3 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿ ಕೋವಿಡ್ ಲಸಿಕೆ ಫಲಾನುಭವಿ! - ಇದು ಗುಜರಾತ್ನ ಏಕೈಕ ಪ್ರಕರಣವಲ್ಲ
ಅಹಮದಾಬಾದ್, ಜೂ. 02: ಕೊರೊನಾ ವೈರಸ್ ಎರಡನೇ ಅಲೆಯ ಸಂದರ್ಭದಲ್ಲಿ ಲಸಿಕೆ ಕೊರತೆ ಕಾಣಿಸಿಕೊಂಡಿದೆ. ಈ ನಡುವೆ ಲಸಿಕೆ ಪಡೆಯುವುದು ಸಂತೋಷದ ಸಂಗತಿ. ಆದರೆ ಗುಜರಾತ್ನಲ್ಲಿ ಮೂರು ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿ ಕೊರೊನಾ ಲಸಿಕೆ ಫಲಾನುಭವಿಯಾಗಿದ್ದಾರೆ.
ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಲಸಿಕೆ ಪಡೆಯುವುದು ಸಂತಸದ ವಿಚಾರವಾದರೂ ಮೂರು ವರ್ಷಗಳ ಹಿಂದೆ ಮೃತಪಟ್ಟಿರುವ ತಮ್ಮ ಕುಟುಂಬ ಸದಸ್ಯರೊಬ್ಬರು ಕೊರೊನಾ ಫಲಾನುಭವಿಯಾಗಿರುವುದನ್ನು ನೋಡಿ ನೀವು ಆಶ್ಚರ್ಯಕ್ಕೆ ಒಳಪಟ್ಟಂತೆ ಕುಟುಂಬಸ್ಥರೂ ಕೂಡಾ ಆಶ್ಚರ್ಯಪಟ್ಟಿದ್ಧಾರೆ.
ಭಾರತದಲ್ಲಿ ಸಿಂಗಲ್ ಡೋಸ್ ಸ್ಪುಟ್ನಿಕ್ ಕೊರೊನಾ ಲಸಿಕೆಯಿಂದ ಮೂಡಿದೆ ಹೊಸ ಭರವಸೆ
ಈ ಸುದ್ದಿಯನ್ನು ನೀವು ಸುಳ್ಳೆಂದು, ಕಾಲ್ಪನಿಕವೆಂದು ಭಾವಿಸಬಹುದು. ಆದರೆ ಇದು ಕಾಲ್ಪನಿಕ ಸುದ್ದಿಯಲ್ಲ. ಈ ಆಘಾತಕ್ಕೊಳಗಾಗುವ ದಿಗ್ಭ್ರಮೆಗೊಳ್ಳುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಮೊಬೈಲ್ಗೆ ಬಂತು ಲಸಿಕೆ ಪಡೆದ ಎಸ್ಎಮ್ಎಸ್
ಗುಜರಾತ್ನ ಉಪ್ಲೆಟಾ ನಿವಾಸಿಯಾದ ಹರದಾಸ್ಭಾಯ್ ಕರಿಂಗಿಯಾ 2018 ರಲ್ಲಿ ನಿಧನರಾಗಿದ್ದಾರೆ. ಕುಟುಂಬಸ್ಥರ ಬಳಿ ಮರಣ ಪ್ರಮಾಣ ಪತ್ರವೂ ಇದೆ. ಆದರೆ ಹರದಾಸ್ಭಾಯ್ ಕರಿಂಗಿಯಾರ ಕುಟುಂಬ ಸದಸ್ಯರಿಗೆ, ಮೇ 3 ರಂದು ಹರ್ದಾಸ್ಬಾಯ್ ಕರಿಂಗಿಯಾರಿಗೆ ಲಸಿಕೆ ನೀಡಲಾಗಿದೆ ಎಂಬ ಸಂದೇಶ ಬಂದಿದೆ. ಹಾಗೆಯೇ ಲಸಿಕೆ ಪ್ರಮಾಣ ಪತ್ರವನ್ನು ಕೂಡಾ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಇದು ಹೇಗೆ ಸಾಧ್ಯ?
ಈ ಎಸ್ಎಮ್ಎಸ್ ನೋಡಿ ಆಶ್ಚರ್ಯಪಟ್ಟ ಮೃತ ಹರದಾಸ್ಭಾಯ್ ಸೋದರಳಿಯ ಅರವಿಂದ ಕರಿಂಗಿಯಾ, "ಇದು ಹೇಗೆ ಸಾಧ್ಯ ಎಂದು ನಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ. ಹಾಗೆಯೇ ಮಾಧ್ಯಮಕ್ಕೆ 2018 ರಲ್ಲಿ ಹರದಾಸ್ಭಾಯ್ ಮೃತಪಟ್ಟ ಬಗ್ಗೆ ಇರುವ ಮರಣ ಪ್ರಮಾಣಪತ್ರವನ್ನು ತೋರಿಸಿದ್ದಾರೆ. ನಮಗೆ ಹರದಾಸ್ಭಾಯ್ ಮೇ 3 ರಂದು ಕೋವಿಡ್ -19 ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ್ದಾರೆ ಎಂದು ಎಸ್ಎಂಎಸ್ ಸ್ವೀಕರಿಸಿದಾಗ ದಿಗ್ಭ್ರಮೆಗೊಂಡೆವು ಎಂದು ಹೇಳಿದ್ದಾರೆ.
ಲಸಿಕೆ ಹಾಕಿಸಿಕೊಂಡವರಿಗೆ 1300 ರೂಪಾಯಿ ಟಿಕೆಟ್, ಹಾಕಿಸಿಕೊಳ್ಳದಿದ್ದರೆ 73,000 ರೂಪಾಯಿ ಟಿಕೆಟ್!
ಇದು ಗುಜರಾತ್ನ ಏಕೈಕ ಪ್ರಕರಣವಲ್ಲ
ದೇಶಾದ್ಯಂತ ರಾಜ್ಯಗಳು ಕೋವಿಡ್ -19 ಲಸಿಕೆಗಳ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಗುಜರಾತ್ನಲ್ಲಿ ಮೃತ ವ್ಯಕ್ತಿಗಳನ್ನು ಲಸಿಕೆ ಫಲಾನುಭವಿ ಎಂದು ಘೋಷಿಸಿದ ಮೊದಲ ಏಕೈಕ ಪ್ರಕರಣ ಇದಲ್ಲ. ಇಂತಹುದ್ದೆ ಇನ್ನೊಂದು ಪ್ರಕರಣ ಗುಜರಾತ್ನ ದಾಹೋದ್ನಲ್ಲಿ ವರದಿಯಾಗಿದೆ. ದಾಹೋದ್ನ ನರೇಶ್ ದೇಸಾಯಿ ಎಂಬ ವ್ಯಕ್ತಿಗೆ ಇತ್ತೀಚೆಗೆ ಕೋವಿನ್ನಿಂದ ಎಸ್ಎಂಎಸ್ ಬಂದಿದ್ದು, ಅದರಲ್ಲಿ ತಂದೆ ನಟವರ್ಲಾಲ್ ದೇಸಾಯಿ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
2011 ರಲ್ಲೇ ಮೃತಪಟ್ಟಿದ್ದ ಕೋವಿಡ್ ವ್ಯಾಕ್ಸಿನ್ ಫಲಾನುಭವಿ!
ಇನ್ನೊಂದು ಪ್ರಕರಣದಲ್ಲಿ ವಿಪರ್ಯಾಸವೆಂದರೆ ಕೋವಿಡ್ ವ್ಯಾಕ್ಸಿನ್ ಫಲಾನುಭವಿ ನಟವರ್ಲಾಲ್ ದೇಸಾಯಿ 2011 ರಲ್ಲಿ ನಿಧನರಾಗಿದ್ದಾರೆ. ಅಂದರೆ ಸುಮಾರು 10 ವರ್ಷಗಳು ಹಿಂದೆಯೇ ಈ ಕೋವಿಡ್ ಲಸಿಕೆ ಫಲಾನುಭವಿ ಸಾವನ್ನಪ್ಪಿದ್ದಾರೆ.
ಮೃತರಿಗೆ ಲಸಿಕೆ ನೀಡಲಾಗಿದೆ ಎಂಬ ಎಸ್ಎಮ್ಎಸ್ಗಳ ಸರಮಾಲೆ
ದಾಹೋಡ್ನ ಲಿಮ್ಡಿ ಪ್ರದೇಶದಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದ್ದು, ಏಪ್ರಿಲ್ನಲ್ಲಿ ನಿಧನರಾದ 72 ವರ್ಷದ ಮಹಿಳೆ ಮೇ ತಿಂಗಳಲ್ಲಿ ಎರಡನೇ ಡೋಸ್ ಕೋವಿಡ್ -19 ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಕುಟುಂಬಸ್ಥರಿಗೆ ಎಸ್ಎಮ್ಎಸ್ ಬಂದಿದೆ. ಮಾರ್ಚ್ 2 ರಂದು ಮಧುಬೆನ್ ಶರ್ಮಾ ಎಂಬ ಮಹಿಳೆ ತನ್ನ ಮೊದಲ ಡೋಸ್ ಕೋವಿಡ್ -19 ಲಸಿಕೆಯನ್ನು ಪಡೆದಿದ್ದರು. ಆದರೆ ಬಳಿಕ ಕೋವಿಡ್ಯೇತರ ಸಮಸ್ಯೆಯಿಂದ ಏಪ್ರಿಲ್ 15 ರಂದು ನಿಧನರಾಗಿದ್ದಾರೆ. ಆದರೆ ಸುಮಾರು ಒಂದೂವರೆ ತಿಂಗಳ ನಂತರ, ಆಕೆಯ ಮಗ ನಿಪುಲ್ ಶರ್ಮಾರಿಗೆ ಮಹಿಳೆ ಎರಡನೇ ಡೋಸ್ ಲಸಿಕೆ ಪಡೆದ ಬಗ್ಗೆ ಎಸ್ಎಮ್ಎಸ್ ಬಂದಿದೆ.
ಕುಟುಂಬಸ್ಥರಿಂದ ಪ್ರತಿಭಟನೆ, ದೂರು
ಈ ಎಲ್ಲಾ ಬೆಳವಣಿಗೆಯಿಂದಾಗಿ ಆಕ್ರೋಶಕ್ಕೆ ಒಳಗಾಗಿರುವ ಮಹಿಳೆಯ ಕುಟುಂಬಸ್ಥರು ವ್ಯಾಕ್ಸಿನೇಷನ್ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ ಹಾಗೆಯೇ ಈ ಬಗ್ಗೆ ಪೊಲೀಸ್ ತನಿಖೆಗೆ ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.
ಗುಜರಾತ್ನಲ್ಲಿ ಈವರೆಗೆ ಮೃತರನ್ನು ಕೋವಿಡ್ ಲಸಿಕೆ ಫಲಾನುಭವಿಗಳು ಎಂದು ಘೋಷಿಸಲಾದ ಇಂತಹ 10 ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಭಾಗಗಳಿಂದ ವರದಿಯಾಗಿವೆ.
(ಒನ್ಇಂಡಿಯಾ ಸುದ್ದಿ)