಅತಿ ಒಳಭಾಗದಲ್ಲಿ ಆರ್ಸಿಸಿಯಿಂದ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಪ್ರತಿಮೆಯ ಎದೆಯ ಭಾಗದ 127 ಮೀಟರ್ ಎತ್ತರದವರೆಗೆ ಎರಡು ಟವರ್ಗಳನ್ನು ಒಳಗೊಂಡಿದೆ. ಎರಡಯ ಪದರವು ಉಕ್ಕಿನದ್ದಾಗಿದೆ. ಮೂರನೆಯದ್ದು 8 ಎಂ ಎಂ ದಪ್ಪದ ಕಂಚಿನ ಲೇಪನವನ್ನು ಹೊಂದಿದೆ.
ಆರ್ಸಿಸಿ ಗೋಪುರಗಳು ಪಟೇಲ್ ಅವರ ಪಾದದ ಬಳಿಯಿಂದ ಎರಡೂ ಭಾಗಗಳಲ್ಲಿ ನಿರ್ಮಾಣವಾಗಿದ್ದು, ಎರಡರಲ್ಲಿಯೂ ಲಿಫ್ಟ್ಗಳಿವೆ. ಈ ಲಿಫ್ಟ್ಗಳಲ್ಲಿ ತಲಾ 26 ಜನರು ಮೇಲ್ಭಾಗಕ್ಕೆ ಅರ್ಧ ನಿಮಿಷದಲ್ಲಿ ತೆರಳಬಹುದು.
ನನ್ನನ್ನು ತೆಗಳಿ, ಆದರೆ ಪಟೇಲ್ ರಂಥವರಿಗೆ ಅವಮಾನ ಮಾಡಬೇಡಿ: ಮೋದಿ
|
ವಿವಾದವೂ ಇದೆ
ಸರ್ದಾರ್ ಸರೋವರ್ ನರ್ಮದಾ ಯೋಜನೆ ಅಣೆಕಟ್ಟಿಗಾಗಿ ತಮ್ಮಿಂದ ಸ್ವಾಧೀನಪಡಿಸಿಕೊಳ್ಳಲಾದ ಭೂಮಿಯಲ್ಲಿ ಪ್ರತಿಮೆ ಮತ್ತು ಇತರೆ ಪ್ರವಾಸೋದ್ಯಮ ಚಟುವಟಿಕೆಗಳ ಯೋಜನೆಗಳನ್ನು ನಡೆಸಲಾಗುತ್ತಿದೆ ಎಂದು ಅಲ್ಲಿನ ಬುಡಕಟ್ಟು ಸಮುದಾಯದ ಜನರು ಆರೋಪಿಸಿದ್ದಾರೆ.
ಬಂದ್ಗೆ ಕರೆ
75 ಸಾವಿರ ಬುಡಕಟ್ಟು ಜನರು ಇಲ್ಲಿದ್ದು, ಏಕತಾ ಪ್ರತಿಮೆಯಿಂದ ದೊಂದರೆಗೆ ಒಳಗಾಗಿದ್ದಾಗಿ ಗುಜರಾತ್ ಬುಡಕಟ್ಟು ಸಂಸ್ಥೆ ಹೇಳಿದೆ. ಪ್ರತಿಮೆ ಉದ್ಘಾಟನೆಯನ್ನು ವಿರೋಧಿಸಿ ಈ ಸಂಘಟನೆ ಬಂದ್ಗೆ ಕರೆ ನೀಡಿದೆ. ಶಾಲೆ, ಕಚೇರಿಗಳು ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಲಾಗುತ್ತಿದ್ದು, ಅವರ ಮನೆಗಳಲ್ಲಿ ಅಡುಗೆಯನ್ನೂ ಮಾಡುವುದಿಲ್ಲ ಎಂದು ಸಂಘಟನೆ ತಿಳಿಸಿದೆ.
|
15 ಸಾವಿರ ಉದ್ಯೋಗ ಸೃಷ್ಟಿ
ಆದರೆ, ಈ ಯೋಜನೆಯಿಂದಾಗಿ ಅಲ್ಲಿನ ಆದಿವಾಸಿಗಳಿಗೆ ಸುಮಾರು 15 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನವೆಂಬರ್ 3ರಿಂದ ಈ ಪ್ರತಿಮೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.