ಸಂಜೆ ತೀವ್ರಗೊಳ್ಳಲಿದೆ ತೌಕ್ತೆ ಚಂಡಮಾರುತ; ಗುಜರಾತ್ನಲ್ಲಿ ಲಕ್ಷ ಮಂದಿ ಸ್ಥಳಾಂತರ
ಅಹಮದಾಬಾದ್, ಮೇ 17: ಸೋಮವಾರ ಸಂಜೆ ವೇಳೆಗೆ ಗುಜರಾತ್ ಕರಾವಳಿ ಪ್ರದೇಶದಲ್ಲಿ ತೌಕ್ತೆ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಚಂಡಮಾರುತ ಅಪ್ಪಳಿಸುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುಜರಾತ್ನ ಕರಾವಳಿ ಪ್ರದೇಶಗಳಲ್ಲಿ ವಾಸವಾಗಿರುವ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭಾನುವಾರ ತಡರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೂ ಜನರನ್ನು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಸಲಾಗಿದೆ.
ತೌಕ್ತೆ ಚಂಡಮಾರುತ: ಗುಜರಾತ್ ಮತ್ತು ಕರಾವಳಿಯಲ್ಲಿ ಹೇಗಿರಲಿದೆ ವಾತಾವರಣ?
ತೌಕ್ತೆ ಚಂಡಮಾರುತದಿಂದಾಗಿ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೂ ಗುಜರಾತ್ನ 21 ಜಿಲ್ಲೆಗಳಲ್ಲಿ ಮಳೆ ದಾಖಲಾಗಿದೆ. ಸೋಮವಾರ ಸಂಜೆ ವೇಳೆಗೆ ತೌಕ್ತೆ ಚಂಡಮಾರುತ ತೀವ್ರಗೊಳ್ಳಲಿದ್ದು ರಾತ್ರಿ 8 ರಿಂದ 11ರ ನಡುವೆ ರಾಜ್ಯ ಕರಾವಳಿಯನ್ನು ದಾಟಲಿದೆ. ಪೋರ್ ಬಂದರ್ ಹಾಗೂ ಭಾವನಗರ ಜಿಲ್ಲೆಯ ಮಹುವಾ ನಡುವೆ ರಾತ್ರಿ ಹಾದುಹೋಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ಸಂಜೆ ಸೌರಾಷ್ಟ್ರ ಹಾಗೂ ಗುಜರಾತ್ನ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಎಚ್ಚರಿಕೆ ರವಾನಿಸಿದೆ. ಹೀಗಾಗಿ ಜನರನ್ನು ಸ್ಥಳಾಂತರ ಮಾಡಲಾಗಿದೆ.
ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಮತ್ತು ದಕ್ಷಿಣ ಗುಜರಾತ್ ಹಾಗೂ ದಾಮನ್ ದಿಯು ಕರಾವಳಿ ಉದ್ದಕ್ಕೂ ಮೇ 17ರಂದು ಬೆಳಗ್ಗೆ ಚಂಡಮಾರುತ ಪ್ರತಿ ಗಂಟೆಗೆ 40-50 ಕಿ.ಮೀ. ವೇಗದಿಂದ 60 ಕಿ.ಮೀ. ವೇಗದಲ್ಲಿ ಸಾಗುವ ಸಾಧ್ಯತೆಯಿದೆ ಎಂದು ಈ ಹಿಂದೆ ಹವಾಮಾನ ಇಲಾಖೆ ತಿಳಿಸಿತ್ತು.