'ಮೋದಿ ನಾಯಕತ್ವದಲ್ಲಿ ಭಾರತ ತಾಳ್ಮೆಯಿಂದ 2 ನೇ ಕೋವಿಡ್ ಅಲೆ ವಿರುದ್ದ ಹೋರಾಡಿದೆ': ಅಮಿತ್ ಶಾ
ಅಹಮದಾಬಾದ್, ಜೂ. 03: "ಕೋವಿಡ್ ಸಾಂಕ್ರಾಮಿಕದಿಂದ ಎದುರಿಸುತ್ತಿರುವ ಸವಾಲುಗಳ ವಿರುದ್ದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾಳ್ಮೆಯಿಂದ ಹೋರಾಡಿದೆ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಹಮದಾಬಾದ್ನಲ್ಲಿ ಒಂಬತ್ತು ಆಮ್ಲಜನಕ ಸ್ಥಾವರಗಳ ವರ್ಚುವಲ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವರು, "ಎರಡನೇ ಅಲೆಯಲ್ಲಿನ ಅತಿದೊಡ್ಡ ಸವಾಲುಗಳಲ್ಲಿ ಒಂದಾದ ಆಮ್ಲಜನಕದ ಬೇಡಿಕೆಯಲ್ಲಿನ ಹತ್ತು ಪಟ್ಟು ಹೆಚ್ಚಳವನ್ನು ನಿವಾರಿಸಲು ಸರ್ಕಾರ ಕೈಗೊಂಡ ಹಲವಾರು ಕ್ರಮಗಳನ್ನು ಕೈಗೊಂಡಿದೆ" ಎಂದಿದ್ದಾರೆ.
ಯಾಸ್ ಚಂಡಮಾರುತ: ಅಸ್ಸಾಂ, ಸಿಕ್ಕಿಂ, ಮೇಘಾಲಯದ ಸಿದ್ಧತೆಯ ಬಗ್ಗೆ ಅಮಿತ್ ಶಾ ಪರಾಮರ್ಶೆ
"ಸಾಮಾನ್ಯ ಪರಿಸ್ಥಿತಿಗಳಲ್ಲಿ, ದೇಶವು ಸುಮಾರು 1000 ಮೆ.ಟನ್ ಆಮ್ಲಜನಕವನ್ನು ಉತ್ಪಾದಿಸುತ್ತಿತ್ತು. ಒಂದು ತಿಂಗಳಲ್ಲಿ ಬೇಡಿಕೆ 10,000 ಮೆ.ಟನ್.ಗೆ ಏರಿತು. ಈ ಬೇಡಿಕೆಯು 10 ಪಟ್ಟು ಹೆಚ್ಚಳವಾಗಿತ್ತು. ಇದನ್ನು ಪೂರೈಸುವುದು ದೊಡ್ಡ ಸವಾಲಾಗಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕೇಂದ್ರ ಮತ್ತು ರಾಜ್ಯವು ಈ ಸವಾಲನ್ನು ದೃಢವಾಗಿ ಎದುರಿಸಿದೆ" ಎಂದು ಶ್ಲಾಘಿಸಿದ್ದಾರೆ.
"ಕೈಗಾರಿಕಾ ಆಮ್ಲಜನಕದ ಉತ್ಪಾದನೆಯನ್ನು ದೇಶದಾದ್ಯಂತದ ಸ್ಥಾವರಗಳಲ್ಲಿ ಮಾಡಲಾಗುತ್ತಿತ್ತು. ಆದರೆ ಬಳಿಕ ಎಲ್ಲಾ ಸ್ಥಾವರಗಳಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಮಾಡಲಾಯಿತು. ಕ್ರಯೋಜೆನಿಕ್ ಟ್ಯಾಂಕರ್ಗಳು ದೇಶದಲ್ಲಿ ಕಡಿಮೆ ಇದ್ದವು. ನಾವು ವಿದೇಶಗಳಿಂದ ಅದನ್ನು ಆಮದು ಮಾಡಿಕೊಂಡೆವು. ರೈಲುಗಳಲ್ಲಿ ಆಮ್ಲಜನಕವನ್ನು ಸಾಗಿಸಲಾಯಿತು. ಸುಮಾರು 15,000 ಮೆ.ಟನ್ ಆಮ್ಲಜನಕ ರೈಲುಗಳಲ್ಲಿ ರವಾನೆ ಮಾಡಲಾಗಿದೆ" ಎಂದು ವಿವರಿಸಿದ್ದಾರೆ.
"ಮೊದಲ ಅಲೆಯ ನಂತರ, 162 ಪಿಎಸ್ಎ ಸ್ಥಾವರಗಳನ್ನು ಪಿಎಂ ಕೇರ್ಸ್ ನಿಧಿಯಿಂದ ಪ್ರಧಾನಿ ಅನುಮೋದಿಸಿದ್ದಾರೆ. ಇದರೊಂದಿಗೆ ಇನ್ನೂ 100 ಪಿಎಸ್ಎ ಸ್ಥಾವರಗಳನ್ನು ಇತರ ಸಚಿವಾಲಯಗಳು ಪ್ರಾರಂಭಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ 300 ಸ್ಥಾವರ ಕಾಮಗಾರಿಗಳನ್ನು ಸಹ ಪ್ರಾರಂಭಿಸಲಾಗುವುದು" ಎಂದು ತಿಳಿಸಿದ್ದಾರೆ.
ಅಮಿತ್ ಶಾ, ಯೋಗಿ ಆದಿತ್ಯನಾಥ್ ಮೇಲೆ ಬಾಂಬ್ ದಾಳಿ ಬೆದರಿಕೆ!
ಈ ಸಂದರ್ಭದಲ್ಲೇ ಅಮಿತ್ ಶಾ, ಸಶಸ್ತ್ರ ಪಡೆ, ರೈಲ್ವೆ ಮತ್ತು ವಿಜ್ಞಾನಿಗಳ ಪ್ರಯತ್ನಗಳನ್ನು ಶ್ಲಾಘಿಸಿ ಧನ್ಯವಾದ ಹೇಳಿದ್ದಾರೆ. ಅಮಿತ್ ಶಾ ಉದ್ಘಾಟಿಸಿದ ಒಂಬತ್ತು ಆಮ್ಲಜನಕ ಘಟಕಗಳನ್ನು ವಲ್ಲಭ ಯುವ ಸಂಘಟನೆ ನಿರ್ವಹಿಸಲಿದೆ. ವರ್ಚುವಲ್ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡಾ ಉಪಸ್ಥಿತರಿದ್ದರು.
(ಒನ್ಇಂಡಿಯಾ ಸುದ್ದಿ)