ವಿಜಯ್ ಕುಮಾರ್ ದೇಗುಲ ಕಟ್ಟಲು ನೆರವಾದ ಅಬ್ದುಲ್ ಹನೀಫ್
ಭರೂಚ್(ಗುಜರಾತ್), ಮಾರ್ಚ್ 6: ತನ್ನ ಗೆಳೆಯ ದೇವಾಲಯವೊಂದನ್ನು ಕಟ್ಟಿಸಲು ಮುಸ್ಲಿಂ ವ್ಯಕ್ತಿಯೊಬ್ಬ 3 ಲಕ್ಷ ರೂಪಾಯಿ ದೇಣಿಗೆಯನ್ನು ಸಂಗ್ರಹಿಸಿ ನೀಡಿದ ಘಟನೆ ನಡೆದಿದೆ.
ಗುಜರಾತಿನ ಭರೂಚ್ ಜಿಲ್ಲೆಯ ಪಿರಾಮಲ್ ಗ್ರಾಮದ ವಾಸಿಯಾಗಿರುವ ಅಬ್ದುಲ್ ಕುದಾ ಮಹಮ್ಮದ್ ಹನೀಫ್ ಶೇಖ್ ಅವರು ದೇಣಿಗೆ ಸಂಗ್ರಹಿಸಿದ ವ್ಯಕ್ತಿ. ಅಬ್ದುಲ್ ಅವರ ಸ್ನೇಹಿತ ತಮಿಳುನಾಡಿನ ದಿಂಡಿಗಲ್ ಮೂಲದ ವಿಜಯ್ ಕುಮಾರ್ ಅವರಿಗೆ ಹಣದ ನೆರವು ನೀಡಿದ್ದಾರೆ.
ಮೂಲತಃ ತಮಿಳುನಾಡಿನ ಪಾರೈಪಟ್ಟಿ ಗ್ರಾಮದವರಾದ ಅಬ್ದುಲ್ ಖುದಾ ಮೊಹಮ್ಮದ್ ಹನೀಫ್ ಅವರು ಕಾರ್ಯನಿಮಿತ್ತ ಗುಜರಾತಿಗೆ ಬಂದವರು ಅಲ್ಲೇ ನೆಲೆಸಿದ್ದಾರೆ.
ಮದುರೈನಿಂದ ಬಂದು ಗುಜರಾತಿನಲ್ಲಿ ಅನೇಕ ಮಂದಿ ನೆಲೆಸಿದ್ದಾರೆ. ವಿಜಯ್ ಕುಮಾರ್ ದೇಗುಲ ಕಟ್ಟುತ್ತಿರುವ ವಿಷಯ ತಿಳಿದು, ದೇಣಿಗೆ ಸಂಗ್ರಹಕ್ಕೆ ಅಬ್ದುಲ್ ನೆರವು ನೀಡುವುದಾಗಿ ಹೇಳಿದ್ದಾರೆ. ಅದರಂತೆ, ಗುಜರಾತಿನ ಸಮಾನ ಮನಸ್ಕರ ಬಳಿ ತೆರಳಿ ಸ್ವಲ್ಪ ಸ್ವಲ್ಪವೇ ಮೊತ್ತ ಸೇರಿಸುತ್ತಾ ಬಂದಿದ್ದಾರೆ. ಒಟ್ಟಾರೆ, 3 ಲಕ್ಷ ರೂಪಾಯಿ ಸಂಗ್ರಹವಾಗಿದ್ದು, ವಿಜಯ್ ಕುಮಾರ್ ಅವರ ಕನಸಿಗೆ ತಮ್ಮ ಕೊಡುಗೆ ನೀಡಿದ್ದಾರೆ.
ವಾಪಿಯಿಂದ ಮೆಹ್ಸಾನಾ ತನಕ ಅನೇಕ ಮಂದಿ ತಮಿಳರು ನಿಮಗೆ ಸಿಗುತ್ತಾರೆ. ನಾನು ಪ್ರತಿಯೊಬ್ಬರ ಬಳಿ ತೆರಳಿ ವಿಷಯ ತಿಳಿಸಿ, ಹಣ ಪಡೆದುಕೊಂಡು ವಿಜಯ್ ಗೆ ನೀಡಿದೆ. ತಮಿಳುನಾಡಿನ ಗ್ರಾಮದಲ್ಲಿ ನಾವೆಲ್ಲ ಹಿಂದೂ, ಮುಸ್ಲಿಂ ಎಂದು ವಾಸಿಸುತ್ತಿಲ್ಲ. ಗೆಳೆಯರಂತೆ ಬಾಳುತ್ತಿದ್ದೇವೆ. ಶಾಂತಿ, ಸೌಹಾರ್ದತೆ ಜಾತಿ, ಮತ, ಪಂಥ ಅಡ್ಡಿ ಬಂದಿಲ್ಲ ಎಂದು ವಿಜಯ್ ಹೇಳಿದ್ದಾರೆ.