ಜಾಹೀರಾತು ವಿವಾದ: ಗುಜರಾತ್ ತನಿಷ್ಕ್ ಆಭರಣ ಮಳಿಗೆ ಮೇಲಿನ ದಾಳಿ ವರದಿ ಸುಳ್ಳು
ಅಹಮದಾಬಾದ್, ಅಕ್ಟೋಬರ್ 14: ಅಂತರ್ ಧರ್ಮೀಯ ಕುಟುಂಬದ ಸೀಮಂತ ಕಾರ್ಯಕ್ರಮದ ಜಾಹೀರಾತಿನ ವಿವಾದದ ನಡುವೆ ಗುಜರಾತ್ನ ಕಚ್ ಜಿಲ್ಲೆಯ ಗಾಂಧಿಧಾಮ ಪಟ್ಟಣದಲ್ಲಿ ತನಿಷ್ಕ್ ಆಭರಣ ಮಳಿಗೆಯ ಮೇಲೆ ಸೋಮವಾರ ರಾತ್ರಿ ಜನರ ಗುಂಪೊಂದು ದಾಳಿ ನಡೆಸಿತ್ತು ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದು ಸತ್ಯವಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಗಾಂಧಿಧಾಮದಲ್ಲಿರುವ ತನಿಷ್ಕ್ ಮಳಿಗೆಗೆ ಅಕ್ಟೋಬರ್ 12ರಂದು ಭೇಟಿ ನೀಡಿದ್ದ ಇಬ್ಬರು ವ್ಯಕ್ತಿಗಳು, ಗುಜರಾತಿ ಭಾಷೆಯಲ್ಲಿ ಕ್ಷಮಾಪಣೆ ಪತ್ರ ಬರೆದುಕೊಡುವಂತೆ ಮಾಲೀಕನಿಗೆ ಸೂಚಿಸಿದ್ದರು ಎಂದು ಕಚ್ (ಪೂರ್ವ) ಎಸ್ಪಿ ಮಯೂರ್ ಪಾಟೀಲ್ ತಿಳಿಸಿದ್ದಾರೆ.
ಜಾಹೀರಾತು ವಿವಾದಕ್ಕೆ ಕ್ಷಮೆ ಕೋರಿದ ತನಿಷ್ಕ್: ತಣಿಯದ ನೆಟ್ಟಿಗರ ಆಕ್ರೋಶ
'ಅವರು ಹೇಳಿದಂತೆ ಮಳಿಗೆ ಮಾಲೀಕ ಕ್ಷಮಾಪಣೆ ಪತ್ರವನ್ನು ಬರೆದುಕೊಟ್ಟಿದ್ದ. ಆದರೆ ಆತನಿಗೆ ಕಚ್ನಿಂದ ಬೆದರಿಕೆ ಕರೆಗಳು ಬರುತ್ತಿವೆ. ಆಭರಣ ಮಳಿಗೆಯ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಲಾಗಿದೆ ಎಂಬ ಸುದ್ದಿಗಳು ಸುಳ್ಳು' ಎಂದು ಪಾಟೀಲ್ ಹೇಳಿದ್ದಾರೆ.
ಅವಹೇಳನಾಕಾರಿ ಜಾಹೀರಾತು: ನಟ ಅಕ್ಷಯ್ ಕುಮಾರ್ ವಿರುದ್ಧ ಮರಾಠ ಸಂಘಟನೆ ದೂರು
ಗಾಂಧಿಧಾಮದಲ್ಲಿನ ತನಿಷ್ಕ್ ಮಳಿಗೆಯ ಮ್ಯಾನೇಜರ್ ರಾಹುಲ್ ಮನುಜಾ ಕೂಡ ಈ ದಾಳಿಯ ವರದಿಗಳನ್ನು ನಿರಾಕರಿಸಿದ್ದಾರೆ. 'ಮಳಿಗೆ ಮೇಲೆ ದಾಳಿ ನಡೆದಿಲ್ಲ. ಆದರೆ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಪೊಲೀಸರು ನಮಗೆ ಬೆಂಬಲ ನೀಡಿದ್ದಾರೆ' ಎಂದು ರಾಹುಲ್ ತಿಳಿಸಿದ್ದಾರೆ.