ಲೋಕಸಭಾ ಚುನಾವಣೆ : ಕ್ರಿಕೆಟರ್ ರವೀಂದ್ರ ಜಡೇಜ ಪತ್ನಿ ಬಿಜೆಪಿಗೆ ಸೇರ್ಪಡೆ
ಜಾಮ್ ನಗರ್(ಗುಜರಾತ್), ಮಾರ್ಚ್ 04: ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಭಾನುವಾರದಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಗುಜರಾತಿನ ಕೃಷಿ ಸಚಿವ ಆರ್ ಸಿ ಫಾಲ್ದು ಹಾಗೂ ಸಂಸದರಾದ ಪೂನಮ್ ಮದಂ ಅವರು ಉಪಸ್ಥಿತರಿದ್ದರು.
ಜೈಪುರದಲ್ಲಿ ಕಾರ್ನಿ ಸೇನೆ ಪರ ಕ್ರಿಕೆಟರ್ ಜಡೇಜ ಪತ್ನಿ ಪ್ರಚಾರ
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಂದು ಜಾಮ್ ನಗರದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕೂ ಮುನ್ನ ರಿವಾಬಾ ಅವರ ಕೈಗೆ ಕೇಸರಿ ಬಾವುಟ ಸಿಕ್ಕಿದೆ. ರಿವಾಬಾ ಅವರು ಕರ್ಣಿ ಸೇನಾದ ಮಹಿಳಾ ಘಟಕದ ಮುಖ್ಯಸ್ಥೆಯಾಗಿ, ಸಾಕಷ್ಟು ಹೆಸರು ಗಳಿಸಿದ್ದಾರೆ.
ಲೋಕಸಭಾ ಚುನಾವಣೆಗೂ ಮುನ್ನ ಸೆಲೆಬ್ರಿಟಿಗಳಿಗೆ ಗಾಳ ಹಾಕುತ್ತಿರುವ ಬಿಜೆಪಿ ಈಗಾಗಲೇ ಅನೇಕ ಸಿನಿ ತಾರೆಯರು, ಕ್ರಿಕೆಟರ್, ಮಾಜಿ ಕ್ರಿಕೆಟರ್ ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಕೆಲವರನ್ನು ಸ್ಟಾರ್ ಪ್ರಚಾರಕರನ್ನಾಗಿ ಬಳಸಲು ಯೋಜನೆ ಹಾಕಿಕೊಂಡಿದೆ.
ರಿವಾಬಾ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದೇ ಬಿಂಬಿಸಲಾಗುತ್ತಿದೆ. ಪದ್ಮಾವತ್ ಚಿತ್ರ ಬಿಡುಗಡೆಗೆ ವಿರೋಧಿಸಿದ್ದ ಕಾರ್ಣಿ ಸೇನೆ ಸಾಕಷ್ಟು ಸದ್ದು ಮಾಡಿದ್ದು ಸುಳ್ಳಲ್ಲ.
ರವೀಂದ್ರ ಜಡೇಜಾ ಹಾಗೂ ರಿವಾಬಾ ಅವರ ಮದುವೆಗೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಲಾಗಿತ್ತು. ನಂತರ ಮೋದಿ ನಿವಾಸಕ್ಕೆ ಭೇಟಿ ನೀಡಿದ ದಂಪತಿ ಮಾತುಕತೆ ನಡೆಸಿದ್ದರು. ಬಿಜೆಪಿ ಸರ್ಕಾರದ ಯೋಜನೆಗಳ ಪ್ರಚಾರವನ್ನು ದಂಪತಿ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪದ್ಮಾವತ್ ವಿರುದ್ಧ ದನಿಯೆತ್ತಿದ್ದ ರಿವಾಬಾ ಜಡೇಜ
ರಿವಾಬಾ ಅವರು ಕಳೆದ ವರ್ಷ ಅಕ್ಟೋಬರ್ ನಲ್ಲಿ ರಜಪೂತರ ಸಂಘಟನೆ 'ಕಾರ್ಣಿ ಸೇನೆ' ಸೇರಿಕೊಂಡಿದ್ದರು. ಬಹುಬೇಗ ಗುಜರಾತ್ ಘಟಕದ ಸೇನಾ ಮಹಿಳಾ ಮಹಿಳಾ ಶಾಖೆಯ ಮುಖ್ಯಸ್ಥೆ ಮಾಡಲಾಯಿತು. ಅಕ್ಟೋಬರ್ ತಿಂಗಳಿನಲ್ಲೇ ನಡೆದ ಕಾರ್ಣಿ ಸೇನೆ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ, ಪ್ರಮುಖ ಆಕರ್ಷಣೆಯಾದರು. ದೀಪಿಕಾ ಪಡುಕೋಣೆ ಅಭಿನಯದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಿವಾಬಾ ಮೂಲತಃ ಗುಜರಾತಿನ ಜುನಾಗಡ್ ನವರು. ರವೀಂದ್ರ ಜಡೇಜಾ ಅವರ ಅಕ್ಕ ನಾನಾಬಾ ಜಡೇಜಾ ಕೂಡ ರಾಜಕೀಯದಲ್ಲಿದ್ದಾರೆ.
ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು
ರೀನಾ ಅವರ ತಂದೆ ಹರ್ದೆವ್ ಸಿಂಗ್ ಸೋಲಂಕಿ ಗುತ್ತಿಗೆದಾರರಾಗಿದ್ದಾರೆ. ಆತ್ಮಿಯ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ರೀನಾ ಅವರು ಜಡೇಜ ಅವರ ಜತೆ ವಿವಾಹ ನಿಶ್ಚಯವಾಗುವ ಹೊತ್ತಿಗೆ ಪರೀಕ್ಷೆಗೆ ತಯಾರಿ ನಡೆಸಿದ್ದರು. ದೆಹಲಿಯಲ್ಲಿ ನೆಲೆಸಿ ನಾಗರಿಕ ಸೇವಾ ಪರೀಕ್ಷೆ(ಯುಪಿಎಸ್ ಸಿ)ಗೆ ತಯಾರಿ ನಡೆಸುತ್ತಿದ್ದರು. ಆದರೆ, ಮದುವೆಯಾದ ಬಳಿಕ, ಸಾಮಾಜಿಕ ಕಾರ್ಯಕರ್ತೆಯಾದರು ನಂತರ ರಾಜಕೀಯದತ್ತ ಮುಖ ಮಾಡಿದರು
ಕಾರ್ಣಿ ಸೇನೆ ಸೇರಿದಾಗ ನೀಡಿದ್ದ ಹೇಳಿಕೆ
ನನ್ನ ಮೊದಲ ಗುರಿ ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಸ್ವಾತಂತ್ರ್ಯ. ಇದಕ್ಕಾಗಿ ನಾನು ಹೋರಾಟ ನಡೆಸುತ್ತೇನೆ. ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವಷ್ಟು ಸಮರ್ಥರು ಎಂಬುದನ್ನು ತೋರಿಸಬೇಕಿದೆ. ಕಲುಷಿತ ಮನಸ್ಸುಗಳಿಗೆ ತಕ್ಕ ಪಾಠ ಕಲಿಸಬೇಕಿದೆ. ನಾನು ಇಂಥ ಕಷ್ಟದ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿ ಬಂದಿದ್ದೇನೆ ಎಂದಿದ್ದರು. ಜಾಮ್ ನಗರದಲ್ಲಿ ಅಪಘಾತದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ರಿವಾಬಾ ಮೇಲೆ ಹಲ್ಲೆ ನಡೆಸಿದ್ದನ್ನು ಇಲ್ಲಿ ಉಲ್ಲೇಖಿಸಿದ್ದರು.
|
ನನ್ನ ಸಮುದಾಯಕ್ಕಾಗಿ ಶ್ರಮಿಸುವೆ
ಸಮಾಜ ಸೇವೆ ನನ್ನ ಆದ್ಯ ಉದ್ದೇಶ. ನನ್ನ ಸಮುದಾಯ ಬಯಸುವ ಕಾರ್ಯವನ್ನು ನಾನು ಮಾಡುತ್ತೇನೆ. ಚುನಾವಣೆ, ಅಧಿಕಾರ ಎಲ್ಲವೂ ಶಾಶ್ವತವಲ್ಲ. ಜನರ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಸುಧಾರಣೆ ಮುಖ್ಯ. ಮೋದಿ ಸರ್ಕಾರದ ಹತ್ತು ಹಲವು ಯೋಜನೆಗಳ ಫಲವನ್ನು ಅರ್ಹರಿಗೆ ತಲುಪಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದ್ದರು.