ಸ್ಮೃತಿ ಸವಾಲು; ನಿಮಗೆ ತಾಕತ್ತಿದ್ದರೆ ಗುಜರಾತ್ನಿಂದ ಸ್ಪರ್ಧಿಸಿ ನೋಡಿ
ಗುಜರಾತ್, ಫೆಬ್ರುವರಿ 16: "ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಾಕತ್ತಿದ್ದರೆ ಗುಜರಾತ್ನ ಚಹಾ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಲಿ, ಗುಜರಾತ್ನಿಂದ ಚುನಾವಣೆಗೆ ಸ್ಪರ್ಧಿಸಿ ನೋಡಲಿ" ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಸವಾಲು ಹಾಕಿದ್ದಾರೆ.
ಗುಜರಾತ್ ಹಾಗೂ ಗುಜರಾತ್ ಜನರ ಮೇಲೆ ಕಾಂಗ್ರೆಸ್ ದ್ವೇಷ ಹಾಗೂ ಪೂರ್ವಗ್ರಹ ಪೀಡಿತವಾಗಿದೆ. ಇದೇನೂ ಹೊಸ ವಿಷಯವಲ್ಲ. ರಾಹುಲ್ ಗಾಂಧಿ ಹಾಗೂ ಅವರ ಪಕ್ಷ ಗುಜರಾತ್ನಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆ ನಿರ್ಮಾಣಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲವೇ ಎಂದು ಆರೋಪಿಸಿದ್ದಾರೆ.
ದೇಶದ ಜನತೆ ವಿರುದ್ಧ ರಾಹುಲ್ ಗಾಂಧಿ ಯುದ್ಧ: ಸ್ಮೃತಿ ಇರಾನಿ ಕಿಡಿ
ಅಸ್ಸಾಂನಲ್ಲಿ ಚುನಾವಣಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, "ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಚಹಾ ಕಾರ್ಮಿಕರ ದಿನಗೂಲಿಯನ್ನು ಹೆಚ್ಚಿಸುತ್ತೇನೆ. ಚಹಾ ತೋಟದ ಮಾಲೀಕರು ಆ ಹಣವನ್ನು ನೀಡುವಂತೆ ಮಾಡುತ್ತೇನೆ" ಎಂದು ಹೇಳಿದ್ದರು.
ಈ ಹೇಳಿಕೆಗೆ ಮಂಗಳವಾರ ಗುಜರಾತ್ನ ನವಸಾರಿ ಜಿಲ್ಲೆಯ ವನ್ಸದಾ ನಗರದಲ್ಲಿ ಪ್ರಚಾರ ಮೆರವಣಿಗೆ ಸಂದರ್ಭ ಸ್ಮೃತಿ ಇರಾನಿ ಪ್ರತಿಕ್ರಿಯೆ ನೀಡಿದ್ದು, "ಈ ಹಿಂದೆ ಕಾಂಗ್ರೆಸ್ನವರಿಗೆ ಟೀ ಮಾರುವವರ ಬಗ್ಗೆ (ನರೇಂದ್ರ ಮೋದಿ) ಆಕ್ಷೇಪವಿತ್ತು. ಇದೀಗ ಚಹಾ ಕುಡಿಯುವವರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ" ಎಂದು ತಿರುಗೇಟು ನೀಡಿದರು.
"ನಿಮಗೆ ತಾಕತ್ತಿದ್ದರೆ ಗುಜರಾತ್ ನಿಂದ ಸ್ಪರ್ಧೆ ಮಾಡಿ. ಆಗ ನಿಮ್ಮ ಎಲ್ಲಾ ತಪ್ಪು ತಿಳಿವಳಿಕೆಗಳೂ ಕೊನೆಯಾಗುತ್ತವೆ" ಎಂದು ಸವಾಲು ಹಾಕಿದರು.