ಗುಜರಾತ್ ಸಿಎಂ ರಾಜೀನಾಮೆ ಬಗ್ಗೆ ಜಿಗ್ನೇಶ್ ಮೆವಾನಿ ಹೇಳಿದ್ದೇನು?
ಗಾಂಧಿನಗರ, ಸೆಪ್ಟೆಂಬರ್ 11: ಗುಜರಾತ್ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದ್ದಾರೆ. ಈ ದಿಢೀರ್ ರಾಜಕೀಯ ಬೆಳವಣಿಗೆ ಬಗ್ಗೆ ಹಲವಾರು ನಾಯಕರು ಹೇಳಿಕೆಯನ್ನು ನೀಡಿದ್ದಾರೆ. ಈ ನಡುವೆ ಶಾಸಕ ಜಿಗ್ನೇಶ್ ಮೇವಾನಿ "ಈ ರಾಜೀನಾಮೆಯು ಮುಂದಿನ ಚುನಾವಣೆಯ ದೃಷ್ಟಿಯಿಂದ ಮಾಡಲಾಗಿದೆ," ಎಂದು ಹೇಳಿದ್ದಾರೆ.
ಇನ್ನು ತನ್ನ ರಾಜೀನಾಮೆಯ ಬಗ್ಗೆ ಹೇಳಿಕೆ ನೀಡಿರುವ ವಿಜಯ್ ರೂಪಾನಿ, "ಹೊಸ ಚೈತನ್ಯ ಹಾಗೂ ಶಕ್ತಿಯೊಂದಿಗೆ ಹೊಸ ರಾಜ್ಯ ಆಡಳಿತ ಬರಲಿದೆ. ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ," ಎಂದಿದ್ದಾರೆ. ಈ ನಡುವೆ ಸ್ವತಂತ್ರ ಅಭ್ಯರ್ಥಿ ಜಿಗ್ನೇಶ್ ಮೇವಾನಿ, ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ವಿಜಯ್ ರೂಪಾನಿ ಕೊರೊನಾ ನಿರ್ವಹಣೆಯನ್ನು ಮಾಡಿದ ರೀತಿಯನ್ನು ದೂರಿದ್ದಾರೆ.
ಎಬಿವಿಪಿ ನಾಯಕನಿಂದ ಸಿಎಂವರೆಗೆ: ವಿಜಯ್ ರೂಪಾನಿ ವ್ಯಕ್ತಿಚಿತ್ರ
ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯ್ ರೂಪಾನಿ, "ಕೋವಿಡ್ ಬಿಕ್ಕಟ್ಟನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯವಾಗದ ಕಾರಣದಿಂದಾಗಿ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಜಯ್ ರೂಪಾನಿಯನ್ನು ಗುಜರಾತ್ನ ಜನರು ಮೆಚ್ಚುಗೆ ವ್ಯಕ್ತಪಡಿಸಬೇಕು," ಎಂದಿದ್ದಾರೆ.
ಮೇ ತಿಂಗಳಿನಲ್ಲಿ ಗುಜರಾತ್ ರಾಜ್ಯದಲ್ಲಿ ಕೋವಿಡ್ ಸಾವನ್ನು ಸರಿಯಾದ ರೀತಿಯಲ್ಲಿ ದಾಖಲೀಕರಣ ಮಾಡಿಲ್ಲ ಎಂದು ಆರೋಪ ಮಾಡಲಾಗಿತ್ತು. ಜುಲೈ ತಿಂಗಳಿನಲ್ಲಿ ಗುಜರಾತ್ನಲ್ಲಿ ವೈರಲ್ ಆಗಿದ್ದ ವಿಡಿಯೋವೊಂದು ಭಾರೀ ಚರ್ಚೆಗೆ ಕಾರಣವಾಗಿತ್ತು. ರಾಜ್ಯ ಸರ್ಕಾರದ ಅಡಿಯಲ್ಲಿ ಇರುವ ಆಸ್ಪತ್ರೆಯಲ್ಲಿ ಪಾರ್ಶ್ವವಾಯು ಪೀಡಿತ ವ್ಯಕ್ತಿಯೊಬ್ಬರ ಬಾಯಿಯಲ್ಲಿ ಇರುವೆಗಳು ಓಡಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು ಗುಜರಾತ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಲಾಗಿತ್ತು. ಈ ಬಗ್ಗೆ ತನಿಖೆಯಗೂ ಆಗ್ರಹ ಮಾಡಲಾಗಿತ್ತು. ಇನ್ನು ಇದೇ ಸಂದರ್ಭದಲ್ಲೇ ವಿಜಯ್ ರೂಪಾನಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಇನ್ನು ಈ ಬಗ್ಗೆ ಟ್ವೀಟ್ ಮಾಡಿದ್ದ ಜಿಗ್ನೇಶ್ ಮೇವಾನಿ, "ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಬಿಕ್ಕಟ್ಟನ್ನು ಸರಿಯಾಗಿ ನಿರ್ವಹಣೆ ಮಾಡದ ವಿಜಯ್ ರೂಪಾನಿ ಗುಜರಾತ್ ಮುಖ್ಯಮಂತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿರುವುದನ್ನು ರಾಜ್ಯದ ಜನರು ಮೆಚ್ಚುಗೆ ವ್ಯಕ್ತಪಡಿಸಬೇಕು. 2022 ರಲ್ಲಿ ವಿಧಾನ ಸಭೆ ಚುನಾವಣೆಯ ಕಣ್ಣೋಟವನ್ನು ಇಟ್ಟುಕೊಂಡು ಈ ರಾಜೀನಾಮೆಯನ್ನು ನೀಡಲಾಗಿದೆ ಎಂಬುವುದು ಸ್ಪಷ್ಟ," ಎಂದು ಹೇಳಿದ್ದಾರೆ.
ಈ ನಡುವೆ ರೂಪಾನಿ ಆಡಳಿತದ ವಿರುದ್ದ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ರೂಪಾನಿ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ. ಕರ್ನಾಟಕ ಹಾಗೂ ಗುಜರಾತ್ ಎರಡು ರಾಜ್ಯಗಳು ದಿಡೀರ್ ಮುಖ್ಯಮಂತ್ರಿ ಬದಲಾವಣೆಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲೂ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿತ್ತು. ಬಿ ಎಸ್ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿ, ಬಸವರಾಜು ಬೊಮ್ಮಾಯಿಯನ್ನು ಕರ್ನಾಟಕ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು.
ಗುಜರಾತ್ ಸಿಎಂ ರೂಪಾನಿ ರಾಜೀನಾಮೆ: ಸಿಎಂ ರೇಸಿನಲ್ಲಿರುವ ಐವರು
ಇನ್ನು ಗುಜರಾತ್ ಆಡಳಿತ ಪಕ್ಷದಲ್ಲಿ ಆದ ಈ ದಿಡೀರ್ ಬದಲಾವಣೆಗೆ ವಿರೋಧ ಪಕ್ಷಗಳಾದ ಆಮ್ ಆದ್ಮಿ ಹಾಗೂ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆಯನ್ನು ಈವರೆಗೂ ನೀಡಿಲ್ಲ. 2014 ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ರೂಪಾನಿ ಗೆಲುವು ಸಾಧಿಸಿದ್ದಾರೆ. ವಜುಭಾಯಿ ವಾಲಾ ರಾಜ್ಯಪಾಲರಾದ ನಂತರ, ತನ್ನ ಸ್ಥಾನವನ್ನು ರೂಪಾನಿ ತೊರೆದಿದ್ದು, ಉಪಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದರು. ನವೆಂಬರ್ 2014 ರಲ್ಲಿ, ಅಂದಿನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಮೊದಲ ಕ್ಯಾಬಿನೆಟ್ ಅನ್ನು ವಿಸ್ತರಿಸಿದಾಗ, ವಿಜಯ್ ರೂಪಾನಿಯನ್ನು ಮಂತ್ರಿಯನ್ನಾಗಿ ಮಾಡಲಾಗಿತ್ತು. ವಿಜಯ್ ರೂಪಾನಿಗೆ ಸಾರಿಗೆ, ನೀರು ಸರಬರಾಜು, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಜವಾಬ್ದಾರಿಯನ್ನು ನೀಡಲಾಗಿತ್ತು. ಫೆಬ್ರವರಿ 2016 ರಿಂದ ಆಗಸ್ಟ್ 2016 ರವರೆಗೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರು. 5 ಆಗಸ್ಟ್ 2016 ರಂದು ವಿಜಯ್ ರೂಪಾನಿಯನ್ನು ಗುಜರಾತ್ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ.
(ಒನ್ ಇಂಡಿಯಾ ಸುದ್ದಿ)