ಜೀವ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಹಾರಿದರು
ಸೂರತ್, ಮೇ 25: ಗುಜರಾತ್ನ ಸೂರತ್ನಲ್ಲಿರುವ ತಕ್ಷಿಲಾ ಆರ್ಕೇಡ್ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಅವಘಡ ಕನಿಷ್ಠ 20 ಮಂದಿ ವಿದ್ಯಾರ್ಥಿಗಳ ಬದುಕನ್ನು ಸುಟ್ಟುಹಾಕಿದೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸಂಜೆ 4 ಗಂಟೆ ಸುಮಾರಿಗೆ ಕಟ್ಟಡದ ಎರಡನೆಯ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹಾಗೆಯೇ ಅದು ಮೇಲ್ಭಾಗಕ್ಕೂ ಆವರಿಸಿತ್ತು. ಈ ಕಟ್ಟಡದಲ್ಲಿ ನಾಲ್ಕು ವಿಭಿನ್ನ ಕೋಚಿಂಗ್ ಕೇಂದ್ರಗಳು ನಡೆಯುತ್ತಿದ್ದವು. ಬೆಂಕಿಯ ಜ್ವಾಲೆ ಮತ್ತು ದಟ್ಟವಾದ ಹೊಗೆ ಆವರಿಸಿದಾಗ ಅದರಿಂದ ತಪ್ಪಿಸಿಕೊಳ್ಳಲು ಅನೇಕ ವಿದ್ಯಾರ್ಥಿಗಳು ಕಟ್ಟಡದಿಂದ ಹೊರಕ್ಕೆ ಜಿಗಿದಿದ್ದರು. ಹಾಗೆ ಜಿಗಿದವರೆಲ್ಲರೂ ಪ್ರಾಣಾಪಾಯದಿಂದ ಪಾರಾದರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುಜರಾತ್ನಲ್ಲಿ ಭೀಕರ ಬೆಂಕಿ ಆಕಸ್ಮಿಕ : ಸಾವಿಗೀಡಾದವರ ಸಂಖ್ಯೆ 17ಕ್ಕೆ ಏರಿಕೆ
'ನಾವು ನಾಲ್ಕನೆಯ ಹಾಗೂ ತುತ್ತತುದಿಯ ಮಹಡಿಯಲ್ಲಿದ್ದೆವು. ಇದ್ದಕ್ಕಿದ್ದಂತೆ ಸುತ್ತಲೂ ಹೊಗೆ ಆವರಿಸಿತ್ತು. ಉಸಿರಾಡುವುದೇ ಅಸಾಧ್ಯ ಎನ್ನುವಂತಾಯಿತು. ಸಹಾಯಕ್ಕಾಗಿ ಕಿರಿಚಾಡಿದೆವು. ನಾನು ಅಮ್ಮನಿಗೆ ಕರೆ ಮಾಡಿದೆ. ಮಾತನಾಡುತ್ತಲೇ ಅಲ್ಲಿದ್ದ ಏಕೈಕ ಮೆಟ್ಟಿಲಿನ ಕಡೆಗೆ ಓಡಿದೆ. ಆದರೆ, ಮೆಟ್ಟಿಲನ ಭಾಗವೂ ಹೊಗೆಯಿಂದ ತುಂಬಿಕೊಂಡಿತ್ತು' ಎಂದು ಅಲ್ಲಿನ ಭಯಾನಕ ಸ್ಥಿತಿಯನ್ನು ವಿವರಿಸಿದರು ಊರ್ಮಿಳಾ ಪಟೇಲ್ (15).
'ಉಳಿದವರಂತೆಯೇ ನಾನು ಮತ್ತು ನನ್ನ ಸ್ನೇಹಿತೆ ಇಬ್ಬರೂ ಕೊಠಡಿಯ ಹಿಂದೆ ಓಡಿದೆವು. ಅಲ್ಲಿ ಹೊರಕ್ಕೆ ಜಿಗಿಯದೆ ಬೇರೆ ಆಯ್ಕೆಯೇ ಇರಲಿಲ್ಲ. ಬೇರೆಯವರು ಜಿಗಿಯುವುದನ್ನು ಕಂಡೆ. ನಾನೂ ಜಿಗಿದೆ' ಎಂದು ಹೇಳಿದರು.
ತೊಡೆಗಳು, ಹಿಂಬದಿ ಮತ್ತು ತಲೆಗೆ ಗಾಯಗೊಂಡಿರುವ ಆಕೆ ಪಿಪಿ ಸಾವನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
'ನನ್ನ ಪರಿಸ್ಥಿತಿ ನರಕದಲ್ಲಿದ್ದಂತೆ ಆಗಿತ್ತು. ಕಟ್ಟಡದಲ್ಲಿ ಎಷ್ಟು ಹೊತ್ತು ಇದ್ದೆನೋ, ಅಲ್ಲಿಂದ ಜಿಗಿಯುವಂತೆ ನನ್ನನ್ನು ಯಾವುದು ಪ್ರಚೋದಿಸಿತ್ತೋ ಗೊತ್ತಿಲ್ಲ. ಪ್ರತಿಯೊಬ್ಬರೂ ಸಹಾಯಕ್ಕಾಗಿ ಕೂಗುತ್ತಿದ್ದದ್ದಷ್ಟೇ ನನಗೆ ನೆನಪಿದೆ. ಜಿಗಿದ ಬಳಿಕ ನಾನು ಕೂಡ ಸತ್ತೇ ಹೋದೆ ಎಂದೇ ಭಾವಿಸಿದ್ದೆ' ಎಂದು 15 ವರ್ಷದ ಹ್ಯಾಪಿ ಪಾಂಚಾಲಿ ತಿಳಿಸಿದರು.
ಸೂರತ್ ಅಗ್ನಿ ದುರಂತ: ಮೃತ ವಿದ್ಯಾರ್ಥಿಗಳಿಗಾಗಿ ಮೋದಿ ಕಣ್ಣೀರು
ಈ ಭೀಕರ ಘಟನೆಯಲ್ಲಿ ಯುವಕನೊಬ್ಬ ಇಬ್ಬರು ಬಾಲಕಿಯರ ಜೀವ ರಕ್ಷಿಸಿ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಚಿತ್ರ ಎಲ್ಲೆಡೆ ಹರಿದಾಡುತ್ತಿದೆ.
My heartfelt condolences to children who lost their lives in the tragic incident in Surat yesterday. Very proud of Ketan Jorawadia, who showed exemplary courage and saved atleast 2 children from falling in the fire. pic.twitter.com/dNW1qjb75o
— VVS Laxman (@VVSLaxman281) 25 May 2019
ಅದೇ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಕೇತನ್ ಜೊರಾವಾಡಿಯಾ ಎಂಬ ಯುವಕ, ಬೆಂಕಿ ಮತ್ತು ದಟ್ಟ ಹೊಗೆಗೆ ಹೆದರದೆ ಅಲ್ಲಿಯೇ ಇದ್ದು, ಕಟ್ಟಡದಿಂದ ಬೀಳುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ. ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಅನೇಕರು ಯುವಕನ ಚಿತ್ರವನ್ನು ಹಂಚಿಕೊಂಡು ಸಾಹಸವನ್ನು ಶ್ಲಾಘಿಸಿದ್ದಾರೆ.