ಹಾರ್ದಿಕ್ ಪಟೇಲ್ ಲೋಕಸಭೆ ಚುನಾವಣೆ ಸ್ಪರ್ಧೆಗೆ 'ಕೋರ್ಟ್' ಅಡ್ಡಿ
ನವದೆಹಲಿ, ಮಾರ್ಚ್ 29: 2015 ರ ಪಾಟೀದಾರ್ ಚಳವಳಿಯ ಸಮಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಪರಾಧಿ ಎನಿಸಿರುವ ಪಾಟೀದಾರ್ ಸಮುದಾಯದ ನಾಯಕ, ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಅವರ ಸಂಸತ್ ಪ್ರವೇಶ ಕನಸಿಗೆ ಕೋರ್ಟ್ ಆದೇಶ ಅಡ್ಡಿಪಡಿಸುತ್ತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತಿನ ವಿಸ್ನಗರ್ ನ್ಯಾಯಾಲಯವು ಹಾರ್ದಿಕ್ ಪಟೇಲ್ ಅವರನ್ನು ದೋಷಿ ಎಂದು ಪರಿಗಣಿಸಿ, 2 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ ಗುಜರಾತ್ ಹೈಕೋರ್ಟಿನಲ್ಲಿ ಹಾರ್ದಿಕ್ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಮೇಲ್ಮನವಿ ತಿರಸ್ಕೃತಗೊಂಡಿದೆ. ಜನಪ್ರತಿನಿಧಿಗಳ ಕಾಯ್ದೆ 1951ರ ಅನ್ವಯ ಅಪರಾಧಿ ಎನಿಸಿರುವುದರಿಂದ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ
ಗುಜರಾತಿನ ಪಟೇಲರಿಗೆ ಮೀಸಲಾತಿ ಏಕೆ ಸಿಗುತ್ತಿಲ್ಲ?
2015 ರಲ್ಲಿ ನಡೆದ ಪಟೇಲ್ ಸಮುದಾಯದ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಹಲವು ಹಿಂಸಾಚಾರ ಘಟನೆಗಳು ನಡೆದಿದ್ದವು.
ಪಟೇಲ್ ಸಮುದಾಯದ ಕಣ್ಮಣಿ ಹಾರ್ದಿಕ್ ಪಟೇಲ್ ಗೆ 2 ವರ್ಷ ಜೈಲು ಶಿಕ್ಷೆ
ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಋಷಿಕೇಶ್ ಪಟೇಲ್ ಅವರ ವಿಸ್ನಗರ ಕಚೇರಿಯನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಅವರನ್ನು ದೋಷಿ ಎಂದು ಪರಿಗಣಿಸಲಾಗಿದೆ. ಎರಡು ವರ್ಷಗಳ ಕಾಲ ಜೈಲು ಶಿಕ್ಷೆಯ ಜೊತೆಗೆ 50,000 ರೂ. ದಂಡ ವಿಧಿಸಲಾಗಿದೆ.
2015ರ ಪಟೇಲ್ ಮೀಸಲಾತಿ ಹೋರಾಟ
2015 ರಲ್ಲಿ ನಡೆದ ಪಟೇಲ್ ಸಮುದಾಯದ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಹಲವು ಹಿಂಸಾಚಾರ ಪ್ರಕರಣಗಳು ನಡೆದಿದ್ದವು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಋಷಿಕೇಶ್ ಪಟೇಲ್ ಅವರ ವಿಸ್ನಗರ ಕಚೇರಿಯನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಅವರೊಂದಿಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಲಾಲ್ ಜೀ ಪಟೇಲ್, ಎಕೆ ಪಟೇಲ್ ಅವರನ್ನೂ ದೋಷಿ ಎಂದು ಪರಿಗಣಿಸಿ, ಅವರಿಗೂ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ 50,000 ರೂ. ದಂಡ ವಿಧಿಸಲಾಗಿದೆ.
ಗುಜರಾತ್ ಸರ್ಕಾರವನ್ನೇ ಅಲ್ಲಾಡಿಸಿದ್ದ ಹಾರ್ದಿಕ್
ಗುಜರಾತ್ ಸರ್ಕಾರವನ್ನೇ ಅಲ್ಲಾಡಿಸಿದ್ದ 25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಜೊತೆ ಅಭಿಮಾನಿಗಳ ದಂಡೇ ಇದೆ. ಪಟೇಲ್ ಸಮುದಾಯಕ್ಕೆ ಒಬಿಸಿ(ಇತರ ಹಿಂದುಳಿದ ವರ್ಗ) ಮಾನ್ಯತೆ ಸಿಗಬೇಕು ಎಂಬ ಬೇಡಿಕೆಯೊಂದಿಗೆ ಹೋರಾಟ ಆರಂಭಿಸಿದ ಪಟೇಲ್ ನಂತರ ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ, ರಾಜಕೀಯ ನಾಯಕರಾಗಿಯೂ ಬೆಳೆದರು. ಪಾಟೀದಾರ್ ಸಮುದಾಯಕ್ಕೆ ಸರ್ಕಾರಿ ಕೆಲಸ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕು ಎಂದು ಆರಂಭವಾದ ಹೋರಾಟ ವಿಕೋಪಕ್ಕೆ ತೆರಳಿ ಹಿಂಸಾಚಾರವಾಗಿ ಬದಲಾಗಿತ್ತು. 2015 ರ ಈ ಘಟನೆಯಲ್ಲಿ 14 ಜನ ಮೃತರಾಗಿದ್ದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾರ್ದಿಕ್
ಗುಜರಾತಿನಲ್ಲಿ ಪಟೇಲರ ಮೀಸಲಾತಿ ವಿಷಯವಾಗಿ ಕಳೆದ ಕೆಲ ವರ್ಷಗಳಿಂದ ಭಾರಿ ಸಂಚಲನ ಮೂಡಿಸಿರುವ ಪಾಟೀದಾರ್ ಮುಖಂಡ ಹಾರ್ದಿಕ್ ಪಟೇಲ್ ಅವರು ಮಾರ್ಚ್ 12, 2019ರಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್ಸಿನ ಉತ್ತರೀಯವನ್ನು ಹಾರ್ದಿಕ್ ಕೊರಳಿಗೆ ಹಾಕಿ, ಪಕ್ಷಕ್ಕೆ ಸ್ವಾಗತಿಸಿದರು.
ಗುಜರಾತಿನಲ್ಲಿ ಚುನಾವಣೆ ಲೆಕ್ಕಾಚಾರ
ಕಳೆದ ವಿಧಾನಸಭಾ ಚುನಾವಣೆಯಲ್ಲಿ 182 ಸ್ಥಾನಗಳ ಪೈಕಿ 81 ಸ್ಥಾನ ಗೆದ್ದು ಬಿಜೆಪಿಗೆ ಎಚ್ಚರಿಕೆ ನೀಡಿದ್ದ ಕಾಂಗ್ರೆಸ್ ಈ ಬಾರಿ ಲೋಕಸಭೆ ಚುನಾವಣೆಯಲ್ಲೂ ಅಚ್ಚರಿಯ ಫಲಿತಾಂಶ ನೀಡುವ ಉತ್ಸಾಹದಲ್ಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 26 ಸ್ಥಾನಗಳು ಬಿಜೆಪಿ ಪಾಲಾಗಿತ್ತು.