ಪ್ರವೀಣ್ ತೊಗಾಡಿಯಾ ಎನ್ ಕೌಂಟರ್ ಹತ್ಯೆಗೆ ಸಂಚು ರೂಪಿಸಲಾಗಿತ್ತೆ?!
ಅಹ್ಮದಾಬಾದ್, ಜನವರಿ 16: "ನನ್ನನ್ನು ಎನ್ ಕೌಂಟರ್ ಮೂಲಕ ಹತ್ಯೆಗೈಯಲು ಸಂಚು ರೂಪಿಸಲಾಗಿತ್ತು" ಎನ್ನುವ ಮೂಲಕ ವಿಎಚ್ ಪಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹೊಸ ಬಾಂಬ್ ಸಿಡಿಸಿದ್ದಾರೆ.
ನಾಪತ್ತೆಯಾಗಿದ್ದ ತೊಗಾಡಿಯಾ ಜ.15 ರ ರಾತ್ರಿ ಗುಜರಾತಿನ ಅಹ್ಮದಾಬಾದಿನ ಚಂದ್ರಮಣಿ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇದ್ದುದರಿಂದ ಅವರು ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು.
ನಾಪತ್ತೆಯಾಗಿದ್ದ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
ಇದೀಗ ಚೇತರಿಸಿಕೊಂಡಿರುವ ತೊಗಾಡಿಯಾ, ಸುದ್ದಿಗೋಷ್ಠಿ ನಡೆಸಿದ್ದು, ತಮ್ಮ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ಸುದ್ದಿಯನ್ನು ಹೊರಹಾಕಿದ್ದಾರೆ.
'ನನ್ನನ್ನು ದಶಕಗಳ ಹಿಂದಿನ ಪ್ರಕರಣದಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನಿ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್ ಕೌಂಟರ್ ಮೂಲಕ ನನ್ನನ್ನು ಹತ್ಯೆಗೈಯುವ ಸಂಚು ರೂಪಿಸಲಾಗಿದೆ ಎಂದು ನನಗೆ ಆತ್ಮೀಯರೊಬ್ಬರು ಹೇಳಿದ್ದರು' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.