ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣ: ಮೂವರು ಪೊಲೀಸರು ಆರೋಪಮುಕ್ತ
ಅಹಮದಾಬಾದ್, ಮಾರ್ಚ್ 31: ಇಶ್ರತ್ ಜಹಾನ್, ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ್ ಪಿಳ್ಳೈ ಮತ್ತು ಇತರೆ ಇಬ್ಬರನ್ನು 2004ರ ಜೂನ್ ತಿಂಗಳಲ್ಲಿ ನಕಲಿ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮೂವರು ಪೊಲೀಸ್ ಅಧಿಕಾರಿಗಳನ್ನು ಅಹಮದಾಬಾದ್ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.
ಐಪಿಎಸ್ ಅಧಿಕಾರಿ ಜಿಎಲ್ ಸಿಂಘಾಲ್, ನಿವೃತ್ತ ಪೊಲೀಸ್ ಅಧಿಕಾರಿ ತರುಣ್ ಬಾರೋಟ್ ಮತ್ತು ಅನಜು ಚೌಧರಿ ಅವರು ಶನಿವಾರ ಬಿಡುಗಡೆ ಅರ್ಜಿಗಳನ್ನು ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಗುಜರಾತ್ ಸರ್ಕಾರವು ಈ ಅಧಿಕಾರಿಗಳನ್ನು ವಿಚಾರಣೆ ನಡೆಸಲು ಸಿಬಿಐಗೆ ಅನುಮತಿ ನೀಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಬುಧವಾರ ವಿಚಾರಣೆಯನ್ನು ಕೈಬಿಟ್ಟಿದೆ. ಇದರ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸದೆ ಇದ್ದರೆ ವಿಚಾರಣೆ ಅಂತ್ಯಗೊಳ್ಳಲಿದೆ.
ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್: ವಂಜಾರಾ ಆರೋಪ ಮುಕ್ತ
ಈ ಹಿಂದೆ ನಾಲ್ವರು ಅಧಿಕಾರಿಗಳ ಬಿಡುಗಡೆಯ ವಿರುದ್ಧ ಸಿಬಿಐ ಮೇಲ್ಮನವಿ ಸಲ್ಲಿಸಿರಲಿಲ್ಲ. ಹೀಗಾಗಿ ಕೊನೆಯ ಮೂರು ಅಧಿಕಾರಿಗಳು ಕೂಡ ದೋಷಮುಕ್ತಗೊಳಿಸುವಂತೆ ಅರ್ಜಿ ಸಲ್ಲಿಸಲು ಸೂಕ್ತ ಬುನಾದಿ ಸಿಕ್ಕಂತಾಗಿತ್ತು. ಎನ್ಕೌಂಟರ್ನಲ್ಲಿ ಹತ್ಯೆಗೀಡಾದ ಇಶ್ರತ್ ಜಹಾನ್ ಮತ್ತು ಇತರೆ ನಾಲ್ವರು ಭಯೋತ್ಪಾದಕರಲ್ಲ ಎನ್ನುವುದನ್ನು ಸಾಬೀತುಪಡಿಸಲು ಮೇಲ್ನೋಟಕ್ಕೆ ಯಾವುದೇ ದಾಖಲೆ ಕಂಡುಬಂದಿಲ್ಲ ಎಂದು ಸಿಬಿಯ ನ್ಯಾಯಾಧೀಶ ವಿಆರ್ ರಾವಲ್ ಹೇಳಿದ್ದಾರೆ.
ಪಾಕಿಸ್ತಾನಿ ರಾಷ್ಟ್ರೀಯರು ಎನ್ನಲಾಗಿದ್ದ ಇಶ್ರತ್ ಜಹಾನ್, ಪ್ರಾಣೇಶ್ ಪಿಳ್ಳೈ, ಅಮ್ಜದ್ ಅಲಿ ರಾಣಾ ಮತ್ತು ಜೀಶಾನ್ ಜೋಹರ್ ಅವರನ್ನು 2004ರ ಜೂನ್ 15ರಂದು ಗುಜರಾತ್ನ ಅಹಮದಾಬಾದ್ನಲ್ಲಿ ಅಪರಾಧ ದಳವು ಹತ್ಯೆ ಮಾಡಿತ್ತು. ಈ ನಾಲ್ವರು ಲಷ್ಕರ್ ಎ ತಯಬಾ ಸದಸ್ಯರಾಗಿದ್ದು, ಆಗಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಡಿಸಿಬಿ ಆರೋಪಿಸಿತ್ತು.
ನಕಲಿ ಎನ್ ಕೌಂಟರ್ : ಅಮಿತ್ ಶಾಗೆ ಕೋರ್ಟಿನಿಂದ ಕ್ಲೀನ್ ಚಿಟ್
2013ರಲ್ಲಿ ಆರೋಪಪಟ್ಟಿ ಸಲ್ಲಿಸಿದ್ದ ಸಿಬಿಐ, ಐವರು ಪೊಲೀಸ್ ಅಧಿಕಾರಿಗಳಾದ ಪಿಪಿ ಪಾಂಡೆ, ವನ್ಸರಾ, ಎನ್ಕೆ ಅಮಿನ್, ಜೆಜಿ ಪಾರ್ಮರ್, ಸಿಂಘಾಲ್, ಬಾರೋಟ್ ಮತ್ತು ಚೌಧರಿ ಅವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಿತ್ತು.