ಗೋಧ್ರಾ ಬೆಂಕಿ ಪ್ರಕರಣ: ಆರೋಪಿ ಯಾಕೂಬ್ಗೆ ಜೀವಾವಧಿ ಶಿಕ್ಷೆ
ಅಹಮದಾಬಾದ್, ಮಾರ್ಚ್ 21: 2002ರಲ್ಲಿ ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ವಿಶೇಷ ತನಿಖಾ ನ್ಯಾಯಾಲಯ ಒಬ್ಬ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಇತರೆ ಐವರು ಆರೋಪಿಗಳು ಸಲ್ಲಿಸಿದ ಹೇಳಿಕೆಗಳ ಆಧಾರದಲ್ಲಿ ಶಿಕ್ಷೆಗೆ ಒಳಗಾಗಿದ್ದ ಆರೋಪಿ ಯಾಕೂಬ್ ಪಟಾಲಿಯಾನಿಗೆ ವಿಶೇಷ ಎಸ್ಐಟಿ ನ್ಯಾಯಾಧೀಶ ಎಚ್ ಸಿ ವೋರಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
2002ರ ಗೋಧ್ರಾ ಹತ್ಯಾಕಾಂಡ Timeline
ಸಬರಮತಿ ಎಕ್ಸ್ಪ್ರೆಸ್ನ ಎರಡು ಕೋಚ್ಗಳಿಗೆ ಬೆಂಕಿ ಹಚ್ಚಿ 59 ಕರಸೇವಕರನ್ನು ಸಜೀವವಾಗಿ ಕೊಂದ ಘಟನೆಯಲ್ಲಿ ಯಾಕೂಬ್ ಪಟಾಲಿಯಾನನ್ನು 2018ರ ಜನವರಿಯಲ್ಲಿ ಬಂಧಿಸಲಾಗಿತ್ತು. 2002ರ ಫೆಬ್ರವರಿ 27ರಂದು ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಸಬರಮತಿ ಎಕ್ಸ್ಪ್ರೆಸ್ ಕೋಚ್ಗಳಿಗೆ ಬೆಂಕಿ ಹಚ್ಚಿದ್ದ ಗುಂಪಿನ ಭಾಗವಾಗಿದ್ದ ಆರೋಪ ಆತನ ಮೇಲಿತ್ತು. ವಿಚಾರಣೆ ನಡೆದು ಆತ ತಪ್ಪಿತಸ್ಥ ಎಂಬುದು ಸಾಬೀತಾಗಿತ್ತು.
ಇದಕ್ಕೂ ಮೊದಲು ವಿಶೇಷ ಎಸ್ಐಟಿ ಕೋರ್ಟ್ 2011ರ ಮಾರ್ಚ್ 1ರಂದು 31 ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಅವರಲ್ಲಿ 11 ಮಂದಿಗೆ ಗಲ್ಲು ಶಿಕ್ಷೆ ಹಾಗೂ ಉಳಿದ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ, 2017ರ ಅಕ್ಟೋಬರ್ನಲ್ಲಿ ಗುಜರಾತ್ ಹೈಕೋರ್ಟ್ 11 ಮಂದಿಯ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಉಳಿದವರ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.
2002ರ ಗುಜರಾತ್ ಹತ್ಯಾಕಾಂಡ : ಬಾಬು ಬಜರಂಗಿಗೆ ಜಾಮೀನು
ಪ್ರಕರಣದಲ್ಲಿ ಎಂಟು ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಈ ಘಟನೆಗೆ ಪ್ರತೀಕಾರವಾಗಿ ಅಹ್ಮದಾಬಾದ್ ಸಮೀಪದ ನರೋಡಾ ಪಾಟಿಯಾದಲ್ಲಿ ನಡೆದ ಕೋಮು ಗಲಭೆಯಲ್ಲಿ ಸುಮಾರು 97 ಮುಸ್ಲಿಮರನ್ನು ಹತ್ಯೆ ಮಾಡಲಾಗಿತ್ತು.