ಹಾರ್ದಿಕ್ ಪಟೇಲ್ ಕಾರು ಅಪಘಾತ, ಪ್ರಕರಣ ದಾಖಲು
ರಾಜಕೋಟ್, ಮಾರ್ಚ್ 08: ಪಾಟೀದಾರ್ ಅನಾಮತ್ ಆಂದೋಲನ ಸಮಿತಿ ಮುಖಂಡ ಹಾರ್ದಿಕ್ ಪಟೇಲ್ ಅವರಿದ್ದ ಕಾರು ಅಪಘಾತಕ್ಕೀಡಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಗುಜರಾತಿನ ರಾಜ್ ಕೋಟ್-ಛೋಟಿಲಾ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಹಾರ್ದಿಕ್ ಪಟೇಲ್ ಅವರಿದ್ದ ಎಸ್ ಯುವಿಯು ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಬೈಕಿನಲ್ಲಿದ್ದ ವ್ಯಕ್ತಿ ಗಾಯಗೊಂಡಿದ್ದಾರೆ. ಅದೃಷ್ಣವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಹಾರ್ದಿಕ್ ಪಟೇಲ್ ಅವರೂ ಕ್ಷೇಮವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾರ್ದಿಕ್ ಪಟೇಲ್ ಕಾಂಗ್ರೆಸ್ಸಿಗೆ, ಜಾಮ್ನಗರದಿಂದ ಲೋಕಸಭೆಗೆ ಸ್ಪರ್ಧೆ
ಹಾರ್ದಿಕ್ ಪಟೇಲ್ ಅವರ ಎಸ್ ಯುವಿಗೆ ಹಾನಿಯಾಗಿದ್ದು, ಘಟನೆಯ ನಂತರ ಪೊಲೀಸರು ಮತ್ತು ಹಾರ್ದಿಕ್ ಪಟೇಲ್ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಹಾರ್ದಿಕ್ ಪಟೇಲ್ ಅವರೊಂದಿಗೆ ಕಾರಿನಲ್ಲಿ ಅವರ ಬೆಂಬಲಿಗರೂ ಕೆಲವರಿದ್ದರು. ಘಟನೆಯ ನಂತರ ರಾಜ್ ಕೋಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆಗೆ ಹಾರ್ದಿಕ್ ಪಟೇಲ್ ಸ್ಪರ್ಧೆ ಮಾಡುವುದಾಗಿ ಘೋಷಣೆ
ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ಬೇದಿಕೆಯೊಂದಿಗೆ ಸಾಮಾಜಿಕ ಹೋರಾಟಕ್ಕಿಳಿದ 25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಮಾರ್ಚ್ 12 ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ಗುಜರಾತಿನ ಜಾಮ್ನಗರ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆ ಇದೆ.