ಗುಜರಾತ್ ಶಿಕ್ಷಣ ಸಚಿವ ಚೂಡಾಸಮ ಗೆಲುವು ಅಸಿಂಧುಗೊಳಿಸಿದ ಹೈಕೋರ್ಟ್
ಅಹಮದಬಾದ್, ಮೇ 13: ಕೊರೊನಾ ವೈರಸ್ ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಗುಜರಾತ್ ಬಿಜೆಪಿ ಸರ್ಕಾರಕ್ಕೆ ಮುಖಭಂಗವಾಗಿದೆ. 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಗುಜರಾತ್ ಶಿಕ್ಷಣ ಹಾಗು ಕಾನೂನು ಸಚಿವ ಭೂಪೇಂದ್ರಸಿನ್ಹ ಚೂಡಾಸಮ ಅವರ ಗೆಲುವು ಅಸಿಂಧು ಎಂದು ಮಂಗಳವಾರ ಹೈಕೋರ್ಟ್ ಪ್ರಕಟಿಸಿದೆ.
ಗುಜರಾತ್ನ ಧೋಲ್ಕಾ ವಿಧಾನಸಭೆ ಕ್ಷೇತ್ರದಿಂದ ಗೆಲುವು ಕಂಡಿದ್ದ ಭೂಪೇಂದ್ರಸಿನ್ಹ ಚೂಡಾಸಮ ಅವರ ಫಲಿತಾಂಶವನ್ನು ಪ್ರಶ್ನಿಸಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅಶ್ವಿನ್ ರಾಠೋಡ್ ಹೈಕೋರ್ಟ್ ಮೊರೆಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ತೀರ್ಪು ನೀಡಿದೆ.
ಭಾರತೀಯರಿಗೆ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಪ್ರಧಾನಮಂತ್ರಿ!
ಕಾಂಗ್ರೆಸ್ ಅಭ್ಯರ್ಥಿ ಅಶ್ವಿನ್ ರಾಠೋಡ್ ವಿರುದ್ಧ ಕೇವಲ 327 ಮತಗಳ ಅಂತರದಲ್ಲಿ ಭೂಪೇಂದ್ರಸಿನ್ಹ ಚೂಡಾಸಮ ಗೆಲವು ಕಂಡಿದ್ದರು. ಹೀಗಾಗಿ, ಮತ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ, ಚುನಾವಣ ಅಧಿಕಾರಿಗಳ ಜೊತೆ ಸೇರಿ ಭೂಪೇಂದ್ರಸಿನ್ಹ ಚೂಡಾಸಮ ವಂಚಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು.
''2017ರ ಚುನಾವಣೆಯಲ್ಲಿ ಮತಪತ್ರಗಳ ಮೂಲಕ ಚಲಾವಣೆಯಾಗಿದ್ದ 427 ಮತಗಳನ್ನು ಚುನಾವಣಾ ಅಧಿಕಾರಿ ಧವಲ್ ಜನಿ ಅಕ್ರಮವಾಗಿ ತಿರಸ್ಕರಿಸಿದ್ದಾರೆ. ಇವಿಎಂಗಳಲಿದ್ದ 29 ಮತಗಳನ್ನು ಎಣಿಕೆ ಮಾಡಿಲ್ಲ. 1,59,946 ಮತದಾರರು ಮತ ಚಲಾವಣೆ ಮಾಡಿದ್ದಾರೆ ಎಂದು ವರದಿ ನೀಡಿದ್ದರು. ಆದರೆ, ಅಂತಿಮವಾಗಿ ಫಲಿತಾಂಶ ಘೋಷಿಸಿದಾಗ 1,59.917 ಮತ ಚಲಾವಣೆ ಆಗಿದೆ ಎಂದು ಹೇಳಿದ್ದರು. ಇವುಗಳ ನಡುವೆ 29 ಮತಗಳ ವ್ಯತ್ಯಾಸ ಇದೆ'' ಎಂದು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಅಶ್ವಿನ್ ರಾಠೋಡ್ ಅವರ ಅರ್ಜಿಯನ್ನು ರದ್ದುಗೊಳಿಸಬೇಕು ಎಂದು ಚೂಡಾಸಮ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ನ್ಯಾಯಲಯ ಚೂಡಾಸಮ ಅವರ ಮನವಿ ತಿರಸ್ಕರಿಸಿತ್ತು.