ತಾರತಮ್ಯ ಇಲ್ಲದ ದೇಶಕ್ಕೆ ಗಡಿಪಾರು ಮಾಡಿ: ಊನಾ ಹಲ್ಲೆ ಸಂತ್ರಸ್ತ ದಲಿತರ ಅಳಲು
ಅಹಮದಾಬಾದ್, ಜನವರಿ 14: ಸತ್ತ ಹಸುವಿನ ಚರ್ಮ ಸುಲಿದದ್ದಕ್ಕೆ ತೀವ್ರ ಹಲ್ಲೆಗೆ ಒಳಗಾದ ಗುಜರಾತ್ನ ಊನಾದ ದಲಿತ ಸಮುದಾಯದ ಏಳು ಮಂದಿಯಲ್ಲಿ ಒಬ್ಬಾತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದು, ತನ್ನನ್ನು ಹಾಗೂ ತನ್ನ ಸಹೋದರರನ್ನು ತಾರತಮ್ಯ ಮಾಡದ ದೇಶಕ್ಕೆ ಗಡಿಪಾರು ಮಾಡುವಂತೆ ಮನವಿ ಮಾಡಿದ್ದಾರೆ.
ತಮ್ಮನ್ನು ಭಾರತದ ಪ್ರಜೆಗಳಂತೆ ನೋಡಿಕೊಳ್ಳುತ್ತಿಲ್ಲ ಎಂದು ಪ್ರಕರಣದ ಬಲಿಪಶುಗಳಲ್ಲಿ ಒಬ್ಬರಾದ ವಶ್ರಮ್ ಸರ್ವಯ್ಯಾ ಹೇಳಿದ್ದಾರೆ.
ದಲಿತ ಯುವತಿಯ ಅಪಹರಿಸಿ, ಅತ್ಯಾಚಾರ ಮಾಡಿ, ಕೊಂದು, ನೇಣು ಬಿಗಿದರು
2016ರ ಜುಲೈ 11ರಂದು ಗಿರ್ ಸೋಮನಾಥ್ ಜಿಲ್ಲೆಯ ಊನಾ ಪಟ್ಟಣದಲ್ಲಿ ಸತ್ತ ಹಸುವಿನ ಚರ್ಮವನ್ನು ಸುಲಿಯುತ್ತಿದ್ದ ಸರ್ವಯ್ಯಾ ಕುಟುಂಬದ ಏಳು ಮಂದಿಯ ಮೇಲೆ 40ಕ್ಕೂ ಅಧಿಕ ಮೇಲ್ಜಾತಿಯ ದರ್ಬಾರ್ ಸಮುದಾಯದವರು ಹಲ್ಲೆ ನಡೆಸಿದ್ದರು. ಸತ್ತ ಹಸುಗಳ ಚರ್ಮವನ್ನು ಕೀಳುವುದು ಸರ್ವಯ್ಯಾ ಕುಟುಂಬದ ಸಾಂಪ್ರದಾಯಿಕ ಕುಲಕಸುಬು. ಆದರೆ ಹಲ್ಲೆ ನಡೆಸಿದವರು ಅವರು ಗೋಹತ್ಯೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು.
ಹಲ್ಲೆಯ ವೇಳೆ ಈ ಕುಟುಂಬದ ನಾಲ್ವರು ಸಹೋದರರನ್ನು ಬೆತ್ತಲೆ ಮಾಡಿ ಕಾರ್ ಹಿಂಬದಿಗೆ ಕಟ್ಟಿ ಕೋಲು ಹಾಗೂ ಕಬ್ಬಿಣದ ಸರಳುಗಳಿಂದ ಥಳಿಸಿದ್ದರು. ದಾಳಿಕೋರರಲ್ಲಿ ಕೆಲವರು ಈ ಹಲ್ಲೆಯ ದೃಶ್ಯಗಳನ್ನು ಚಿತ್ರೀಕರಿಸಿದ್ದರು.
ನಾಲ್ಕು ವರ್ಷವಾದರೂ ನ್ಯಾಯ ಸಿಕ್ಕಿಲ್ಲ
ಘಟನೆ ನಡೆದು ನಾಲ್ಕು ವರ್ಷಗಳಾಗುತ್ತಾ ಬಂದರೂ ಹಲ್ಲೆಗೊಳಗಾದ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಊನಾದ ಗಿರ್ ಸೋಮನಾಥ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಗೆ ಜನವರಿ 7ರಂದು ಸರ್ವಯ್ಯಾ ಕುಟುಂಬದಿಂದ ಅರ್ಜಿಯೊಂದು ಬಂದಿದೆ. 2018ರ ನವೆಂಬರ್ನಲ್ಲಿ ಕೂಡ ಸರ್ವಯ್ಯಾ ಕುಟುಂಬವು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಈ ಪ್ರಕರಣದ ಕುರಿತು ಪತ್ರ ಬರೆದಿತ್ತು. ಘಟನೆ ನಡೆದಾದ ನೀಡಿದ್ದ ಭರವಸೆಗಳನ್ನು ಗುಜರಾತ್ ಸರ್ಕಾರ ಈಡೇರಿಸಿಲ್ಲ ಎಂದು ದೂರಲಾಗಿತ್ತು.
ತಾರತಮ್ಯ ಇಲ್ಲದೆಡೆ ಗಡಿಪಾರು ಮಾಡಿ
'ಊನಾ ಹಲ್ಲೆ ಪ್ರಕರಣವು ನಮ್ಮ ಮೂಲಭೂತ ಹಕ್ಕುಗಳನ್ನು ಮತ್ತು ಉದ್ಯೋಗವನ್ನು ಕಸಿದುಕೊಂಡಿದೆ. ಈಗ ಸರ್ಕಾರದ ಅಧಿಕಾರಿಗಳು ನಾವು ಈ ದೇಶಕ್ಕೇ ಸೇರಿದವರಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ನಮ್ಮನ್ನು ನಾಗರಿಕರು ಎಂದು ಪರಿಗಣಿಸಲು ಸಾಧ್ಯವಾಗದೆ ಹೋದರೆ ನಮ್ಮ ಪೌರತ್ವವು ರದ್ದಾಗಬೇಕಾಗುತ್ತದೆ. ಹಾಗಾದರೆ ನಾವು ಎಲ್ಲಿ ತಾರತಮ್ಯ ಎದುರಿಸುವುದಿಲ್ಲವೋ ಆ ದೇಶಕ್ಕೆ ನಮ್ಮನ್ನು ಗಡಿಪಾರು ಮಾಡಿ' ಎಂದು ವಶ್ರಮ್ ಕೋರಿದ್ದಾರೆ.
ಬಿರಿಯಾನಿ ಮಾರುತ್ತಿದ್ದ ದಲಿತ ವ್ಯಾಪಾರಿ ಮೇಲೆ ಹಲ್ಲೆ
ಸರ್ಕಾರದಿಂದ ಯಾರೂ ಬಂದಿಲ್ಲ
'ಮಾಜಿ ಮುಖ್ಯಮಂತ್ರಿ ಆನಂದಿಬಾಯಿ ಪಟೇಲ್ ಅವರು ಘಟನೆ ನಡೆದ ಸಂದರ್ಭದಲ್ಲಿ ಒಂದು ತಿಂಗಳ ಒಳಗೆ ನಮ್ಮನ್ನು ಮತ್ತೆ ಭೇಟಿ ಮಾಡುವುದಾಗಿ ಹೇಳಿದ್ದರು. ಆದರೆ ಅವರಾಗಲೀ ರಾಜ್ಯ ಸರ್ಕಾರದ ಯಾವುದೇ ಪ್ರತಿನಿಧಿಗಳಾಗಲೀ ನಮ್ಮನ್ನು ಭೇಟಿ ಮಾಡಿಲ್ಲ. ಆಗ ನೀಡಿದ್ದ ಭರವಸೆಗಳನ್ನು ಈಡೇರಿಸಲು ಮುಂದಾಗಿಲ್ಲ' ಎಂದು ನೋವು ಹಂಚಿಕೊಂಡಿದ್ದಾರೆ.
ರಾಷ್ಟ್ರಪತಿ ಭವನದ ಮುಂದೆಯೇ ಆತ್ಮಾಹುತಿ
ತಮ್ಮ ಹಕ್ಕುಗಳ ಬಗ್ಗೆ ರಾಷ್ಟ್ರಪತಿ ಯಾವುದೇ ಖಾತರಿ ನೀಡಲು ಸಾಧ್ಯವಿಲ್ಲದೆ ಹೋದರೆ ದಯಮಾಡಿ ನಮಗೆ ದಯಾಮರಣ ನೀಡಿ ಎಂದು ಕೋರಿರುವ ವಶ್ರಮ್, ತಮ್ಮ ಅರ್ಜಿಯನ್ನು ಪರಿಗಣಿಸದೆಯೇ ಹೋದರೆ ರಾಷ್ಟ್ರಪತಿ ಭವನದ ಮುಂದೆಯೇ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. 'ನ್ಯಾಯ ಕೋರಿ ಹಲವು ಅರ್ಜಿಗಳನ್ನು ಸಲ್ಲಿಸಿದ್ದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಬಂದಿಲ್ಲ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.