ಮದುಮಗಳಿಲ್ಲದೆ ಮದುವೆ, ಇದರ ಹಿಂದಿದೆ ಮನಮಿಡಿಯುವ ಕಥೆ
ಹಿಮ್ಮತ್ ನಗರ (ಗುಜರಾತ್), ಮೇ 13 : ಈ ಸುದ್ದಿ ತಮಾಷೆಯನ್ನಿಸಬಹುದು, ಇದೇನಿದು ಹುಚ್ಚುತನ ಅಂತ ಅನ್ನಿಸಬಹುದು. ಆದರೆ, ಈ 27 ವರ್ಷದ ಯುವಕನ 'ವಿಶೇಷ' ಮದುವೆಯ ಹಿಂದೆ ಹೃದಯ ಹಿಂಡುವಂಥ ದಾರುಣ ಕಥೆಯೂ ಇದೆ.
ಮದುಮಗಳೇ ಇಲ್ಲದೆ, 27 ವರ್ಷದ ಮಗನ ಮದುವೆಯನ್ನು ಅಪ್ಪ ಅತ್ಯಂತ ಅದ್ದೂರಿಯಿಂದ, ಶಾಸ್ತ್ರಬದ್ಧವಾಗಿ, ಯಾವುದೇ ವೈಭವೋಪೇತ ಮದುವೆಗಳಿಗೆ ಕಮ್ಮಿಯಿಲ್ಲದಂತೆ ಮಾಡಿದ್ದಾರೆ. ಮದುವೆ ಹಿಂದಿನ ದಿನದ ಸಂಗೀತ್ ದಿಂದ ಹಿಡಿದುಕೊಂಡು, ಕುದುರೆಯ ಮೇಲಿನ ಮೆರವಣಿಗೆ, ಬಂಧು ಬಾಂಧವರ ಕುಣಿತ, 800 ಬಂಧುಗಳಿಗೆ ಸಮೃದ್ಧ ಮೃಷ್ಟಾನ್ನ ಭೋಜನ ಎಲ್ಲವೂ ಮಗನ ಇಚ್ಛೆಯಂತೆ ಆಗಿದೆ. ಆದರೆ ಈ ಮದುವೆಯಲ್ಲಿ ಇರದಿದ್ದದ್ದು ಒಂದೇ, ಅದು ತಾಳಿ ಕಟ್ಟಿಸಿಕೊಳ್ಳಬೇಕಾಗಿದ್ದ 'ಮದುಮಗಳು'!
ಪುಲ್ವಾಮಾ ದಾಳಿಯಿಂದ ನಿಂತಿದ್ದ ಮದುವೆಗೆ ಕೊನೆಗೂ ಮುಹೂರ್ತ ಕೂಡಿಬಂತು
ಈಗಿನ ಜಮಾನಾದಲ್ಲಿ, ಗಂಡು ಹೆಣ್ಣಿನ ನಡುವಿರಲಿ, ಕತ್ತೆ ಕತ್ತೆಗಳಿಗೆ, ಕಪ್ಪೆ ಕಪ್ಪೆಗಳಿಗೆ, ನಾಯಿ ನರಿಗಳ ನಡುವೆಯೂ ಮದುವೆ ಮಾಡುವವರಿದ್ದಾರೆ. ವಧು ಒಂದು ದೇಶದಲ್ಲಿ, ವರ ಮತ್ತೊಂದು ದೇಶದಲ್ಲಿದ್ದಾಗಲೂ ಅವರಿಬ್ಬರ ಮದುವೆ ನಡೆದಿದೆ. ಆದರೆ, ಮದುಮಗಳೇ ಇಲ್ಲದೆ ಮದುವೆ ನಡೆದಿದ್ದನ್ನು ನೋಡಿದ್ದೀರಾ ಅಥವಾ ಕೇಳಿದ್ದೀರಾ? ನಂಬಲು ಕಷ್ಟವಾದರೂ ಇದು ಸತ್ಯವಾಗಿ ನಡೆದ ಘಟನೆ. ಈ ಸತ್ಯವಾದ ಘಟನೆಯ ಹಿಂದೆ ಮನಮಿಡಿಯುವ ಕಥೆಯೂ ಇದೆ.
ತನ್ನ ತಾಯಿಯನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದ ಯುವಕ ಅಜಯ್ ಬಾರೋತ್ ಬುದ್ಧಿ ಅಷ್ಟಾಗಿ ಬೆಳೆದಿಲ್ಲ. ತಾಯಿ ಹಲವರ್ಷಗಳ ಹಿಂದೆಯೇ ತೀರಿಕೊಂಡಿದ್ದರಿಂದ ಅಮ್ಮನ ಅಕ್ಕರೆಯೂ ಸಿಕ್ಕಿಲ್ಲ. ಅಪ್ಪನೇ ಅಮ್ಮನಂತೆ ಮಗನನ್ನು ಮುದ್ದಿನಿಂದ ಬೆಳೆಸಿದ್ದರು. ಆದರೆ, ಮೊದಲಿನಿಂದಲೂ ಅಷ್ಟೇ ಮಗನಿಗೆ ಮದುವೆಯಾಗಬೇಕೆಂಬ ಹುಚ್ಚು. ಆದರೆ ವಧು ಸಿಗಬೇಕಲ್ಲ?
ಮದುವೆಯಾದ ಮರುಗಳಿಗೆ ಗಂಡನಿಂದ ಹೆಂಡತಿಯ ಕನ್ಯತ್ವ ಪರೀಕ್ಷೆ
ತನ್ನ ಹಳ್ಳಿಯಲ್ಲಿ ಮದುವೆಗಳನ್ನು ನೋಡಿದಾಗಲೆಲ್ಲ, ಮದುಮಗ ಕುದುರೆಯ ಮೇಲೆ ಕುಳಿತು ಮೆರವಣಿಗೆ ಮಾಡಿಕೊಂಡಾಗಲೆಲ್ಲ ಅಜಯ್ ಕೂಡ ಹಾಗೆಯೇ ಮದುವೆ ಆಗಬೇಕೆಂದು ಕನಸು ಕಾಣುತ್ತಿದ್ದ. ತಾನೂ ಆ ರೀತಿಯಲ್ಲಿ ಮದುವೆಯಾಗಬೇಕೆಂಬ ಆತನ ಮುಗ್ಧ ಪ್ರಶ್ನೆಗಳಿಗೆ ಅಪ್ಪನ ಬಳಿ ಉತ್ತರ ಇರುತ್ತಿರಲಿಲ್ಲ. ಆತನ ಸ್ಥಿತಿ ನೆನೆಸಿಕೊಂಡಾಗಲೆಲ್ಲ ಅಪ್ಪನ ಕಣ್ಣಾಲಿಗಳು ತುಂಬಿ ಬರುತ್ತಿದ್ದವು. ಆದರೆ, ಮಾಡುವುದಾದರೂ ಏನು?
ಕಡೆಗೂ ಅಪ್ಪ ಒಂದು ನಿರ್ಧಾರಕ್ಕೆ ಬಂದರು. ತಮ್ಮ ಬಂಧುಗಳೊಂದಿಗೆ ಚರ್ಚಿಸಿದರು. ವಧುವಿಗೆ ತಾಳಿ ಕಟ್ಟುವುದೊಂದನ್ನು ಹೊರತುಪಡಿಸಿ, ಮದುವೆಯಲ್ಲಿ ನಡೆಯುವ ಎಲ್ಲ ಆಚರಣೆಗಳನ್ನು ಮಗನಿಗಾಗಿ ನೆರವೇರಿಸಲು ವಿಷ್ಣು ಬಾರೋತ್ ಅವರು ನಿರ್ಧರಿಸಿದರು. ಮಗನಿಗೆ, ತಾನೂ ಮದುವೆಯಾಗಿದ್ದೇನೆ ಎಂಬ ಭಾವನೆ ಬರುವಂತೆ ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ಆಯೋಜಿಸಿದರು ವಿಷ್ಣು ಬಾರೋತ್.
ವಿವಾಹೇತರ ಸಂಬಂಧದ ರಾಜಧಾನಿ ಬೆಂಗಳೂರು!
"ಇದನ್ನು ನೋಡಿ ಸಮಾಜ ಏನು ಅನ್ನುತ್ತದೆ ಎಂಬುದನ್ನು ಎಳ್ಳಷ್ಟೂ ಚಿಂತಿಸದೆ ನನ್ನ ಮಗನ ಬಹುಕಾಲದ ಕನಸನ್ನು ನನಸಾಗಿಸಿದ್ದೇನೆ ಎಂಬ ಸಂತೃಪ್ತಿ ನನಗಿದೆ" ಎಂದು ಅಪ್ಪ ಭಾವುಕರಾಗುತ್ತಾರೆ. ಬಂದ ಅತಿಥಿಗಳೆಲ್ಲ ಹೊಟ್ಟೆ ತುಂಬ ಉಂಡಿದ್ದಾರೆ, ಮದುವೆಯಲ್ಲಿ ನಡೆಯುವಂತೆ ಮೆರವಣಿಗೆಯಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದ್ದಾರೆ. ಎಲ್ಲವೂ ಬುದ್ಧಿ ಅಷ್ಟಾಗಿ ಬಲಿತಿಲ್ಲದ ಅಜಯ್ ಗಾಗಿ.
"ಅಜಯ್ ಯಾವುದೇ ಮದುವೆಯನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಅಲ್ಲಿ ನುಡಿಸುವ ಸಂಗೀತ, ವಾದ್ಯಗಳ ಮೇಳವೆಂದರೆ ಆತನಿಗೆ ತುಂಬಾ ಇಷ್ಟ. ಹೀಗಾಗಿ ಹಳ್ಳಿಯಲ್ಲಿ ನಡೆಯುವ ಯಾವುದೇ ಮದುವೆಯನ್ನು ಆತ ಮಿಸ್ ಮಾಡಿಕೊಳ್ಳುವುದಿಲ್ಲ. ಫೆಬ್ರವರಿಯಲ್ಲಿ ನಡೆದ ನನ್ನ ಮಗನ ಮದುವೆಯನ್ನು ನೋಡಿ, ಆತನೂ ಮದುವೆಯಾಗಬೇಕೆಂದು ಆಕಾಂಕ್ಷೆ ವ್ಯಕ್ತಪಡಿಸಿದ್ದ. ಈ ಆಸೆಯನ್ನು ನೆರವೇರಿಸುವ ಉದ್ದೇಶವನ್ನು ಅಣ್ಣ ಮುಂದಿಟ್ಟಾಗ ನಾವೆಲ್ಲ ಆತನಿಗೆ ಬೆಂಬಲವಾಗಿ ನಿಂತೆವು. ಮದುಮಗಳು ಇಲ್ಲದಿದ್ದರೂ ಮೆರವಣಿಗೆ ಸಹಿತ ಎಲ್ಲ ಕ್ರಿಯೆ ನೆರವೇರಿಸಿದೆವು" ಎಂದು ವಿಷ್ಣು ಅವರ ಸಹೋದರ ಹೇಳುತ್ತಾರೆ.
ಎಲ್ಲ ನೆಂಟರಿಗೂ ಆಮಂತ್ರಣ ಪತ್ರಿಕೆ ಹಂಚಿದ್ದಲ್ಲದೆ, ಗುಜರಾತಿ ಪದ್ಧತಿಯಂತೆ ಮದುವೆಯ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ. ಪೂಜಾರಿಗಳು ಮಂತ್ರಿ ಪಠಿಸಿದ್ದಾರೆ. "ಒಟ್ಟಿನಲ್ಲಿ ನನ್ನ ಸಹೋದರ ಅಜಯ್ ಸಂತೋಷದಿಂದಿರಬೇಕು ಎಂಬುದೇ ನಮ್ಮ ಇಚ್ಛೆಯಾಗಿತ್ತು. ಹೀಗೆ ಮಾಡಿ ನಾವು ಸಮಾಜದ ಯಾರ ಭಾವನೆಗಳಿಗೂ ಧಕ್ಕೆ ತರಬೇಕೆಂಬ ಉದ್ದೇಶ ಇರಲಿಲ್ಲ" ಎಂದು ಅಜಯ್ ಸಹೋದರಿ ಮಾಧ್ಯಮಗಳೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.