1000 ಕೋಟಿಯ ದೇವಾಲಯ ಸಮುಚ್ಚಯಕ್ಕೆ ಮಾರ್ಚ್ 4 ಮೋದಿ ಶಂಕುಸ್ಥಾಪನೆ
ಅಹ್ಮದಾಬಾದ್ (ಗುಜರಾತ್), ಮಾರ್ಚ್ 1 : ಕಡ್ವ ಪಟೇಲ್ ಸಮುದಾಯದ ಆರಾಧ್ಯ ದೇವತೆ ಮಾ ಉಮಿಯಾಗೆ ಮೀಸಲಾದ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಗುಜರಾತ್ ನ ಅಹ್ಮದಾಬಾದ್ ಹೊರವಲಯದಲ್ಲಿ 1,000 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ದೇವಾಲಯ ಸಂಕೀರ್ಣದ ಶಂಕುಸ್ಥಾಪನೆ ಮಾರ್ಚ್ ನಾಲ್ಕರಂದು ಮೋದಿ ನೆರವೇರಿಸಲಿದ್ದರೆ ಎಂದು ಆಯೋಜಕರು ಶುಕ್ರವಾರ ತಿಳಿಸಿದ್ದಾರೆ.
ಈ 'ವಿಶ್ವ ಉಮಿಯಾ ಧಾಮ್' ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಐದು ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಾ ಉಮಿಯಾಗೆ ಈ ಕಟ್ಟಡ ಸಮರ್ಪಣೆ ಮಾಡಲಾಗುತ್ತದೆ. ಪಾಟೀದಾರ್ ಸಮುದಾಯದ ಉಪ ಪಂಗಡದಲ್ಲಿ ಒಂದು ಈ ಕಡ್ವ ಪಟೇಲ್ ಸಮುದಾಯ.
ದೇವಾಲಯ ನಿರ್ಮಾಣಕ್ಕೆ ಮೂರು ಗಂಟೆಯಲ್ಲೇ ಸಂಗ್ರಹವಾಯಿತು 150 ಕೋಟಿ
ಈ ಬೃಹತ್ ದೇವಾಲಯ ಹೊರತು ಪಡಿಸಿ ಕೌಶಲ ವಿಶ್ವ ವಿದ್ಯಾಲಯ, ಯುವಕ-ಯುವತಿಯರ ಹಾಸ್ಟೆಲ್, ಉದ್ಯೋಗ ಸಲಹಾ ಕೇಂದ್ರ, ಕೃಷಿ ಮತ್ತು ವಲಸೆಗೆ ಸಂಬಂಧಿಸಿದಂತೆ ಸಲಹಾ ಕೇಂದ್ರ ಇತ್ಯಾದಿಗಳು ಈ ಸಂಕೀರ್ಣದಲ್ಲಿ ಇರಲಿದೆ. ಜತೆಗೆ ಸಮುದಾಯದಲ್ಲಿ ಉದ್ಭವಿಸುವ ಸಾಮಾಜಿಕ ಹಾಗೂ ವಾಣಿಜ್ಯ ವ್ಯಾಜ್ಯಗಳನ್ನು ನಿವಾರಿಸಿಕೊಳ್ಳುವ ಮಧ್ಯಸ್ಥಿಕೆ ಕೇಂದ್ರ ಕೂಡ ಇರಲಿದೆ.
ಈ ಇಡೀ ಸಮುಚ್ಚಯವು ನಗರ ಹೊರ ಭಾಗದಲ್ಲಿ ಮೂವತ್ತು ಲಕ್ಷ ಚದರ ಅಡಿ ವ್ಯಾಪ್ತಿಯಲ್ಲಿ ತಲೆ ಎತ್ತಲಿದೆ ಎಂದು ಉಮಿಯಾ ಫೌಂಡೇಷನ್ ನ ಟ್ರಸ್ಟಿ ಆರ್.ಪಿ.ಪಟೇಲ್ ತಿಳಿಸಿದ್ದಾರೆ.