ಏಕತಾ ಪ್ರತಿಮೆಗೆ ಪ್ರದೇಶದಲ್ಲಿ ಇನ್ನು ಕೇವಲ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಅವಕಾಶ
ಅಹಮದಾಬಾದ್, ಜೂನ್ 7: ಗುಜರಾತ್ನಲ್ಲಿರುವ ಏಕತಾ ಪ್ರತಿಮೆ ಇರುವ ಪ್ರದೇಶ ಭಾರತದ ಪ್ರಥಮ ವಿದ್ಯುತ್ ಚಾಲಿತ ವಾಹನಗಳ ವಲಯ ಎನಿಸಿಕೊಳ್ಳಲಿದೆ. ವಿಶ್ವದ ಬೃಹತ್ ಪ್ರತಿಮೆ ಎನಿಸಿಕೊಂಡಿರುವ ವಲ್ಲಭ್ಭಾಯಿ ಪಟೇಲ್ ಅವರ ಪ್ರತಿಮೆ ಗುಜರಾತ್ನ ಕೆವಾಡಿಯಾದಲ್ಲಿದೆ. ಈ ಪ್ರದೇಶವನ್ನು ಸಂಪೂರ್ಣವಾಗಿ ವಾಹನ ಮಾಲಿನ್ಯದಿಂದ ಮುಕ್ತಗೊಳಿಸಲಾಗುತ್ತದೆ ಎಂದು ಏಕತಾ ಪ್ರತಿಮೆ ಪ್ರದೇಶಾಭಿವೃದ್ಧಿ ಹಾಗೂ ಪ್ರವಾಸೋದ್ಯಮ ಆಡಳಿತ ಪ್ರಾಧಿಕಾರ ತಿಳಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಏಕತಾ ಪ್ರತಿಮೆ ಪ್ರದೇಶಾಭಿವೃದ್ಧಿ ಹಾಗೂ ಪ್ರವಾಸೋದ್ಯಮ ಆಡಳಿತ ಪ್ರಾಧಿಕಾರದ ಜೊತೆಗೆ ನಡೆಸಿದ ಸಭೆಯ ಒಂದು ದಿನದ ಬಳಿಕ ಈ ಘೋಷಣೆಯನ್ನು ಪ್ರಾಧಿಕಾರ ಮಾಡಿದೆ. ವಿದ್ಯುತ್ಚಾಲಿತ ವಾಹನಗಳ ವಲಯವನ್ನಾಗಿ ರೂಪುಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ಅದು ತಿಳಿಸಿದೆ.
ಪ್ರಕೃತಿ ಜೊತೆ ಮಾನವರೂ ಸರ್ವನಾಶ! ವರ್ಷಕ್ಕೆ ಕೋಟಿ ಕೋಟಿ ಮರ ಉಡೀಸ್!
ಭಾನುವಾರ ಈ ಬಗ್ಗೆ ಪ್ರಾಧಿಕಾರ ತನ್ನ ಅಧಿಕೃತ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು 182 ಮೀಟರ್ ಎತ್ತರದ ಪ್ರತಿಮೆ ಹೊಂದಿರುವ ಸುತ್ತಮುತ್ತಲಿನ ಪ್ರದೇಶವನ್ನು ಹಂತಹಂತವಾಗಿ "ಎಲೆಕ್ಟ್ರಿಕ್ ವೆಹಿಕಲ್ ಓನ್ಲಿ ಝೋನ್" ಆಗಿ ರೂಪಿಸಲಾಗುತ್ತದೆ ಎಂದು ತಿಳಿಸಿದೆ.
"ಪ್ರಾಧಿಕಾರದ ಅಡಿಯಲ್ಲಿ ಬರುವ ಪ್ರದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರವೇ ಅನುಮತಿಯನ್ನು ನೀಡಲಾಗುತ್ತದೆ. ಪ್ರವಾಸಿಗರಿಗೆ ಲಭ್ಯವಿರುವ ಬಸ್ಗಳು ಕೂಡ ಡೀಸೆಲ್ ಬದಲಿಗೆ ಬ್ಯಾಟರಿಯಿಂದ ಚಲಿಸಲಿದೆ" ಎಂದು ಪ್ರಾಧಿಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಯೋಜನೆಯ ಪ್ರಕಾರ ಪ್ರತಿಮೆ ಸುತ್ತಲಿನ ಪ್ರದೇಶದ ಆಸಕ್ತರಿಗೆ ವಿದ್ಯುತ್ ಚಾಲಿತ ತ್ರಿಚಕ್ರ ವಾಹನಗಳನ್ನು ಖರೀದಿಸಲು ಸೂಚಿಸಲಾಗುತ್ತದೆ. ಏಕತಾ ಪ್ರತಿಮೆ ಪ್ರದೇಶಾಭಿವೃದ್ಧಿ ಹಾಗೂ ಪ್ರವಾಸೋದ್ಯಮ ಆಡಳಿತ ಪ್ರಾಧಿಕಾರ ಇದಕ್ಕಾಗಿ ಸಬ್ಸಿಡಿಯನ್ನು ಕೂಡ ಅಲ್ಲಿನ ಜನರಿಗೆ ನೀಡಲಿದೆ. ಸಾರ್ವಜನಿಕ ಸೇವೆಗೆ ಈ ತ್ರಿಚಕ್ರವಾಹನಗಳನ್ನು ಬಳಸಿಕೊಳ್ಳುವ ಯೋಜನೆ ಇದಾಗಿದೆ. 50 ಎಲೆಕ್ಟ್ರಿಕ್ ರಿಕ್ಷಾಗಳನ್ನು ಈ ಭಾಗದಲ್ಲಿ ಸೇವೆಗಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದು ಸ್ಥಳೀಯ ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಲು ನಿರ್ಧರಿಸಲಾಗಿದೆ. ಜೊತೆಗೆ ಕೆವಾಡಿಯಾದಲ್ಲಿರುವ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಈ ಪ್ರದೇಶದಲ್ಲಿ ಚಾರ್ಚಿಂಗ್ ಕೇಂದ್ರಗಳನ್ನು ಕೂಡ ನಿರ್ಮಿಸಲಾಗುತ್ತದೆ ಎಂದು ಮೂಲಗಳು ತಿಳಿಸಿದೆ.
"ಈ ಮೂಲಕ ಕೆವಾಡಿಯಾ ಪ್ರದೇಶದಲ್ಲಿ ಯಾವುದೇ ಮಾಲಿನ್ಯಗೊಳಿಸುವಂತಾ ಕಾರ್ಖಾನೆಗಳು ಇಲ್ಲ, ಎರಡು ಜಲವಿದ್ಯುತ್ ಸ್ಥಾವರಗಳು ಇದ್ದು ಹೇರಳವಾಗಿ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದಿಸಲಾಗುತ್ತದೆ ಎಂದು ಉಲ್ಲೇಖಿಸಬಹುದು. ಇವುಗಳ ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಇಲ್ಲಿ ಅವಕಾಶವನ್ನು ನೀಡುವುದರಿಂದ ಗಾಳಿ ಮತ್ತು ಶಬ್ದ ಮಾಲಿನ್ಯ ಕಡಿಮೆಯಾಗುತ್ತದೆ. ಈ ಮೂಲಕ ವಿಶೇಷವಾದ ಪ್ರವಾಸಿ ತಾಣದ ಮುಕುಟಕ್ಕೆ ಮತ್ತೊಂದು ಗರಿ ಸೇರುತ್ತದೆ" ಎಂದು ಏಕತಾ ಪ್ರತಿಮೆ ಪ್ರದೇಶಾಭಿವೃದ್ಧಿ ಹಾಗೂ ಪ್ರವಾಸೋದ್ಯಮ ಆಡಳಿತ ಪ್ರಾಧಿಕಾರ ತಿಳಿಸಿದೆ.
ಇನ್ನು ಕೆವಾಡಿಯಾದಲ್ಲಿ ಭಾರತದ ಎಲೆಕ್ಟ್ರಿಕ್ ವಾಹನ ಪ್ರವಾಸೋದ್ಯವನ್ನು ಕೂಡ ಪ್ರಾರಂಭಿಸಲಾಗಿದೆ. ಪರಿಸರ ಸ್ನೇಹಿ ಇ-ಬೈಕ್ಗಳ ಸೇವೆಯನ್ನು ನೀಡಲಾಗುತ್ತಿದ್ದು ಎರಡು ಗಂಟೆಗೆ 1500 ರೂಪಾಯಿ ವಿಧಿಸಲಾಗುತ್ತಿದೆ.