ಕೋರ್ಟ್ಗೆ ಬಂದ ಅನಿರೀಕ್ಷಿತ ಅತಿಥಿ!: ಜಡ್ಜ್, ವಕೀಲರೆಲ್ಲ ದಿಕ್ಕಾಪಾಲಾಗಿ ಓಡಿದ್ದೇಕೆ?
ಅಹಮದಾಬಾದ್, ಡಿಸೆಂಬರ್ 15: ಗುಜರಾತ್ನ ಸುರೇಂದರ್ನಗರ ಜಿಲ್ಲೆಯ ಸ್ಥಳೀಯ ನ್ಯಾಯಾಲಯದಲ್ಲಿ ಶುಕ್ರವಾರ ಕಲಾಪ ಎಂದಿನಂತೆ ಸಾಗಿತ್ತು. ಒಂದರ ಹಿಂದೊಂದು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದವು.
ಆದರೆ, ಮಧ್ಯಾಹ್ನ ನ್ಯಾಯಾಲಯದ ಸಂಕೀರ್ಣದೊಳಗೆ ಹಠಾತ್ತಾಗಿ ಕಾಲಿಟ್ಟ ಈ ಮಹಾನುಭಾವ ತನ್ನ ಬಳಿ ಯಾವ 'ಕೇಸ್' ಇದೆ ಎಂದು ಹೇಳಿಕೊಳ್ಳಲು ಬಯಸಿದ್ದನೋ ಏನೋ... ಆದರೆ, ಅದಕ್ಕೆ ಅವಕಾಶವೇ ಸಿಗಲಿಲ್ಲ.
ಕೇಸು ತೆಗೆದುಕೊಳ್ಳುವ ವಕೀಲರು, ದೂರು ಸ್ವೀಕರಿಸಿ ತನಿಖೆ ನಡೆಸುವ ಪೊಲೀಸರು, ಕೊನೆಗೆ ವಿಚಾರಣೆ ನಡೆಸುವ ನ್ಯಾಯಾಧೀಶರು ಎಲ್ಲರಿಗೂ ಪ್ರಕರಣದಲ್ಲಿ ಸಿಲುಕಿರುವವರು ಹೆದರುವವರೇ. ಆದರೆ, ಇಲ್ಲಿ ಪರಿಸ್ಥಿತಿ ಉಲ್ಟಾ. ಈ 'ವಿಶೇಷ ಪ್ರಕರಣ' ಕಂಡು ನ್ಯಾಯಾಧೀಶರ ಆದಿಯಾಗಿ ಎಲ್ಲರೂ ಬೆಚ್ಚಿಬಿದ್ದರು. ಹೆದರಿ ಕಂಗಾಲಾಗಿ ದಿಕ್ಕಾಪಾಲಾಗಿ ಓಡಿದರು.
ಕಾಡಿನಲ್ಲಿ ಧ್ಯಾನ ಮಾಡಲು ಹೋಗಿ ಚಿರತೆಗೆ ಬಲಿಯಾದ ಬೌದ್ಧ ಬಿಕ್ಕು
ಹೀಗೆ ಚೊಟಿಲಾದ ಮ್ಯಾಜಿಸ್ಟ್ರೇಟ್ ಕೋರ್ಟ್ ಕಲಾಪದ ವೇಳೆ ಅನಿರೀಕ್ಷಿತವಾಗಿ ಭೇಟಿ ನೀಡಿ ಎಲ್ಲರಲ್ಲೂ ನಡುಕ ಹುಟ್ಟಿಸಿದ್ದು ಒಂದು ಚಿರತೆ.
ಪಾಳು ಮನೆಯಲ್ಲಿ ಅಡಗಿತ್ತು
ಈ ಚಿರತೆ ಮೊದಲು ಮ್ಯಾಜಿಸ್ಟ್ರೇಟ್ ಕೋರ್ಟ್ ಪಕ್ಕದ ಖಾಲಿ ಮನೆಯೊಂದರ ಒಳಗೆ ಅವಿತುಕೊಂಡಿತ್ತು. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಲ್ಲಿಗೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ, ತಪ್ಪಿಸಿಕೊಂಡ ಚಾಲಾಕಿ ಚಿರತೆ ಕೋರ್ಟ್ ಮತ್ತು ಮನೆ ಎರಡಕ್ಕೂ ಹೊಂದಿಕೊಂಡಿದ್ದ ತಡೆಗೋಡೆಯನ್ನು ಜಿಗಿದು ನ್ಯಾಯಾಲಯದ ಆವರಣದೊಳಗೆ ಪ್ರವೇಶಿಸಿತು.
ಬಳ್ಳಾರಿಯಲ್ಲಿ ಮೂರು ವರ್ಷದ ಮಗುವನ್ನು ಹೊತ್ತೊಯ್ದ ಚಿರತೆ
ಹೊರಗೆ ಬಂದು ಬಾಗಿಲು ಮುಚ್ಚಿದರು
ಸುತ್ತಲೂ ನಿಂತಿದ್ದ ಜನರನ್ನು ಕಂಡು ಗಾಬರಿಯಾದ ಚಿರತೆ, ಕೋರ್ಟ್ನ ಕಿಟಕಿ ಮೂಲಕ ಕೊಠಡಿಯೊಳಗೆ ನುಗ್ಗಿತು. ಕೊಠಡಿಯಲ್ಲಿ ಸುಮಾರು ಹತ್ತು ಮಂದಿ ಸಿಬ್ಬಂದಿ ಇದ್ದರು. ಚಿರತೆ ಕಂಡು ಒಳಗಿದ್ದ ನ್ಯಾಯಾಧೀಶರು, ವಕೀಲರು ಮತ್ತು ಇತರೆ ಸಿಬ್ಬಂದಿ ತಕ್ಷಣ ಎಚ್ಚೆತ್ತುಕೊಂಡು ಹೇಗೋ ಅದರಿಂದ ತಪ್ಪಿಸಿಕೊಂಡು ಕೂಡಲೇ ಹೊರಬಂದು ಹೊರಗಿನಿಂದ ಬಾಗಿಲುಗಳನ್ನು ಮುಚ್ಚಿದರು.
ಉಡುಪಿಯ ಬೈಂದೂರಿನಲ್ಲಿ ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆ ರಕ್ಷಣೆ
ಒಳಗೆ ಸಿಲುಕಿದ್ದ ಇಬ್ಬರು
ಇಷ್ಟೆಲ್ಲ ಸಮಯಪ್ರಜ್ಞೆ ಮೆರೆದರೂ, ಹೊರಗಿನಿಂದ ಬಾಗಿಲುಗಳನ್ನು ಮುಚ್ಚಿದ ಬಳಿಕ ಹೊರಗಿದ್ದ ಸಿಬ್ಬಂದಿಗೆ, ಇಬ್ಬರು ಒಳಗೇ ಉಳಿದುಕೊಂಡಿದ್ದು ಗೊತ್ತಾಯಿತು. ಆದರೆ, ಬಾಗಿಲು ತೆರೆದು ಅವರನ್ನು ರಕ್ಷಿಸುವ ಸಾಹಸಕ್ಕೆ ಮುಂದಾಗುವ ಧೈರ್ಯ ಅವರಲ್ಲಿ ಇರಲಿಲ್ಲ. ಅದೃಷ್ಟವಶಾತ್, ನ್ಯಾಯಾಲಯದ ಕೊಠಡಿಯೊಳಗೆ ಸಣ್ಣದೊಂದು ಚೇಂಬರ್ ಇತ್ತು. ಅದರೊಳಗೆ ಇಬ್ಬರೂ ಕುಳಿತು ಬಾಗಿಲು ಭದ್ರಪಡಿಸಿಕೊಂಡಿದ್ದರು.
|
ಕಿಟಕಿ ಒಡೆದು ರಕ್ಷಣೆ
ಚಿರತೆಯನ್ನು ಸೆರೆ ಹಿಡಿಯುವುದಕ್ಕಿಂತಲೂ ಮೊದಲು ಒಳಗಿದ್ದ ಇಬ್ಬರನ್ನು ರಕ್ಷಿಸುವುದಕ್ಕೆ ಅರಣ್ಯಾಧಿಕಾರಿಗಳು ಆದ್ಯತೆ ನೀಡಿದರು. ಏಕೆಂದರೆ ಚಿರತೆ ಆ ಚೇಂಬರ್ ಬಾಗಿಲನ್ನು ಮುರಿಯುವ ಸಾಧ್ಯತೆ ಇತ್ತು. ಆದರೆ, ಮುಖ್ಯದ್ವಾರವನ್ನು ತೆರೆದು ಅಲ್ಲಿಂದ ಅವರನ್ನು ಹೊರಗೆ ಕರೆತರುವುದು ಸಾಧ್ಯವೇ ಇರಲಿಲ್ಲ. ಕೊನೆಗೆ ಚೇಂಬರ್ನ ಕಿಟಕಿಯನ್ನು ಒಡೆದು ಅವರನ್ನು ರಕ್ಷಿಸಲಾಯಿತು.
ಅರವಳಿಕೆ ಮದ್ದು ನೀಡಿ ಸೆರೆ
ಬಳಿಕ ಮುಖ್ಯದ್ವಾರವನ್ನು ತೆರೆದು ಚಿರತೆಗೆ ಅರವಳಿಕೆ ಮದ್ದು ಹಾರಿಸಿ ಅದನ್ನು ಸೆರೆ ಹಿಡಿಯುವಲ್ಲಿ ಇಲಾಖೆ ಸಿಬ್ಬಂದಿ ಯಶಸ್ವಿಯಾದರು. ಅದು ಎರಡು ವರ್ಷದ ಚಿರತೆಯಾಗಿದ್ದು, ಸಮೀಪದ ಕಾಡಿನಲ್ಲಿ ಅನೇಕ ಚಿರತೆಗಳಿವೆ. ಈ ಚಿರತೆ ದಾರಿ ತಪ್ಪಿ ಪಟ್ಟಣದೊಳಗೆ ಪ್ರವೇಶಿಸಿರಬಹುದು. ಅದನ್ನು ಮರಳಿ ಕಾಡಿನೊಳಗೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.
ಸಚಿವಾಲಯಕ್ಕೂ ಬಂದಿತ್ತು
ಕಳೆದ ನವೆಂಬರ್ 5ರಂದು ಗಾಂಧಿನಗರದಲ್ಲಿ ಚಿರತೆಯೊಂದು ಸಚಿವಾಲಯದೊಳಗೆ ಪ್ರವೇಶಿಸಿ ಆತಂಕ ಸೃಷ್ಟಿಸಿತ್ತು. ದಿನವಿಡೀ ಕಾರ್ಯಾಚರಣೆ ನಡೆಸಿ ಅದನ್ನು ಸೆರೆ ಹಿಡಿಯಲಾಗಿತ್ತು. ನಸುಕಿನಲ್ಲಿ ಅದು ಆವರಣ ಪ್ರವೇಶಿಸಿದ್ದು ಸಿಸಿಟಿವಿ ದೃಶ್ಯಾವಳಿಗಳಿಂದ ಗೊತ್ತಾಗಿತ್ತು. ಗುಜರಾತ್ನಲ್ಲಿ ಇತ್ತೀಚೆಗೆ ಚಿರತೆಗಳ ದಾಳಿ ಹೆಚ್ಚಾಗಿದೆ. ನವೆಂಬರ್ 21 ಮತ್ತು 26ರಂದು ದಕ್ಷಿಣ ಗುಜರಾತ್ನಲ್ಲಿ ಚಿರತೆ ದಾಳಿಗೆ ಮೂವರು ಬಲಿಯಾಗಿದ್ದರು. 2016ರ ಗಣತಿ ಪ್ರಕಾರ ರಾಜ್ಯದಲ್ಲಿ 1,395 ಚಿರತೆಗಳಿವೆ.