ಗುಜರಾತಿನಲ್ಲಿ ಪ್ರಮುಖ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಅಹಮದಾಬಾದ್, ಡಿ. 15: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದು ಗುಜರಾತ್ ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಈ ಯೋಜನೆಗಳಲ್ಲಿ ಉಪ್ಪುನೀರು ಶುದ್ಧೀಕರಣ ಘಟಕ, ಹೈಬ್ರೀಡ್ ನವೀಕರಿಸಬಹುದಾದ ಇಂಧನ ಉದ್ಯಾನ ಮತ್ತು ಸಂಪೂರ್ಣ ಸ್ವಯಂಚಾಲಿತ ಹಾಲು ಸಂಸ್ಕರಣೆ ಮತ್ತು ಪೊಟ್ಟಣೀಕರಣ ಸ್ಥಾವರ ಸೇರಿದೆ. ಗುಜರಾತ್ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಸರ್ಕಾರ ಸದಾ ರೈತರ ಕಲ್ಯಾಣಕ್ಕೆ ಬದ್ಧವಾಗಿದೆ ಮತ್ತು ರೈತರ ಕಾಳಜಿಗೆ ಸ್ಪಂದಿಸುತ್ತದೆ ಎಂದು ಪುನರುಚ್ಚರಿಸಿದರು. ಕೃಷಿ ಸುಧಾರಣೆಗಳಲ್ಲಿ ಕಳೆದ ಹಲವು ವರ್ಷಗಳಿಂದ ರೈತ ಸಂಘಟನೆಗಳ ಮತ್ತು ಪ್ರತಿಪಕ್ಷಗಳ ಬೇಡಿಕೆಗಳನ್ನು ಸರ್ಕಾರ ಕೈಗೊಂಡಿದೆ ಎಂದರು.
ಡಿಸೆಂಬರ್ 16ರಂದು ಮಹತ್ವದ ಕೇಂದ್ರ ಸಚಿವ ಸಂಪುಟ ಸಭೆ
ಬದಲಾವಣೆಗೆ ಅನುಗುಣವಾಗಿ ಹೊಂದಿಕೊಂಡು, ಜಗತ್ತಿನ ಉತ್ತಮ ರೂಢಿಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಕಚ್ ರೈತರನ್ನು ಶ್ಲಾಘಿಸಿದ ಅವರು, ಈಗ ಅವರು ವಿದೇಶಕ್ಕೆ ಹಣ್ಣು ರಫ್ತು ಮಾಡುತ್ತಿದ್ದಾರೆ ಎಂದರು. ಇದು ನಮ್ಮ ರೈತರ ನಾವಿನ್ಯತೆಯ ಉತ್ಸಾಹ ತೋರಿಸುತ್ತದೆ.
ಎರಡು ದಶಕಗಳಿಂದ ಗುಜರಾತ್ ನಲ್ಲಿ ವಿಕಾಸ
ಸರ್ಕಾರದ ಪ್ರೋತ್ಸಾಹದಾಯಕ ಪ್ರವೇಶದಿಂದಾಗಿ ಕೃಷಿ, ಹೈನುಗಾರಿಕೆ ಮತ್ತು ಮೀನುಗಾರಿಕೆ ವಲಯಗಳು ಕಳೆದ ಎರಡು ದಶಕಗಳಿಂದ ಗುಜರಾತ್ ನಲ್ಲಿ ವಿಕಾಸಗೊಂಡಿವೆ ಎಂದರು. ರೈತರ ಸಬಲೀಕರಣಕ್ಕೆ ಗುಜರಾತ್ ಸರ್ಕಾರದ ಕೊಡುಗೆಗಳನ್ನು ವಿವರಿಸಿದರು.
ಇಂದು, ಕಚ್ ನವ ಯುಗದ ತಂತ್ರಜ್ಞಾನ ಮತ್ತು ನವ ಯುಗದ ಆರ್ಥಿಕತೆ ಎರಡರಲ್ಲೂ ದಾಪುಗಾಲು ಇಟ್ಟಿದೆ. ಖರೇರಾದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿರುವ ನವೀಕರಿಸಬಹುದಾದ ಇಂಧನ ಪಾರ್ಕ್, ಮಾಂಡವಿಯ ಉಪ್ಪು ನೀರು ಶುದ್ಧೀಕರಣ ಘಟಕ ಮತ್ತು ಅಂಜಾರ್ ನ ಸರ್ಹದ್ ದೇಹ್ರಿಯಲ್ಲಿನ ಹೊಸ ಅಣು ಸ್ಥಾವರಗಳು ಕಚ್ ಅಭಿವೃದ್ಧಿಯ ಪಯಣದಲ್ಲಿ ಪ್ರಮುಖ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತವೆ ಎಂದರು.
ಶ್ರೀಸಾಮಾನ್ಯರಿಗೆ ಪ್ರಯೋಜನಗಳು ಸಿಗಲಿವೆ
ಈ ಯೋಜನೆಗಳ ಪ್ರಯೋಜನಗಳು ವಲಯದ ಬುಡಕಟ್ಟು ಜನರು, ರೈತರು, ದನಗಾಹಿಗಳು ಮತ್ತು ಶ್ರೀಸಾಮಾನ್ಯರಿಗೆ ದೊರಕಲಿದೆ ಎಂದರು. ಇಂದು ಕಚ್ ದೇಶದಲ್ಲಿ ಅತ್ಯಂತ ತ್ವರಿತವಾಗಿ ಅಭಿವೃದ್ಧಿ ಕಾಣುತ್ತಿರುವ ಪ್ರದೇಶವಾಗಿದೆ ಎಂದರು. ಇಲ್ಲಿನ ಸಂಪರ್ಕ ದಿನದಿಂದ ದಿನಕ್ಕೆ ಉತ್ತಮಗೊಳ್ಳುತ್ತಿದೆ ಎಂದರು.
ಗುಜರಾತ್ ಜನತೆ ರಾತ್ರಿ ಊಟದ ಸಮಯದಲ್ಲಿ ವಿದ್ಯುತ್ ನೀಡುವಂತೆ ಸರಳ ಬೇಡಿಕೆ ಇಡುತ್ತಿದ್ದುದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಗುಜರಾತ್ ನಲ್ಲಿ ಪರಿಸ್ಥಿತಿ ತುಂಬಾ ಬದಲಾಗಿದೆ ಎಂದರು.
ಈಗ ಜನರು ವಲಸೆ ಹೋಗುವುದನ್ನು ನಿಲ್ಲಿಸಿದ್ದಾರೆ
ಇಂದಿನ ಗುಜರಾತ್ ಯುವಕರಿಗೆ ಹಿಂದೆ ಇದ್ದ ಅನನುಕೂಲತೆಗಳ ಅರಿವೆ ಇಲ್ಲ ಎಂದರು. ಕಚ್ ನಲ್ಲಿನ ಜನಸಂಖ್ಯೆಯು ನೇತ್ಯಾತ್ಮಕ ವೃದ್ಧಿಯನ್ನು ಹೊಂದಿತ್ತು ಎಂಬುದನ್ನು ಪ್ರಧಾನಮಂತ್ರಿ ಸ್ಮರಿಸಿದರು.
ಈಗ ಜನರು ವಲಸೆ ಹೋಗುವುದನ್ನು ನಿಲ್ಲಿಸಿದ್ದಾರೆ, ಜನರು ಹಿಂತಿರುಗುತ್ತಿರುವುದರಿಂದ ಜನಸಂಖ್ಯೆಯು ಅಭಿವೃದ್ಧಿ ಹೊಂದುತ್ತಿದೆ, ಭಾರಿ ಭೂಕಂಪದ ನಂತರ ಕಚ್ ನ ನಾಲ್ಕು ಪಟ್ಟು ಅಭಿವೃದ್ಧಿಯ ಬಗ್ಗೆ ಅಧ್ಯಯನ ಮಾಡಲು ಸಂಶೋಧಕರು ಮತ್ತು ವಿಶ್ವವಿದ್ಯಾಲಯಗಳಿಗೆ ಕರೆ ನೀಡಿದರು.
ಹಲವು ರೈತ ಸ್ನೇಹಿ ಯೋಜನೆ ರೂಪಿಸಿದ ಗುಜರಾತ್
ಕಳೆದ 20 ವರ್ಷಗಳಲ್ಲಿ ಹಲವು ರೈತ ಸ್ನೇಹಿ ಯೋಜನೆ ರೂಪಿಸಿದ ಗುಜರಾತ್ ಸರ್ಕಾರವನ್ನು ಶ್ಲಾಘಿಸಿದರು. ಸೌರ ಇಂಧನ ಸಾಮರ್ಥ್ಯ ಬಲಪಡಿಸುವ ಕಾರ್ಯದಲ್ಲಿ ಗುಜರಾತ್ ಮುಂಚೂಣಿಯಲ್ಲದೆ ಎಂದರು.
21ನೇ ಶತಮಾನದಲ್ಲಿ ಇಂಧನ ಭದ್ರತೆ ಮತ್ತು ಜಲ ಭದ್ರತೆ ಪ್ರಮುಖವಾದ್ದಾಗಿವೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಕಚ್ ನ ಜಲ ಕ್ಷಾಮ ನಿವಾರಣೆಗೆ ನರ್ಮದಾ ನದಿ ನೀರು ಹರಿಸುವ ಬಗ್ಗೆ ಮಾತನಾಡಿದಾಗ ಅಣಕವಾಡುತ್ತಿದ್ದ ಕಾಲವನ್ನು ಸ್ಮರಿಸಿದರು. ಈಗ ನರ್ಮದಾ ನೀರು ಕಚ್ ಗೆ ಬಂದಿದ್ದು, ಕಚ್ ಪ್ರಗತಿ ಸಾಧಿಸುತ್ತಿದೆ ಎಂದರು.