ಏಕತಾ ಪ್ರತಿಮೆ: 5.24 ಕೋಟಿ ರೂ. ಟಿಕೆಟ್ ಮಾರಾಟ ಹಣ ಕಬಳಿಕೆ ಆರೋಪ
ಅಹಮದಾಬಾದ್, ಡಿಸೆಂಬರ್ 2: ಗುಜರಾತ್ನ ನರ್ಮದಾ ಜಿಲ್ಲೆಯ ಏಕತೆಯ ಪ್ರತಿಮೆಯ ಟಿಕೆಟ್ ಮಾರಾಟದಿಂದ ಸಂಗ್ರಹಿಸಿದ 5.24 ಕೋಟಿ ರೂ ಮೊತ್ತದ ಹಣವನ್ನು ಶುಲ್ಕ ಸಂಗ್ರಹ ಸಂಸ್ಥೆಯ ಕೆಲವು ಉದ್ಯೋಗಿಗಳು ಕಬಳಿಸಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
2018ರ ಅಕ್ಟೋಬರ್ನಲ್ಲಿ ಅನಾವರಣಗೊಂಡ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆಯು ಗುಜರಾತ್ನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಬೆಳೆದಿದ್ದು, ದೇಶವಿದೇಶಗಳ ಪ್ರವಾಸಿಗರು ನದಿ ತೀರದಲ್ಲಿ ನಿರ್ಮಾಣವಾಗಿರುವ ಈ ಬೃಹತ್ ಪ್ರತಿಮೆ ವೀಕ್ಷಣೆಗೆ ತೆರಳುತ್ತಿದ್ದಾರೆ.
Olxನಲ್ಲಿ ಏಕತಾ ಪ್ರತಿಮೆಗೆ 30 ಸಾವಿರ ಕೋಟಿ ರು ಫಿಕ್ಸ್ ಏಕೆ?
ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿರುವ ಏಕತೆ ಪ್ರತಿಮೆ ನಿರ್ವಹಣೆ ಸಂಸ್ಥೆಯು ಕಳೆದ ಒಂದೂವರೆ ವರ್ಷದಿಂದ ಪ್ರವೇಶ ಶುಲ್ಕದ ಹಣವನ್ನು ಸಂಗ್ರಹಿಸುತ್ತಿದ್ದು, ವಡೋದರಾದ ಖಾಸಗಿ ಬ್ಯಾಂಕ್ವೊಂದು ನೇಮಿಸಿಕೊಂಡ ನಗದು ಸಂಗ್ರಹ ಸಂಸ್ಥೆಗೆ ಟಿಕೆಟ್ ನಿರ್ವಹಣೆ ಜವಾಬ್ದಾರಿ ಹಸ್ತಾಂತರಿಸಲಾಗಿತ್ತು.
ಆದರೆ ಈ ಸಂಸ್ಥೆಯ ಕೆಲವು ಸಿಬ್ಬಂದಿ ಇದುವರೆಗೂ ಒಟ್ಟು 5,24,77,375 ರೂ. ಮೊತ್ತವನ್ನು ಏಕತಾ ಪ್ರತಿಮೆ ಪ್ರಾಧಿಕಾರದ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಲ್ಲ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ವಾಣಿ ದುಧಾಟ್ ತಿಳಿಸಿದ್ದಾರೆ.
ವಿಶ್ವದ ಅತೀ ಎತ್ತರದ ಪ್ರತಿಮೆಗಳು: ಭಾರತದ ಏಕತಾ ಪ್ರತಿಮೆಗೆ ಅಗ್ರಸ್ಥಾನ
ನಗದು ಸಂಗ್ರಹ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಖಾಸಗಿ ಬ್ಯಾಂಕ್ನ ಮ್ಯಾನೇಜರ್ ಸೋಮವಾರ ರಾತ್ರಿ ಕೆವಾಡಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ವಿಚಾರದಲ್ಲಿ ಏಕತೆ ಪ್ರತಿಮೆ ಪ್ರಾಧಿಕಾರ ಭಾಗಿಯಾಗಿಲ್ಲ. ಇದು ಬ್ಯಾಂಕ್ ಮತ್ತು ಶುಲ್ಕ ಸಂಗ್ರಹಣಾ ಸಂಸ್ಥೆ ನಡುವಿನ ವಿಚಾರ. ಬ್ಯಾಂಕ್ ಈಗಾಗಲೇ ನಮ್ಮ ಖಾತೆಗಳಿಗೆ ಹಣ ಜಮೆಮಾಡಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.