ಗುಜರಾತ್: ಬಿಜೆಪಿ ಸೇರುವಂತೆ ಪ್ರಾಂಶುಪಾಲರ ಸೂಚನೆ: ವಿದ್ಯಾರ್ಥಿಗಳ ಆಕ್ರೋಶ
ಭಾವನಗರ ಜೂನ್ 27: ಗುಜರಾತ್ನ ಭಾವನಗರದ ಕಾಲೇಜು ಪ್ರಾಂಶುಪಾಲರೊಬ್ಬರು ರಾಜ್ಯದಲ್ಲಿ ಆಡಳಿತ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರುವಂತೆ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಿರುವುದು ಬೆಳಕಿಗೆ ಬಂದಿದೆ. ಬಳಿಕ ವಿದ್ಯಾರ್ಥಿಗಳು ಇದರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ ನೋಟಿಸ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಾಲೇಜು ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. ಮಾತ್ರವಲ್ಲದೆ ಬಿಜೆಪಿಯ ಪರ ನೋಟೀಸ್ಗೆ ವಿರೋಧ ಪಕ್ಷದ ನಾಯಕರು ಇಂದು (ಜೂನ್ 27) ನೋಟಿಸ್ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
ಭಾವನಗರದಲ್ಲಿರುವ ಗಾಂಧಿ ಬಾಲಕಿಯರ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರು ಬಿಜೆಪಿಯ ಪೇಜ್ ಕಮಿಟಿ ಸದಸ್ಯರಾಗಿ ನೋಂದಣಿ ಮಾಡುವಂತೆ ನೋಟಿಸ್ ನೀಡಿದ್ದಾರೆ.
ಸೂಚನೆ ಏನು ಹೇಳುತ್ತದೆ?
ಸ್ಥಳೀಯ ವರದಿಗಾರರಿಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸೂಚನೆಯಲ್ಲಿ, "ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ, ಬಿಜೆಪಿಯಲ್ಲಿ ಪುಟ ಸಮಿತಿಯ ಸದಸ್ಯರಾಗಿ ನೋಂದಾಯಿಸಲು, ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಪಾಸ್ಪೋರ್ಟ್ ಅಳತೆಯ ಫೋಟೋವನ್ನು ತರಬೇಕು. ಭಾವನಗರ ಮುನ್ಸಿಪಲ್ ಕಾರ್ಪೊರೇಶನ್ನಲ್ಲಿ ವಾಸಿಸುವ ವಿದ್ಯಾರ್ಥಿಗಳು ಮಾತ್ರ. ಅವರು ಸದಸ್ಯರಾಗಬಹುದು. ಅಲ್ಲದೆ, ಬಿಜೆಪಿ ಸದಸ್ಯತ್ವಕ್ಕೆ ಸೇರಲು ಪ್ರತಿಯೊಬ್ಬ ವಿದ್ಯಾರ್ಥಿಯು ಮೊಬೈಲ್ ಫೋನ್ ತರಬೇಕು. ಎಲ್ಲಾ ಹೆಣ್ಣುಮಕ್ಕಳು ಇದನ್ನು ಗಮನಿಸಬೇಕು" ಎಂದು ನೋಟಿಸ್ನಲ್ಲಿ ನಮೂದಿಸಲಾಗಿದೆ.
ಕಾಲೇಜು ಪ್ರಾಂಶುಪಾಲರು ನೀಡಿರುವ ನೋಟಿಸ್ಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಘಟನೆಯ ಕುರಿತು ಕಾಲೇಜು ಇನ್ನೂ ಪ್ರತಿಕ್ರಿಯಿಸಿಲ್ಲ ಮತ್ತು ಇಂದು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.