ಶ್ರಮಿಕ್ ರೈಲಿನಲ್ಲಿ ಹೊರಟ ಕಾರ್ಮಿಕರಿಗೆ ಕೊರೊನಾ ಅಂಟಲು ಇಷ್ಟೇ ಸಾಕು!
ಅಹ್ಮದಾಬಾದ್, ಮೇ.20: ಶ್ರಮಿಕ್ ರೈಲಿನಲ್ಲಿ ತಮ್ಮ ತಮ್ಮ ಊರಿಗೆ ವಾಪಸ್ ತೆರಳಲು ಅಹ್ಮದಾಬಾದ್ ನಲ್ಲಿ 1,000ಕ್ಕೂ ಅಧಿಕ ವಲಸೆ ಕಾರ್ಮಿಕರು ಸೇರಿದ್ದಾರೆ. ಭಾರತ ಲಾಕ್ ಡೌನ್ 4.0 ನಿಯಮವನ್ನು ಗಾಳಿ ತೂರಿ ಸಾಮಾಜಿಕ ಅಂತರವಿಲ್ಲದೇ ರೈಲಿಗಾಗಿ ಎದುರು ನೋಡುತ್ತಿದ್ದಾರೆ.
ಅಹ್ಮದಾಬಾದ್ ನಲ್ಲಿರುವ ಜಿಎಂಡಿಸಿ ಮೈದಾನದಲ್ಲಿ ನೂರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ನೆರೆದಿದ್ದಾರೆ. ಭಾರತೀಯ ರೈಲ್ವೆ ಸಚಿವಾಲಯವು ಅಹ್ಮದಾಬಾದ್ ವಿಭಾಗದಿಂದ ಬಿಹಾರಕ್ಕೆ 15 ರೈಲುಗಳ ಸಂಚಾರಕ್ಕೆ ಅನುಮತಿ ನೀಡಿದೆ.
ತುತ್ತಿನ ಚೀಲ ತುಂಬಿಸಿಕೊಳ್ಳಲು ವಲಸೆ ಹೋದ ಕಾರ್ಮಿಕರಿಗೆಂಥಾ ಶಿಕ್ಷೆ?
ಗುಜರಾತ್ ನಲ್ಲಿ ದುಡಿಯಲು ವಲಸೆ ಬಂದಿದ್ದ ಕಾರ್ಮಿಕರಿಗೆ ಲಾಕ್ ಡೌನ್ ನಿಂದಾಗಿ ಉದ್ಯೋಗ ಇಲ್ಲದಂತೆ ಆಗಿದೆ. ಇದರಿಂದ ನೊಂದ ಕಾರ್ಮಿಕರು ಕುಟುಂಬ ಸಮೇತರಾಗಿ ಸ್ವಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ. ಬಿಹಾರ ರಾಜ್ಯದ ಭಗಲ್ ಪುರ್ ಮೂಲದ ಕಾರ್ಮಿಕರೇ ಅತಿಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಶ್ರಮಿಕ್ ರೈಲಿನ ಬಗ್ಗೆ ಕಾರ್ಮಿಕರ ಮೊಬೈಲ್ ಗೆ ಮೆಸೇಜ್
ಅಹ್ಮದಾಬಾದ್ ನಿಂದ ಬಿಹಾರಕ್ಕೆ ತೆರಳುವ ರೈಲಿನ ಬಗ್ಗೆ ಸಂಬಂಧಿಸಿದಂತೆ ವಲಸೆ ಕಾರ್ಮಿಕರ ಮೊಬೈಲ್ ಗೆ ಮೆಸೇಜ್ ನೀಡಲಾಗಿದೆ. ಇನ್ನು, ಕೆಲವು ಕಾರ್ಮಿಕರ ಮೊಬೈಲ್ ಗೆ ಯಾವುದೇ ರೀತಿ ಸಂದೇಶಗಳನ್ನು ಕಳಿಸಿಲ್ಲ. ರೈಲ್ವೆ ಸಂಚಾರಕ್ಕೆ ಅನುಮತಿಯನ್ನೂ ನೀಡಿಲ್ಲ. ಹೀಗಿದ್ದರೂ ಅಹ್ಮದಾಬಾದ್ ನ ಜಿಎಂಡಿಸಿ ಮೈದಾನದಲ್ಲಿ ನೂರಾರು ಕಾರ್ಮಿಕರು ನೆರೆದಿದ್ದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
3 ಗಂಟೆಗೂ ಮೊದಲೇ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ
ಅಹ್ಮದಾಬಾದ್ ಗ್ರಾಮೀಣ ಭಾಗದಲ್ಲಿದ್ದ ವಲಸೆ ಕಾರ್ಮಿಕರನ್ನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಬರುವುದಕ್ಕೆ ರಾಜ್ಯ ಸರ್ಕಾರವು ಬಸ್ ಗಳ ವ್ಯವಸ್ಥೆ ಕಲ್ಪಿಸಿದೆ. ಇದರಲ್ಲೂ ಸಾರಿಗೆ ಇಲಾಖೆಯಿಂದ ಭಾರೀ ಎಡವಟ್ಟಾಗಿದೆ. ಮಧ್ಯಾಹ್ನ 1 ಗಂಟೆಯ ರೈಲಿನಲ್ಲಿ ಪ್ರಯಾಣಿಸಬೇಕಿರುವ ವಲಸೆ ಕಾರ್ಮಿಕರನ್ನು ಕರೆ ತರುವುದಕ್ಕಾಗಿ ಬೆಳಗ್ಗೆ 11 ಗಂಟೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೂರು ಗಂಟೆಗೂ ಮೊದಲೇ ಕಾರ್ಮಿಕರನ್ನು ಕರೆದುಕೊಂಡು ಬಂದು ಈ ಮೈದಾನದಲ್ಲಿ ಬಿಟ್ಟಿದ್ದಾರೆ ಎನ್ನುವುದು ಕಾರ್ಮಿಕರ ಆರೋಪ.
ಉದ್ಯೋಗವಿಲ್ಲ ಸಂಪಾದನೆಯಿಲ್ಲ ಉಪವಾಸ ಯಾತನೆ
ಅಹ್ಮದಾಬಾದ್ ನಲ್ಲಿ ದುಡಿಮೆ ಹುಡಿಕಿಕೊಂಡು ಹೋಗಿದ್ದ ವಲಸೆ ಕಾರ್ಮಿಕರಿಗೆ ಇದೀಗ ಉದ್ಯೋಗವಿಲ್ಲ. ಇಷ್ಟುದಿನ ಸಂಪಾದಿಸಿದ ಅಷ್ಟೋ ಇಷ್ಟೋ ಹಣವು ಖಾಲಿಯಾಗಿದೆ. ಮನೆ ಬಾಡಿಗೆ ಕಟ್ಟುವಷ್ಟು ಹಣ ಕೂಡಾ ಕಾರ್ಮಿಕರಲ್ಲಿಲ್ಲ. ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ವಗ್ರಾಮಗಳಿಗೆ ವಾಪಸ್ ತೆರಳದೇ ಬೇರೆ ವಿಧಿಯಿಲ್ಲ ಎನ್ನುವುದು ಕಾರ್ಮಿಕರ ನೋವಿನ ನುಡಿಯಾಗಿದೆ.
ತಮಿಳುನಾಡಿನಲ್ಲಿ ಶ್ರಮಿಕ್ ರೈಲಿಗಾಗಿ ಕಾದುನಿಂತ ಕಾರ್ಮಿಕರು
ಉತ್ತರ ಪ್ರದೇಶ ಮತ್ತು ಬಿಹಾರ ಭಾಗಗಳಿಗೆ ಸಂಚರಿಸುವ ಶ್ರಮಿಕ್ ರೈಲಿನಲ್ಲಿ ಪ್ರಯಾಣಿಸಿ ತಮ್ಮ ತಮ್ಮ ಊರು ಸೇರಿಕೊಳ್ಳುವುದಕ್ಕೆ ತಮಿಳುನಾಡಿನಲ್ಲೂ ವಲಸೆ ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಕೊಯಂಬತ್ತೂರ್ ಮತ್ತು ಸುಂದರಪುರಂ ಪ್ರದೇಶದಲ್ಲಿ ನೂರಾರು ವಲಸೆ ಕಾರ್ಮಿಕರು ರೈಲಿಗಾಗಿ ಕಾದು ನಿಂತಿದ್ದರು. ಈ ವೇಳೆ ಭಾರತ ಲಾಕ್ ಡೌನ್ 4.0 ನಿಯಮದ ಸ್ಪಷ್ಟ ಉಲ್ಲಂಘನೆ ಆಗಿರುವುದು ಕಂಡು ಬಂದಿತು.