ದಲಿತರಿಗೆ ಗುಜರಾತ್ ಸುರಕ್ಷಿತವಲ್ಲ: ಜಿಗ್ನೇಶ್ ಮೆವಾಣಿ
ಅಹ್ಮದಾಬಾದ್, ಮಾರ್ಚ್ 22: ಗುಜರಾತ್ ರಾಜ್ಯವು ದಲಿತರಿಗೆ ಸುರಕ್ಷಿತವಲ್ಲ ಎಂದು ಶಾಸಕ, ದಲಿತ ಹೋರಾಟಗಾರ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ದಲಿತ ವಿರೋಧಿ ಧೋರಣೆಯ ವಿರುದ್ಧ ವಾಗ್ದಾಳಿ ನಡೆಸಿದರು. ಗುಜರಾತ್ನ ರಾಜ್ಯ ಸರ್ಕಾರವನ್ನೂ ಸಹ ಅವರು ಟೀಕಿಸಿದರು.
ಸರ್ಕಾರವು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂದು ಹೇಳುತ್ತದೆ, ಆದರೆ, ಗುಜರಾತ್ನಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು ಆಗುತ್ತಿಲ್ಲ, ಕನಿಷ್ಟ ಪೊಲೀಸರಿಗೆ ಈ ಬಗ್ಗೆ ಸೂಚನೆ ನೀಡಲು ಸಹ ಆಗುತ್ತಿಲ್ಲ ಎಂದು ಅವರು ಹೇಳಿದರು.
ಸರ್ಕಾರದ ಧೋರಣೆಯು ದಲಿತ ವಿರೋಧಿ ಹಾಗೂ ಜಾತೀವಾದಿ ಪರವಾದ ನಿಲವಾಗಿದೆ ಎಂದು ಮೆವಾನಿ ದೂರಿದರು. ದಲಿತ ಹುಡುಗನೊಬ್ಬನನ್ನು ಅಪಹರಿಸಿ, ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ನಡೆದ ಬಳಿಕ ಅವರು ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಹೋಳಿ ಹಬ್ಬವನ್ನು ಬಿಜೆಪಿಗರು ದಲಿತರ ರಕ್ತ ಜೊತೆ ಆಡಿದ್ದಾರೆ ಎಂದು ಕಟುವಾಗಿ ಟೀಕಿಸಿದ ಮೆವಾನಿ, ಆ ದಲಿತ ಹುಡುಗ ದಿಗ್ಭ್ರಮೆಗೆ ಒಳಗಾಗಿದ್ದಾನೆ, ಆತ ಶಾಕ್ನಲ್ಲಿದ್ದು ಏನೂ ಮಾತನಾಡಲಾಗುತ್ತಿಲ್ಲ ಅವನಿಗೆ, ಆತನಿಗೆ ಹಾಗೆ ಮಾಡಿದವರ ವಿರುದ್ಧ ದೂರು ಸಹ ನೀಡಲು ಆತನಿಗೆ ಸಾಧ್ಯವಾಗುತ್ತಿಲ್ಲ ಎಂದು ಮೆವಾನಿ ಹೇಳಿದರು.
ಘಟನೆಗೆ ಕಾರಣರಾದವರನ್ನು ಮುಂದಿನ 48 ಗಂಟೆಗಳಲ್ಲಿ ಬಂಧಿಸದಿದ್ದರೆ ರಾಜ್ಯವ್ಯಾಪಿ ದಲಿತ ಸಂಘಟನೆಗಳನ್ನು ಒಟ್ಟುಗೂಡಿಸಿ ಪ್ರತಿಭಟನೆ ಮಾಡುವುದಾಗಿ ಮೆವಾನಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.