ಗುಜರಾತ್ ನಲ್ಲಿ ಉಗ್ರರ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ
ಅಹ್ಮದಾಬಾದ್ (ಗುಜರಾತ್), ಫೆಬ್ರವರಿ 19: ಗುಜರಾತ್ ನಲ್ಲಿ ಭಯೋತ್ಪಾದಕರಿಂದ ದಾಳಿಗಳು ಆಗಬಹುದು ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ವಾರವಷ್ಟೇ ಪುಲ್ವಾಮಾದಲ್ಲಿ ಭೀಕರ ಉಗ್ರ ದಾಳಿ ನಡೆದಿದ್ದು, ಗುಜರಾತ್ ನಲ್ಲಿನ ಭದ್ರತಾ ವ್ಯವಸ್ಥೆ ಬಗ್ಗೆ ಸೋಮವಾರದಂದು ಪರಿಶೀಲನೆ ಮಾಡಲಾಯಿತು.
ಭದ್ರತಾ ವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿ ವಿಜಯ್ ರೂಪಾಣಿ ಪರಿಶೀಲನೆ ನಡೆಸಿದ್ದಾರೆ. ಸರ್ದಾರ್ ಸ್ಮಾರಕ, ಸೋಮನಾಥ ದೇವಾಲಯ ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳಲ್ಲಿನ ಭದ್ರತಾ ವ್ಯವಸ್ಥೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆಗೆ ಗಾಂಧೀನಗರದಲ್ಲಿ ಸಭೆ ನಡೆಸಿದ್ದಾರೆ.
ಸ್ಫೋಟಕ್ಕೆ ಉಗ್ರರು ಬಳಸುತ್ತಿರುವ ಹೊಸ ಟೆಕ್ನಿಕ್ ಏನು ಗೊತ್ತಾ?
ಗುಪ್ತಚರ ಇಲಾಖೆ ಎಚ್ಚರಿಸಿರುವಂತೆ ಸಂಭವನೀಯ ಭಯೋತ್ಪಾದನಾ ದಾಳಿ ಹಿನ್ನೆಲೆಯಲ್ಲಿ ಗುಜರಾತ್ ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಆದರೆ ಪ್ರಮುಖ ಸ್ಥಳಗಳಲ್ಲಿ ನಾವು ಭದ್ರತೆಯನ್ನು ಬಿಗಿಯಾಗಿಯೇ ಮಾಡಿರುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪೊಲೀಸರ ಜತೆಗೆ ಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಜೆ.ಎನ್.ಸಿಂಗ್ ಹೇಳಿದ್ದಾರೆ. ಈ ಸಭೆಯಲ್ಲಿ ಡಿಜಿಪಿ ಶಿವಾನಂದ್ ಝಾ, ಗೃಹ ಕಾರ್ಯದರ್ಶಿ ಎ.ಎಂ.ತಿವಾರಿ, ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ಇದ್ದರು.