ಜೆಎನ್ಯುದಲ್ಲಿ ಪೊಲೀಸ್ ಠಾಣೆ ಆರಂಭಿಸಿ: ಸುಬ್ರಮಣಿಯನ್ ಸ್ವಾಮಿ
ಅಹ್ಮದಾಬಾದ್, ಜನವರಿ 11: ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಒತ್ತು ನೀಡಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಸಂಸದ ಸುಬ್ರಮಣಿಯನ್ ಸ್ವಾಮಿ, ವಿದ್ಯಾರ್ಥಿಗಳು ಸುರಕ್ಷಿತವಾಗಿರುವಂತೆ ಮಾಡಲು ವಿಶ್ವವಿದ್ಯಾಲಯದ ಆವರಣಗಳಲ್ಲಿ ಪೊಲೀಸ್ ಸ್ಟೇಷನ್ಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
ಅಹ್ಮದಾಬಾದ್ನಲ್ಲಿ ಶುಕ್ರವಾರ 'ನಾವು ಯಾರು? ರಾಷ್ಟ್ರೀಯ ಅಸ್ಮಿತೆಯ ಪ್ರಶ್ನೆ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
"ಜೆಎನ್ ಯು ಹಿಂಸಾಚಾರದ ಹಿಂದೆ ಎಡಪಂಥೀಯ ವಿದ್ಯಾರ್ಥಿಗಳ ಕೈವಾಡ"
'ಸುರಕ್ಷತೆ ಎಂದರೆ ಕ್ಯಾಂಪಸ್ ಆವರಣದಲ್ಲಿ ಪೊಲೀಸ್ ಸ್ಟೇಷನ್ಗಳನ್ನು ಹೊಂದುವ ಮೂಲಕ ಪೊಲೀಸ್ ಹಾಜರಾತಿಯನ್ನು ಖಚಿತಪಡಿಸುವುದು. ಇಂದು ನಾವು ಏನಾದರೂ ಅಹಿತಕರ ಘಟನೆ ನಡೆದರೆ ಪೊಲೀಸರನ್ನು ಕರೆಸಬೇಕು. ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ದೇಶದಲ್ಲಿನ ವಿಶ್ವವಿದ್ಯಾಲಯಗಳ ಆವರಣದಲ್ಲಿ ಪೊಲೀಸ್ ಠಾಣೆ ಹೊಂದುವುದು ಮುಖ್ಯವಾಗಿದೆ. ಇದು ಜೆಎನ್ಯುಗೆ ಮಾತ್ರವಲ್ಲ, ಆದರೆ ನಾವು ಇದನ್ನು ಜೆಎನ್ಯುದಿಂದ ಆರಂಭಿಸಬೇಕು' ಎಂದರು.
ಜೆಎನ್ಯುಗೆ ಸಿಆರ್ಪಿಎಫ್ ಕೂಡ ಬೇಕು
ಅಮೆರಿಕದಲ್ಲಿ ಪ್ರತಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ನಲ್ಲಿಯೂ ಒಂದು ಪೊಲೀಸ್ ಠಾಣೆ ಇರುತ್ತದೆ. ಅದೇ ರೀತಿ ಭಾರತದಲ್ಲಿಯೂ ಪೊಲೀಸ್ ಠಾಣೆಗಳನ್ನು ಸ್ಥಾಪಿಸಬೇಕು. ಆದರೆ ಜೆಎನ್ಯುಗೆ ದೆಹಲಿ ಪೊಲೀಸರು ಮಾತ್ರವಲ್ಲ, ಅಲ್ಲಿ ಬಿಎಸ್ಎಫ್ ಮತ್ತು ಸಿಆರ್ಪಿಎಫ್ ಶಿಬಿರವೂ ಇರಬೇಕು ಎಂದು ಹೇಳಿದರು.
ಜೆಎನ್ ಯು ಹಿಂಸಾಚಾರ: ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಅಸಲಿ ಸತ್ಯ
ಅಲ್ಲಿರಲೆಂದೇ ಫೇಲ್ ಆಗುತ್ತಾರೆ
'ಎರಡು ವರ್ಷಗಳವರೆಗೆ ಜೆಎನ್ಯುವನ್ನು ಮುಚ್ಚದೆ ಹೋದರೆ ಅದು ಎಂದಿಗೂ ಸುಧಾರಣೆಯಾಗುವುದಿಲ್ಲ. ಅವಿದ್ಯಾವಂತ ಮತ್ತು ಅನರ್ಹ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಉದ್ದೇಶಪೂರ್ವಕವಾಗಿ ಪ್ರವೇಶಾತಿ ನೀಡಲಾಗಿತ್ತು. ಜೆಎನ್ಯು ವಿದ್ಯಾರ್ಥಿ ನಿಲಯದ ಶುಲ್ಕ ತಿಂಗಳಿಗೆ ಹತ್ತು ರೂಪಾಯಿ ಇದೆ. ಅಲ್ಲಿ 35-40 ವರ್ಷದ ವಿದ್ಯಾರ್ಥಿಗಳಿದ್ದು, ಪ್ರತಿ ವರ್ಷವೂ ಅನುತ್ತೀರ್ಣರಾಗುತ್ತಿರುತ್ತಾರೆ. ಜೆಎನ್ಯುದ ವಿದ್ಯಾರ್ಥಿಗಳಿಗೆ ಇರುವುದು ಒಂದೇ ಒಂದು ಗುರಿ, ದೆಹಲಿಯ ಕ್ಯಾಂಪಸ್ನಲ್ಲಿ ಬದುಕಲು ಜಾಗ ಪಡೆದುಕೊಳ್ಳುವುದು ಮತ್ತು ದೇಶದಾದ್ಯಂತ ಪ್ರಯಾಣ ಮಾಡಿ ಸಮಾಜವಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು' ಎಂದು ಕಿಡಿಕಾರಿದರು.
ಸಮಾಜವಾದಿಗಳೇ ತುಂಬಿದ್ದಾರೆ
'ಬಹುಸಂಖ್ಯೆಯ ಪ್ರೊಫೆಸರ್ಗಳು ಸಮಾಜವಾದಿಗಳು. ಸಮಾಜವಾದಿಗಳಲ್ಲದವರನ್ನು ತಡೆಯಲಾಗುತ್ತದೆ. ಅಂತಹ ಅನೇಕ ನಿದರ್ಶನಗಳ ಬಳಿಕ, ಈಗ ಪರಿಸ್ಥಿತಿಯನ್ನು ತಿದ್ದಲು ಸಾಧ್ಯವಾಗುತ್ತಿಲ್ಲ. ಅದನ್ನು ಎರಡು ವರ್ಷ ಮುಚ್ಚುವ ಮೂಲಕ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕು. ಜೆಎನ್ಯುದಲ್ಲಿನ ಉತ್ತಮ ವಿದ್ಯಾರ್ಥಿಗಳಿಗೆ ದೆಹಲಿ ವಿಶ್ವವಿದ್ಯಾಲಯ ಮತ್ತು ಅಂಬೇಡ್ಕರ್ ವಿಶ್ವವಿದ್ಯಾಲಯ ಹಾಗೂ ಸಮೀಪದ ಇತರೆಡೆ ಅವಕಾಶ ನೀಡಬೇಕು. ಉಳಿದವರನ್ನು ಅಗತ್ಯ ಸ್ವಚ್ಛತಾ ಕಾರ್ಯದ ಬಳಿಕ ವಜಾಗೊಳಿಸಬೇಕು. ಅದನ್ನು ಮತ್ತೆ ಪ್ರಾರಂಭಿಸಬಹುದು' ಎಂದು ಹೇಳಿದರು.
ತುಕ್ಡೆ ತುಕ್ಡೆ ಗ್ಯಾಂಗ್ ಜತೆ ನಿಂತ ದೀಪಿಕಾ ಪಡುಕೋಣೆ: ಸ್ಮೃತಿ ಇರಾನಿ ಕಿಡಿ
ಜೆಎನ್ಯುಗೆ ಬೋಸ್ ಹೆಸರು
ಇದರ ಜತೆಗೆ ಅವರು ಜೆಎನ್ಯು ಹೆಸರನ್ನು ಬದಲಿಸುವುದರ ಕುರಿತು ಕೂಡ ಪ್ರಸ್ತಾಪಿಸಿದರು. ಇದು ಜೆಎನ್ಯುದ ಹೆಸರನ್ನು ಕೆಡಿಸುವಂತೆ ಕಂಡರೆ ವಿಶ್ವವಿದ್ಯಾಲಯದ ಹೆಸರನ್ನು ಸಹ ಬದಲಿಸಲಾಗುವುದು. ಜೆಎನ್ಯು ಹೆಸರನ್ನು ಸುಭಾಷ್ ಚಂದ್ರ ಬೋಸ್ ವಿಶ್ವವಿದ್ಯಾಲಯ ಎಂದು ಬದಲಿಸಿ ಅದನ್ನು ಪುನರಾರಂಭಿಸಲಾಗುವುದು ಎಂದರು.