ಅಹಮದಾಬಾದ್ ''ಮಿನಿ ಪಾಕಿಸ್ತಾನ'' ಎಂದ ಸಂಜಯ್, ಬಿಜೆಪಿ ಗರಂ
ಅಹಮದಾಬಾದ್, ಸೆ. 7: ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಅಹಮದಾಬಾದ್ ಮಿನಿ ಪಾಕಿಸ್ತಾನ ಇದ್ದಂತೆ ಎನ್ನುವ ಮೂಲಕ ಗುಜರಾತಿನ ಜನತೆಯ ಭಾವನೆಗೆ ಧಕ್ಕೆ ತಂದಿದ್ದಾರೆ, ತಕ್ಷಣವೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ನಟಿ ಕಂಗನಾ ರನೌತ್ ಅವರು ಮುಂಬೈ ಒಂದು ರೀತಿ ಪಾಕ್ ಆಕ್ರಮಿತ ಕಾಶ್ಮೀರವಾಗಿಬಿಟ್ಟಿದೆ ಎಂದು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಂಜಯ್ ಅವರು ಅಹಮಹಾಬಾದ್ ಕೂಡಾ ಮಿನಿ ಪಾಕಿಸ್ತಾನದಂತಿದೆ ಎಂದಿದ್ದರು.
ಸುಶಾಂತ್ ಸಿಂಗ್ ಪ್ರಕರಣ: ಶಿವಸೇನಾ ಮುಖಂಡನಿಗೆ ಲೀಗಲ್ ನೊಟೀಸ್
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರು, ಮಹಾರಾಷ್ಟ್ರ ಸರ್ಕಾರ ವಿಳಂಬ ನೀತಿ ಅನುಸರಿಸಿದೆ ಎಂದು ಆಡಳಿತ ಪಕ್ಷದ ವಿರುದ್ಧ ಕಂಗನಾ ಕಿಡಿಕಾರಿದ್ದರು. ಕಂಗನಾ ಹೇಳಿಕೆಯನ್ನು ಖಂಡಿಸುತ್ತಾ ಬಂದಿರುವ ಸಂಜಯ್ ಮಾತನಾಡಿ, ಆ ಯುವತಿ ಮುಂಬೈ ಹಾಗೂ ಮಹಾರಾಷ್ಟ್ರದ ಕ್ಷಮೆಯಾಚಿಸಬೇಕು, ಮುಂಬೈಯನ್ನು ಮಿನಿ ಪಾಕಿಸ್ತಾನ ಎಂದು ಕರೆದಿದ್ದಾಳೆ. ಇದನ್ನೇ ಆಕೆ ಅಹಮದಾಬಾದ್ ಗೂ ಕೂಡಾ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು.
ಸಂಜಯ್ ಅವರ ಹೇಳಿಕೆ ಖಂಡಿಸಿರುವ ಗುಜರಾತ್ ಬಿಜೆಪಿ ವಕ್ತಾರ ಭರತ್ ಪಾಂಡ್ಯ ಅವರು ಸೇನಾ ಮುಖಂಡ ಅಹಮದಾಬಾದ್ ನಗರಕ್ಕೆ ಅಪಮಾನ ಮಾಡಿದ್ದಾರೆ. ಗುಜರಾತ್, ಅಹಮಹಾಬಾದ್ ಹಾಗೂ ಅಂದವಾಡಿಸ್ ಕ್ಷಮೆಯಾಚಬೇಕು ಎಂದಿದ್ದಾರೆ.
ಗಾಂಧೀಜಿ, ಸರ್ದಾರ್ ಪಟೇಲ್ ಅವರ ನಾಡು ಗುಜರಾತ್ ಬಗ್ಗೆ ಈ ರೀತಿ ಹೇಳಿಕೆ ನೀಡುವುದನ್ನು ಶಿವಸೇನೆ ನಿಲ್ಲಿಸಬೇಕು. ಪಟೇಲ್ ಅವರು ದೇಶದಲ್ಲಿ ಏಕತೆ ರೂಪಿಸಿದವರು. ಸುಮಾರು 562 ರಾಜ್ಯಗಳನ್ನು ಒಗ್ಗೂಡಿಸಿ ಅಖಂಡ ಭಾರತವನ್ನು ನಮ್ಮ ಮುಂದಿಟ್ಟಿದ್ದಾರೆ. ಪಾಕಿಸ್ತಾನದ ಕೈ ಸೇರಬಹುದಾಗಿದ್ದ ಜುನಾಗಢ್ ಹಾಗ್ ಹಾಗೂ ಹೈದರಾಬಾದ್ ಕೂಡಾ ಭಾರತದಲ್ಲೇ ಉಳಿಯುವಂತೆ ಮಾಡಿದ್ದನ್ನು ಮರೆಯುವಂತಿಲ್ಲ ಎಂದು ಪಾಂಡ್ಯ ಹೇಳಿದರು.
ಪಟೇಲ್ ಅವರ ಕನಸಿನಂತೆ ಆರ್ಟಿಕಲ್ 370 ರದ್ದಾಗಿದೆ. ಕಾಶ್ಮೀರದಲ್ಲಿ ಹೊಸ ಆಡಳಿತ ಬಂದಿದೆ. ದೇಶದ ಜನತೆಯ ಆಶಯದಂತೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಶಾಂತಿ ನೆಲೆಸುವಂತೆ ಮಾಡಿದ್ದಾರೆ. ಅವರಿಬ್ಬರೂ ಗುಜರಾತಿನವರು ಎಂಬುದನ್ನು ಮರೆಯಬೇಡಿ ಎಂದು ಸಂಜಯ್ ರನ್ನು ಎಚ್ಚರಿಸಿದ್ದಾರೆ.