ಗುಜರಾತ್ನಲ್ಲಿ ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ
ಅಹಮದಾಬಾದ್, ಏಪ್ರಿಲ್ 8: ಇಡೀ ವಿಶ್ವವನ್ನೇ ನಲುಗಿಸಿರುವ ಕೊರೊನಾ ವೈರಸ್ ಹೋಗಲಾಡಿಸುವ ಲಸಿಕೆ ಕಂಡು ಹಿಡಿಯುವ ಕಾರ್ಯ ಇನ್ನೂ ಪ್ರಗತಿಯಲ್ಲಿದೆ.
ಅದರೆ ಗುಜರಾತ್ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು, ಮೊದಲ ಬಾರಿಗೆ ಕೊರೊನಾ ವೈರಸ್ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡುತ್ತಿದೆ.
ಈ ಹಿಂದೆ ದೇಶದ ಸಾಕಷ್ಟು ಆಯುರ್ವೇದ ತಜ್ಞರು ಕೊರೊನಾ ವೈರಸ್ ಗೆ ಆಯುರ್ವೇದದಲ್ಲಿ ಔಷಧಿ ಇದೆ ಎಂದು ಹೇಳಿದ್ದರು. ಇದೇ ವಿಚಾರವಾಗಿ ಕೇಂದ್ರ ಆಯುಷ್ ಇಲಾಖೆ ಕೂಡ ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡುವ ಸಕಾರಾತ್ಮಕ ಪ್ರತಿಕ್ರಿಯೆ ನೀಡಿತ್ತು.
ಇದೀಗ ಗುಜರಾತ್ ಸರ್ಕಾರ ತನ್ನ ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಲು ಮುಂದಾಗಿದೆ.
ವೈರಸ್ ಲಕ್ಷಣಗಳೇ ಇಲ್ಲದ ಸೋಂಕಿತರ ಮೇಲೆ ಪ್ರಯೋಗ
ಮುಂಜಾಗ್ರತಾ ಕ್ರಮವಾಗಿ ಕೊರೊನಾ ವೈರಸ್ ಲಕ್ಷಣಗಳೇ ಇಲ್ಲದ, ಸಾಮಾನ್ಯರಂತಿರುವ ಕೊರೊನಾ ಸೋಂಕಿತರ ಮೇಲೆ ಈ ಆಯುರ್ವೇದ ಔಷಧಿ ಪ್ರಯೋಗ ನಡೆಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಆ ಮೂಲಕ ಕೊರೋನಾ ಸೋಂಕಿತರ ಮೇಲೆ ಆಯುರ್ವೇದ ಔಷಧಿ ಎಷ್ಟರ ಮಟ್ಟಿಗೆ ಮತ್ತು ಎಷ್ಟು ದಿನಗಳಲ್ಲಿ ತನ್ನ ಪರಿಣಾಮ ಬೀರಲಿದೆ. ಆಯುರ್ವೇದ ಔಷಧದಿಂದ ಸೋಂಕಿತ ಎಷ್ಟರ ಮಟ್ಟಿಗೆ ಗುಣಮುಖನಾಗುತ್ತಾನೆ. ಆತನ ಮೇಲೆ ಔಷಧಿ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲಿದ್ದಾರೆ.
ಸುಮಾರು 75 ಮಂದಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ
ಮೂಲಗಳ ಪ್ರಕಾರ ಕೊರೊನಾ ವೈರಸ್ ಹಾಟ್ ಸ್ಪಾಟ್ ಆಗಿರುವ ಅಹ್ಮದಾಬಾದ್ ನಲ್ಲಿ ಸುಮಾರು 75 ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧಿ ನೀಡಲು ನಿರ್ಧರಿಸಲಾಗಿದೆ.
ಗುಜರಾತ್ನಲ್ಲಿರುವ ಕೊರೊನಾ ಸೋಂಕಿತರ ಸಂಖ್ಯೆ ಎಷ್ಟು?
ಗುಜರಾತ್ ನಲ್ಲಿ ಈ ವರೆಗೂ ಸೋಂಕಿತರ ಸಂಖ್ಯೆ 2,167ಕ್ಕೆ ಏರಿಕೆಯಾಗಿದ್ದು, 102 ಸೋಂಕಿತರು ಸಾವನ್ನಪ್ಪಿದ್ದಾರೆ. ಅಂತೆಯೇ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ 7,778 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇವರೆಲ್ಲರಿಗೂ ಆಯುರ್ವೇದ ಔಷಧಿ ನೀಡಲಾಗುತ್ತಿದ್ದು, ಈ ಪೈಕಿ ಕೇವಲ 21 ಮಂದಿಯಲ್ಲಿ ಮಾತ್ರ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಔಷಧ ತಯಾರಿಕೆಗೆ ಏನೇನು ಬಳಕೆ
ಚಿಕಿತ್ಸೆ ವೇಳೆ ಸೋಂಕಿತರಿಗೆ ಸಂಶಾಮ್ನಿ ವಟಿ, ದಶಮೂಲ ಕ್ವಾತ್, ತ್ರಿಕಟು ಚೂರ್ಣ, ಮತ್ತು ತುಳಸಿ, ಬೇವು, ಅರಿಶಿನಗಳಿಂದ ತಯಾರಿಸಿದ ಔಷಧಿಯನ್ನು ನೀಡಲಾಗುತ್ತದೆ ಎಂದೂ ಜಯಂತಿ ರವಿ ಮಾಹಿತಿ ನೀಡಿದ್ದಾರೆ. ಇದಲ್ಲದೆ, ಅಂತೆಯೇ ಗುಜರಾತ್ ಆಯುಷ್ ಇಲಾಖೆ ವತಿಯಿಂದ ರಾಜ್ಯದಲ್ಲಿ ಸುಮಾರು 1.26 ಕೋಟಿ ಜನರ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಯನ್ನು ಉಚಿತವಾಗಿ ನೀಡಲು ಇಲಾಖೆ ನಿರ್ಧರಿಸಿದೆ.