ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಹಾರ್ದಿಕ್ ಪಟೇಲ್ ನೇಮಕ
ಅಹಮದಾಬಾದ್, ಜುಲೈ 12: ಪಾಟೀದಾರ್ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸಿರುವ ಮುಖಂಡ ಹಾರ್ದಿಕ್ ಪಟೇಲ್(26) ಅವರು ಕಾಂಗ್ರೆಸ್ ಸೇರ್ಪಡೆಗೊಂಡ ವರ್ಷದಲ್ಲೇ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಗುಜರಾತ್ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಗೆ ಅಮಿತ್ ಚಾವ್ಡಾ ಅಧ್ಯಕ್ಷರಾಗಿದ್ದು, ಹಾರ್ದಿಕ್ ಪಟೇಲ್ ಅಲ್ಲದೆ, ತುಷಾರ್ ಚೌಧರಿ, ಕರ್ಸಾಂದಾಸ್ ಸೊನೆರಿ ಇಬ್ಬರು ಕಾರ್ಯಾಧ್ಯಕ್ಷರಿದ್ದಾರೆ. ಆನಂದ್ ಜಿಲ್ಲೆಗೆ ಮಹೇಂದ್ರ ಸಿಂಗ್ ಎಚ್ ಪಾರ್ಮಾರ್, ಸೂರತ್ ಜಿಲ್ಲೆಗೆ ಆನಂದ್ ಚೌಧರಿ ಹಾಗೂ ದ್ವಾರಕ ಜಿಲ್ಲೆಗೆ ಯಾಸಿನ್ ಗಜ್ಜಾನ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಎಐಸಿಸಿ ಪ್ರಕಟಿಸಿದೆ.
ಗುಜರಾತ್ ಸರ್ಕಾರ ಅಲ್ಲಾಡಿಸುತ್ತಿರುವ ಹಾರ್ದಿಕ್ ಪಟೇಲ್ ಯಾರು?
2015ರ ದೇಶದ್ರೋಹ ಪ್ರಕರಣದಲ್ಲಿ 2020ರ ಜನವರಿ 18ರಂದು ಹಾರ್ದಿಕ್ ಪಟೇಲ್ ಅವರನ್ನು ಬಂಧಿಸಲಾಗಿತ್ತು. 2015ರ ಪಾಟಿದಾರ್ ಕೋಟಾ ಆಂದೋಲನದ ವೇಳೆ ಹಾರ್ದಿಕ್ ಪಟೇಲ್ ದೇಶದ್ರೋಹದ ಹೇಳಿಕೆ ನೀಡಿದ್ದರು.
25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ 2017 ರ ಡಿಸೆಂಬರ್ ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲೇ ಸ್ಪರ್ಧಿಸಬೇಕಿತ್ತು. ಆದರೆ, ಚುನಾವಣೆಗೆ ಸ್ಪರ್ಧಿಸಲು ಬೇಕಿದ್ದ ಕನಿಷ್ಠ ವಯೋಮಿತಿ (25 ವರ್ಷ)ಯನ್ನು ಅವರು ಮೀರಿರದ ಕಾರಣ ಅವರು ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಕಳೆದ ವರ್ಷ ಮಾರ್ಚ್ 12ರಂದು ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡಿದ್ದ ಹಾರ್ದಿಕ್, ಲೋಕಸಭೆ ಚುನಾವಣೆಯಲ್ಲಿ ಜಾಮ್ ನಗರದಲ್ಲಿ ಸ್ಪರ್ಧಿಸಲು ಮುಂದಾಗಿದ್ದರು. ಆದರೆ, ಸ್ಪರ್ಧಿಸಲು ಚುನಾವಣಾ ಆಯೋಗದಿಂದ ಅನುಮತಿ ಸಿಕ್ಕಿರಲಿಲ್ಲ
ವೀರಾಮ್ ಗ್ರಾಮದ ಹಾರ್ದಿಕ್ ಪಟೇಲ್
ಅಹಮದಾಬಾದ್ ಜಿಲ್ಲೆಯ ವೀರಾಮ್ ಗ್ರಾಮದ 26 ವರ್ಷ ವಯಸ್ಸಿನ ಯುವಕ ಹಾರ್ದಿಕ್ ಪಟೇಲ್ ಈಗ ಗುಜರಾತಿನ ನವತಾರೆ. ಷಹಜನಬಾದ್ ಕಾಲೇಜಿನಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಬಿ.ಕಾಂ ಪದವಿ ಪಡೆದಿರುವ ಹಾರ್ದಿಕ್ ಕೌಟುಂಬಿಕ ವೃತ್ತಿಯಾದ ಜಲ ಉದ್ಯಮವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಬೆಂಬಲವಿಲ್ಲದೆ, ಸಮುದಾಯದ ಶಕ್ತಿ ನಂಬಿಕೊಂಡು ರಾಜಕೀಯಕ್ಕೆ ಬಂದಿದ್ದ ಹಾರ್ದಿಕ್ ಈಗ ದೇಶದ ಅತ್ಯಂತ ಪುರಾತನ ಪಾರ್ಟಿಗೆ ಶರಣೆಂದಿದ್ದಾರೆ.
ಮೀಸಲಾತಿ ಹೋರಾಟಗಾರ ಹಾರ್ದಿಕ್
ಮೂಲತಃ ಕೃಷಿಕರಾದ ಪಟೇಲ್ ಸಮುದಾಯದವರು ಕಾಲಕ್ರಮೇಣ ಜವಳಿ, ವಜ್ರ ಹಾಗೂ ಔಷಧ ತಯಾರಿಕ ಕ್ಷೇತ್ರದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. 70ರ ದಶಕಕ್ಕೂ ಮುನ್ನ ಕಾಂಗ್ರೆಸ್ ಬೆಂಬಲಿಸುತ್ತಿದ್ದ ಈ ಸಮುದಾಯ, 81ಹಾಗೂ 85ರಲ್ಲಿ ದಲಿತ- ಹಿಂದುಳಿದ ವರ್ಗಕ್ಕೆ ಮೀಸಲಾತಿ ವಿರೋಧಿಸಿ ಹೋರಾಟ ನಡೆಸಿದ್ದಾರೆ. 1992ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಯಾವುದೇ ರಾಜ್ಯವು ಶೇ.50ರಷ್ಟು ಮೀಸಲಾತಿ ನೀಡಲು ಅವಕಾಶವಿದೆ. ರಾಜ್ಯದಲ್ಲಿ ಒಬಿಸಿ ಶೇ.27, ಎಸ್ಟಿ-15 ಹಾಗೂ ಎಸ್ಸಿ -7 ಮೀಸಲಾತಿ ಹೊಂದಿದ್ದು, ಹೀಗಾಗಿ ನೀಡಲು ಸಾಧ್ಯವಿಲ್ಲ ಎಂಬುದು ರಾಜ್ಯ ಸರ್ಕಾರದ ವಾದ. ಆದರೆ, ಹಾರ್ದಿಕ್ ಪಟೇಲ್ ಮೀಸಲಾತಿ ಕೊಡಿಸುವ ಭರವಸೆ ಹೊಂದಿದ್ದಾರೆ.
ವಿಧಾನಸಭೆಗೂ ಸ್ಪರ್ಧಿಸಲು ಯತ್ನಿಸಿದ್ದ ಹಾರ್ದಿಕ್
2017 ರ ಡಿಸೆಂಬರ್ ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಹಾರ್ದಿಕ್ ಪಟೇಲ್ ಸ್ಪರ್ಧಿಸುವ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ, ಕೇವಲ 25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಅವರು, ಚುನಾವಣೆಗೆ ಸ್ಪರ್ಧಿಸುವ ಕನಿಷ್ಠ ವಯೋಮಿತಿಯನ್ನು ಹೊಂದಿಲ್ಲದ ಕಾರಣ ಅವರು ಚುನಾವಣೆ ಸ್ಪರ್ಧಿಸಿರಲಿಲ್ಲ. ಈ ಬಗ್ಗೆ ಹಾರ್ದಿಕ್ ಅನೇಕ ಬಾರಿ ಸ್ಪಷ್ಟನೆ ನೀಡಿದ್ದರು. ಆದರೆ, ಪುನಃ ವಿಧಾನಸಭೆ ಚುನಾವಣೆ ಸ್ಪರ್ಧಿಸುವ ನಿರೀಕ್ಷೆಯಿತ್ತು. ಆದರೆ, ಲೋಕಸಭೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಕಾಂಗ್ರೆಸ್ ಟೀಕಿಸಿದ್ದ ಹಾರ್ದಿಕ್ ನಂತರ ಕೈ ಹಿಡಿದರು
PAAS ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷವನ್ನು ಹಲವು ಬಾರಿ ಟೀಕಿಸಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬಾರದು ಎಂಬ ಅಭಿಪ್ರಾಯ ಹೊಂದಿರುವವರ ಪಟ್ಟಿಯಲ್ಲಿ ಹಾರ್ದಿಕ್ ಪಟೇಲ್ ಅಗ್ರಸಾಲಿನಲ್ಲಿದ್ದಾರೆ. ಆದ್ದರಿಂದ ಎನ್ ಡಿಎ ಗೆ ಪರ್ಯಾಯವಾಗಿ ಹುಟ್ಟಿಕೊಳ್ಳಲಿರುವ ಮಹಾಘಟಬಂಧನಕ್ಕೂ ಈಗಾಗಲೇ ಹಾರ್ದಿಕ್ ತಮ್ಮ ಬೆಂಬಲ ಸೂಚಿಸಿದ್ದರು. ಇದೀಗ ಅಧಿಕೃತವಾಗಿ ಅವರು ಕಾಂಗ್ರೆಸ್ ಗೆ ಸೇರಿದ್ದು, ಕಾಂಗ್ರೆಸ್ ಗೆ ಮತ್ತಷ್ಟು ಬಲ ನೀಡಿದೆ.