ವಿಪರೀತ ಮಳೆ: ವಡೋದರ ಏರ್ಪೋರ್ಟ್ ಬಂದ್, ರೈಲು ಸಂಚಾರ ಸ್ಥಗಿತ
ವಡೋದರಾ, ಆಗಸ್ಟ್ 1: ಗುಜರಾತ್, ಮುಂಬೈ ಸೇರಿದಂತೆ ಹಲವೆಡೆ ಸುರಿಯುತ್ತಿರುವ ಮಳೆಯಿಂದಾಗಿ ವಡೋದರಾ ಏರ್ಪೋರ್ಟ್ ಬಂದ್ ಮಾಡಲಾಗಿದ್ದು, ರೈಲುಗಳ ಸಂಚಾರ ಸ್ಥಗಿತಗೊಂಡಿದೆ.
ಎರಡು ಡೊಮೆಸ್ಟಿಕ್ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಗುಜರಾತಿನಲ್ಲಿರುವ ವಡೋದರದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. 12 ಗಂಟೆಗಳಲ್ಲಿ 400 ಮಿ.ಮೀನಷ್ಟು ಮಳೆಯಾಗಿದೆ.
ಕರ್ನಾಟಕದ ಐದು ಜಿಲ್ಲೆಗಳಲ್ಲಿ ಪ್ರವಾಹ ಭೀತಿ, ಎಲ್ಲೆಲ್ಲಿ?
ರೈಲ್ವೆ ಹಳಿಗಳಲ್ಲಿ ನೀರು ನಿಂತಿರುವ ಕಾರಣ ರೈಲುಗಳ ಸಂಚಾರ ಕೂಡ ಸ್ಥಗಿತಗೊಂಡಿದೆ. ವಡೋದರದ ತಗ್ಗು ಪ್ರದೇಶದಲ್ಲಿ ವಾಸವಾಗಿರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ಸರ್ಕಾರ ಸೂಚನೆ ನೀಡಿದೆ.
ವಡೋದರ ಪ್ರವಾಹ ಸ್ಥಿತಿ ಕುರಿತು ಸಚಿವ ವಿಜಯ್ ರೂಪಾನಿ ಬುಧವಾರ ಸಂಜೆ ಸಭೆ ಕರೆದಿದ್ದರು. ಅಹಮದಾಬಾದ್, ಸೂರತ್, ಪಂಚಮಹಲ್ ಸೇರಿದಂತೆ ಹಲವು ಕಡೆಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.
ಮುಂದಿನ ಎರಡು ದಿನಗಳ ಕಾಲ ಗುಜರಾತ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇನ್ನು ಕರ್ನಾಟಕದಲ್ಲಿ ಕೂಡ ಮಳೆ ಮುಂದುವರೆದಿದ್ದು ಐದು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.