ಗುಜರಾತ್ ರಾಜಕಾರಣದಲ್ಲಿ ಭರ್ಜರಿ ಟ್ವಿಸ್ಟ್; ಶಂಕರ್ ವಘೇಲಾ ಎನ್ ಸಿಪಿಗೆ
ಅಹ್ಮದಾಬಾದ್ (ಗುಜರಾತ್), ಜನವರಿ 24: ಗುಜರಾತ್ ನ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಘ್ ವಘೇಲಾ ಎನ್ ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಸೇರಲು ವೇದಿಕೆ ಸಿದ್ಧವಾಗಿದೆ ಎಂದು ಪಕ್ಷದ ಗುಜರಾತ್ ಘಟಕ ಗುರುವಾರ ಹೇಳಿದೆ. ಕ್ಷತ್ರಿಯ ಸಮುದಾಯಕ್ಕೆ ಸೇರಿದ ವಘೇಲಾ 2017ರ ವಿಧಾನಸಭಾ ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ತೊರೆದಿದ್ದರು.
ಆ ನಂತರ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಿದ್ದರು. "ಗುಜರಾತ್ ನ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಘ್ ವಘೇಲಾ ಅವರು ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ಸಮ್ಮುಖದಲ್ಲಿ ಎನ್ ಸಿಪಿ ಸೇರಲಿದ್ದಾರೆ" ಎಂದು ಪಕ್ಷದ ಗುಜರಾತ್ ಘಟಕದ ಅಧ್ಯಕ್ಷ ಜಯಂತ್ ಪಟೇಲ್ ಅಲಿಯಾಸ್ ಬೋಸ್ಕಿ ಹೇಳಿದ್ದಾರೆ.
ಲೋಕಸಭೆ ಚುನಾವಣೆ: ಎನ್ ಸಿಪಿ-ಕಾಂಗ್ರೆಸ್ ದೋಸ್ತಿ ಖಚಿತ
ವಘೇಲಾ ಜೀ ವಿಶಿಷ್ಟ ನಾಯಕ. ಅವರಿಗೆ ರಾಜ್ಯ ಹಾಗೂ ದೇಶದ ನಾಡಿ ಮಿಡಿತ ಗೊತ್ತಿದೆ. ಅವರನ್ನು ಎನ್ ಸಿಪಿಗೆ ಸ್ವಾಗತಿಸುತ್ತೇನೆ. ಇದರಿಂದ ಪಕ್ಷಕ್ಕೆ ರಾಜ್ಯದಲ್ಲಿ ಶಕ್ತಿ ಹೆಚ್ಚಾದಂತೆ ಆಗುತ್ತದೆ ಎಂದು ಜಯಂತ್ ಪಟೇಲ್ ಹೇಳಿದ್ದಾರೆ. ಜನವರಿ 29ರಂದು ವಘೇಲಾ ಎನ್ ಸಿಪಿ ಸೇರಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆದರೆ, ಎನ್ ಸಿಪಿ ಸೇರುವ ಅಥವಾ ಸೇರದಿರುವ ಬಗ್ಗೆ ಶಂಕರ್ ಸಿಂಘ್ ವಘೇಲಾ ಯಾವುದೇ ಹೇಳಿಕೆ ನೀಡಿಲ್ಲ. ಒಂದು ವೇಳೆ ಅವರು ಎನ್ ಸಿಪಿ ಸೇರಿದರೆ, ಆ ಪಕ್ಷದ ಜತೆಗೆ ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದಿದ್ದರೆ ಗುಜರಾತ್ ನ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆಗೆ ಕಾರಣವಾಗುತ್ತದೆ.
ಗುಜರಾತ್ ನಲ್ಲಿ ಒಟ್ಟು 26 ಲೋಕಸಭಾ ಕ್ಷೇತ್ರಗಳಿವೆ. 2014ರ ಚುನಾವಣೆಯಲ್ಲಿ ಆ ಎಲ್ಲ ಸ್ಥಾನಗಳಲ್ಲೂ ಬಿಜೆಪಿ ಜಯ ಗಳಿಸಿತ್ತು. 2017ರ ವಿಧಾನಸಭಾ ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ತೊರೆದಿದ್ದರು ವಘೇಲಾ. ಅವರು ಹಾಗೂ ಅವರನ್ನು ಬೆಂಬಲಿಸುವ ಕೆಲವು ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ವಿರುದ್ಧ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಬಿಜೆಪಿಯ ಬಲವಂತ್ ಸಿಂಘ್ ರನ್ನು ಬೆಂಬಲಿಸಿದ್ದರು.
'ನಿಮ್ಮಲ್ಲಿ ಬಾಳಾಸಾಹೇಬ್ ರಕ್ತ ಹರಿಯುತ್ತಿದ್ದರೆ... NDAಯಿಂದ ಹೊರಬನ್ನಿ!'
ಆದರೆ, ಶಂಕರ್ ವಘೇಲಾ ಆಡಳಿತಾರೂಢ ಬಿಜೆಪಿಯನ್ನು ಸೇರಲಿಲ್ಲ. ಡಿಸೆಂಬರ್ 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಕಡೆ ಸ್ವತಂತ್ರ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಆ ಎಲ್ಲ ಅಭ್ಯರ್ಥಿಗಳು ಸೋಲುಂಡರು. ಆ ಬಾರಿ ಕಾಂಗ್ರೆಸ್ ಜತೆ ಸೇರದೆ ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಎನ್ ಸಿಪಿ ಒಟ್ಟು 182 ವಿಧಾನಸಭಾ ಸ್ಥಾನಗಳ ಪೈಕಿ ಒಂದರಲ್ಲಿ ಮಾತ್ರ ಗೆದ್ದಿತ್ತು.
ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಎನ್ ಸಿಪಿಯು ಕಾಂಗ್ರೆಸ್ ಜತೆಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡರೆ, ಕೆಲವು ಕ್ಷೇತ್ರಗಳಲ್ಲಿ ಎಲ್ಲೆಲ್ಲಿ ವಘೇಲಾ ಮತ್ತು ಅವರ ಬೆಂಬಲಿಗರು ಎನ್ ಸಿಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರೋ ಅಲ್ಲೆಲ್ಲ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಶಂಕರ್ ವಘೇಲಾ ಹಿಂದುಳಿದ ವರ್ಗಗಳ ಪ್ರಮುಖ ನಾಯಕ. ಬಿಜೆಪಿಯಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸಿದವರು. 1995ರಲ್ಲಿ ಗುಜರಾತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಆಗ ವಘೇಲಾ ಬದಲು ಕೇಶುಭಾಯ್ ಪಟೇಲ್ ರನ್ನು ಮುಖ್ಯಮಂತ್ರಿ ಮಾಡಲಾಯಿತು. 1996ರಲ್ಲಿ ಬಿಜೆಪಿಯನ್ನು ಒಅಡೆದ ವಘೇಲಾ ಕಾಂಗ್ರೆಸ್ ನಿಂದ ಬಾಹ್ಯ ಬೆಂಬಲ ಪಡೆದು ಮುಖ್ಯಮಂತ್ರಿ ಆದರು.
ಆ ನಂತರ ಕಾಂಗ್ರೆಸ್ ಸೇರಿದ ವಘೇಲಾ, ಮನ್ ಮೋಹನ್ ಸಿಂಗ್ ಪ್ರಧಾನಿ ಆಗಿದ್ದ ವೇಳೆ ಕೇಂದ್ರದಲ್ಲಿ ಜವಳಿ ಖಾತೆ ನಿರ್ವಹಿಸಿದ್ದರು. ಅಷ್ಟೇ ಅಲ್ಲ, ಗುಜರಾತ್ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ, ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.