ಅಮಿತ್ ಶಾ ನೀಡಿದ ಸಾಕ್ಷಿಗೆ ಬೆಲೆ, ಮಾಯಾ ನಿರ್ದೋಷಿ!
ಅಹಮದಾಬಾದ್, ಏಪ್ರಿಲ್ 20: ನರೋಡಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವೆ, ನರೇಂದ್ರ ಮೋದಿ ಅವರ ಒಂದು ಕಾಲದ ಆಪ್ತ ಸಚಿವೆ ಮಾಯಾ ಕೊಡ್ನಾನಿ ಅವರಿಗೆ ಗುಜರಾತ್ ಹೈಕೋರ್ಟಿನಿಂದ ಶುಕ್ರವಾರದಂದು ಶುಭ ಸುದ್ದಿ ಸಿಕ್ಕಿದೆ. ಈ ಪ್ರಕರಣದಲ್ಲಿ ಮಾಯಾ ನಿರ್ದೋಷಿ ಎಂದು ಹೈಕೋರ್ಟ್ ಆದೇಶಿಸಿದೆ.
ಇದೇ ವೇಳೆ ಬಾಬು ಬಜರಂಗಿ ಅವರ ಜೀವಾವಧಿ ಶಿಕ್ಷೆ(ಸಾಯುವವರೆಗೂ) ಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಉಳಿದ ಏಳು ಅಪರಾಧಿಗಳಿಗೆ 21 ವರ್ಷ ಶಿಕ್ಷೆ ನೀಡಲಾಗಿದೆ. 28 ವರ್ಷ ಶಿಕ್ಷೆ ಪಡೆದಿದ್ದ ಮಾಯಾ ಕೊಡ್ನಾನಿ ಸೇರಿದಂತೆ 29 ಮಂದಿ ಈ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.
ಮೋದಿ ಆಪ್ತೆ ಮಾಯಾ ಕೊಡ್ನಾನಿ ಮತ್ತೆ ಬಚಾವ್!
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನರೋಡಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ವಿಶೇಷ ನ್ಯಾಯಾಲಯ ಮುಂದೆ ಮಾಯಾ ಕೊಡ್ನಾನಿ ಪರ ಸಾಕ್ಷಿ ಹೇಳಿದ್ದಕ್ಕೆ ಬೆಲೆ ಸಿಕ್ಕಿದೆ. ಘಟನೆ ನಡೆದ ಸಂದರ್ಭ(ಫೆಬ್ರವರಿ 28, 2002)ದಲ್ಲಿ ಮಾಯಾ ಅವರು ಗುಜರಾತಿನ ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಿದ್ದರು ಎಂದು ಸೆಷನ್ಸ್ ಕೋರ್ಟಿನಲ್ಲಿ ಹೇಳಿದ್ದಾರೆ.
ಗುಜರಾತಿನಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮಾಯಾ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ವೃತ್ತಿಯಿಂದ ಸ್ತ್ರೀರೋಗ ತಜ್ಞೆಯಾಗಿರುವ ಮಾಯಾ ಅವರು ಘಟನೆ ನಡೆದ ದಿನದಂದು ಅಹ್ಮದಾಬಾದ್ ನಗರದ ಅಸರ್ವ ಪ್ರದೇಶದಲ್ಲಿ ನರ್ಸಿಂಗ್ ಹೋಂನಲ್ಲಿದ್ದರು ಎಂದು ವಾದಿಸಲಾಗಿದ್ದು, ಇದಕ್ಕೆ ಅಮಿತ್ ಹಾಗೂ ಇತರೆ 13 ಮಂದಿಗೆ ಸಮನ್ಸ್ ನೀಡುವಂತೆ ಮಾಯಾ ಕೋರಿದ್ದರು.
ನರೋಡಾ ಪಾಟಿಯಾ ಹತ್ಯಾಕಾಂಡ: ಈ ದುರ್ಘಟನೆಯಲ್ಲಿ 11 ಮುಸ್ಲಿಮರ ಹತ್ಯೆಯಾಗಿತ್ತು. ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರ ಗುಂಪೇ ಹೊಣೆಯೆಂದು ಆರೋಪಿಸಲಾಗಿತ್ತು. ನರೋಡಾ ಪಾಟಿಯಾದ ಶಾಸಕಿ ಮಾಯಾ ಕೊಡ್ನಾನಿ, ವಿಹಿಂಪದ ಮಾಜಿ ಮುಖಂಡ ಬಾಬು ಬಜರಂಗಿ, ಸ್ಥಳೀಯ ಬಿಜೆಪಿ ನಾಯಕರಾದ ಬಿಪಿನ್ ಪಂಚಾಲ್, ಕಿಶನ್ ಕೊರಾನಿ, ಅಶೋಕ್ ಸಿಂಧಿ ಮತ್ತು ರಾಜು ಚುಮಾಲ್ ಸೇರಿದಂತೆ 62 ಮಂದಿ ಇಲ್ಲಿ ಆರೋಪಿಗಳಾಗಿದ್ದಾರೆ.