ಕೈ ನಾಯಕರಿಗೆ 'ಚಿಕನ್ ಸ್ಯಾಂಡ್ವಿಚ್' ಎಂದು ಕೆಣಕಿದ ಹಾರ್ದಿಕ್ ಪಟೇಲ್
ಕಾಂಗ್ರೆಸ್ ತೊರೆದ ಹಾರ್ದಿಕ್ ಪಟೇಲ್ ಪಕ್ಷದ ಹಿರಿಯ ನಾಯಕರ ವಿರುದ್ಧ 'ಚಿಕನ್ ಸ್ಯಾಂಡ್ವಿಚ್' ಎಂದು ಕೆಣಕಿದ್ದಾರೆ. ಗುಜರಾತ್ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಕಚ್ಚಾಟದ ನಡುವೆ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಇಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಗೆ ಕಾರಣವೇನು ಎಂಬ ವಿಚಾರವನ್ನು ತಿಳಿಸಲು ಟ್ವಿಟ್ ಮಾಡಿದ್ದಾರೆ. ಜೊತೆಗೆ ತಮ್ಮ ರಾಜೀನಾಮೆ ಪ್ರತಿಯ ಫೋಟೋ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕತ್ವದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಹಾರ್ದಿಕ್ ಪಟೇಲ್ ತಮ್ಮ ಪತ್ರದಲ್ಲಿ, "ಗುಜರಾತ್ ಕಾಂಗ್ರೆಸ್ನ ನಾಯಕರು ರಾಜ್ಯದ ಸಮಸ್ಯೆಗಳಿಂದ ದೂರವಿದ್ದಾರೆ. ಆದರೆ ದೆಹಲಿಯಿಂದ ಬಂದಿರುವ ನಾಯಕರಿಗೆ ಚಿಕನ್ ಸ್ಯಾಂಡ್ವಿಚ್ ಅನ್ನು ನೀಡಲು ಹೆಚ್ಚು ಗಮನಹರಿಸಿದ್ದಾರೆ. ಜೊತೆಗೆ ಅದನ್ನು ಅವರಿಗೆ ಸಮಯಕ್ಕೆ ಸರಿಯಾಗಿ ತಲುಪಿಸಲಾಗಿದೆ" ಎಂದು ಬರೆದಿದ್ದಾರೆ. ಪತ್ರದಲ್ಲಿ ಕಾಂಗ್ರೆಸ್ ಅನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಹಲವಾರು ಪ್ರಯತ್ನಗಳ ಹೊರತಾಗಿಯೂ, "ಪಕ್ಷವು ನಿರಂತರವಾಗಿ ದೇಶ ಮತ್ತು ಸಮಾಜದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ" ಎಂದು ಅವರು ಹೇಳಿದ್ದಾರೆ.
Breaking news: ಗುಜರಾತ್ ಕಾಂಗ್ರೆಸ್ಗೆ ಗುಡ್ ಬೈ ಹೇಳಿದ ಹಾರ್ದಿಕ್ ಪಟೇಲ್
ಪಕ್ಷದ ಹಿರಿಯ ನಾಯಕತ್ವಕ್ಕೆ ಗಂಭೀರತೆ ಇಲ್ಲ ಎಂದು ಪಾಟಿದಾರ್ ನಾಯಕ ಆರೋಪಿಸಿದ್ದಾರೆ. "ನಾನು ಹಿರಿಯ ನಾಯಕತ್ವವನ್ನು ಭೇಟಿಯಾದಾಗಲೆಲ್ಲ, ಗುಜರಾತ್ ಜನರ ಸಮಸ್ಯೆಗಳನ್ನು ಕೇಳಲು ನಾಯಕರು ನಿಜವಾಗಿಯೂ ಆಸಕ್ತಿ ಹೊಂದಿಲ್ಲ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಬದಲಿಗೆ ಅವರು ತಮ್ಮ ಮೊಬೈಲ್ನಲ್ಲಿ ಯಾವ ಸಂದೇಶಗಳನ್ನು ಸ್ವೀಕರಿಸಿದ್ದಾರೆಂಬುದನ್ನು ನೋಡಲು ಹೆಚ್ಚು ತಲ್ಲೀನರಾಗಿದ್ದಾರೆ..." ಎಂದಿದ್ದಾರೆ.
"ರಾಜೀನಾಮೆ ಬಳಿಕ ನಾನು ನಮ್ಮ ರಾಜ್ಯದ ಜನರಿಗಾಗಿ ಇನ್ನಷ್ಟು ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ" ಪತ್ರದ ಕೊನೆಯಲ್ಲಿ ಬರೆದಿದ್ದಾರೆ. ಗಮನಿಸಬೇಕಾದ ವಿಚಾರ ಅಂದರೆ ಇತ್ತೀಚೆಗೆ ಉದಯಪುರದಲ್ಲಿ ನಡೆದ ಕಾಂಗ್ರೆಸ್ನ ಚಿಂತನ ಶಿಬಿರದಲ್ಲಿ ಹಾರ್ದಿಕ್ ಪಟೇಲ್ ಭಾಗವಹಿಸಲಿಲ್ಲ.
ನಾನೊಬ್ಬ ರಾಮಭಕ್ತ, ಹೆಮ್ಮೆಯ ಹಿಂದೂ: ಹಾರ್ದಿಕ್ ಪಟೇಲ್ ಚಿತ್ತ ಎತ್ತ?
आज मैं हिम्मत करके कांग्रेस पार्टी के पद और पार्टी की प्राथमिक सदस्यता से इस्तीफा देता हूँ। मुझे विश्वास है कि मेरे इस निर्णय का स्वागत मेरा हर साथी और गुजरात की जनता करेगी। मैं मानता हूं कि मेरे इस कदम के बाद मैं भविष्य में गुजरात के लिए सच में सकारात्मक रूप से कार्य कर पाऊँगा। pic.twitter.com/MG32gjrMiY
— Hardik Patel (@HardikPatel_) May 18, 2022
ಕಳೆದ ಹಲವು ದಿನಗಳಿಂದ ಹಾರ್ದಿಕ್ ಪಟೇಲ್ ನಿರ್ಗಮನದ ಬಗ್ಗೆ ಊಹಾಪೋಹಗಳು ಸುತ್ತಿಕೊಂಡಿದ್ದವು. ಕಳೆದ ತಿಂಗಳು ಹಾರ್ದಿಕ್ ಪಟೇಲ್ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿರುವ ವೈಯಕ್ತಿಕ ವಿವರದಲ್ಲಿ ಪಕ್ಷದ ಹೆಸರನ್ನು ತೆಗೆದುಹಾಕಿದ್ದರು. ಕೇಸರಿ ಶಾಲಿ ಧರಿಸಿದ ಅವರ ಫೋಟೋ ಬದಲಾಯಿಸಿದ್ದರು. ಇದರಿಂದ ಹಲವು ವದಂತಿಗಳು ಹರಿದಾಡಿದ್ದವು. ಅವರು ಕಾಂಗ್ರೆಸ್ನಿಂದ ಹೊರಬರುವ ಸುಳಿವು ಇದು ಎಂಬ ಮಾತು ದಟ್ಟವಾಗಿ ಕೆಳಿಬರುತ್ತಿತ್ತು. ಈ ಹಿಂದೆಯೂ ಸಹ, ಹಾರ್ದಿಕ್ ಪಟೇಲ್ "ನರೇಶ್ ಪಟೇಲ್ ಅವರಂತಹ ನಾಯಕರನ್ನು ಅವಮಾನಿಸಿದ್ದಾರೆ ಮತ್ತು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ" ಎಂದು ತಮ್ಮದೇ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯನ್ನು "ಒಳ್ಳೆಯ ಕೆಲಸ ಮಾಡಿದೆ" ಎಂದು ಹೊಗಳಿದ ಹಾರ್ದಿಕ್ ಕಾಂಗ್ರೆಸ್ ಪಕ್ಷವನ್ನು ಬಹಿರಂಗವಾಗಿ ಟೀಕಿಸಿದರು.
ಆದರೆ ಇದಕ್ಕೂ ಉತ್ತರಿಸಿದ ಪಟೇಲ್, "ಪ್ರತಿಯೊಬ್ಬರೂ ವಾಟ್ಸಾಪ್ ಡಿಪಿಯನ್ನು ಬದಲಾಯಿಸುತ್ತಾರೆ, ಕೆಲವೊಮ್ಮೆ ಅವರ ಹೆಂಡತಿಯೊಂದಿಗೆ, ಕೆಲವೊಮ್ಮೆ ಅವರ ತಾಯಿಯೊಂದಿಗೆ. ನಾನು ಈಗಷ್ಟೇ ಕಾರ್ಯಾಧ್ಯಕ್ಷನಿಂದ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತನಾಗಿ ಬದಲಾಗಿದ್ದೇನೆ. ಅದರಲ್ಲಿ ತಪ್ಪೇನು? ನಾನು ಕಾಂಗ್ರೆಸ್ ಜೊತೆ ಇದ್ದೇನೆ" ಎಂದಿದ್ದರು.
(ಒನ್ಇಂಡಿಯಾ ಸುದ್ದಿ)