ಗುಜರಾತ್ ಸಿಎಂ ರೂಪಾನಿ ರಾಜೀನಾಮೆ: ಸಿಎಂ ರೇಸಿನಲ್ಲಿರುವ ಐವರು
ಗಾಂಧಿನಗರ, ಸೆ 11: ಬಿಜೆಪಿಯ ಭದ್ರಕೋಟೆ ಗುಜರಾತ್ ನಲ್ಲಿ ನಡೆದ ಅಚ್ಚರಿಯ ಮತ್ತು ದಿಢೀರ್ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ ಸಲ್ಲಿಸಿದ್ದಾರೆ. ಶನಿವಾರ ಸಿಎಂ ರೂಪಾನಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ವಿದ್ಯಮಾನದಿಂದಾಗಿ ಎಲ್ಲರ ಗಮನ ಈಗ ಅಲ್ಲಿನ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಮನೆ ಮಾಡಿದೆ. ಮುಂದಿನ ವರ್ಷ ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಐದು ವರ್ಷ ಸಿಎಂ ಆಗಿದ್ದ ವಿಜಯ್ ರೂಪಾನಿ ಯಾವುದೇ ಪ್ರತಿರೋಧ ತೋರದೇ ರಾಜೀನಾಮೆ ಕೊಡಿಸುವಲ್ಲಿ ಬಿಜೆಪಿಯ ವರಿಷ್ಠರು ಯಶಸ್ವಿಯಾಗಿದ್ದಾರೆ. ಕರ್ನಾಟಕದಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡಿದ ರೀತಿಯಲ್ಲೇ ರೂಪಾನಿ ಪದತ್ಯಾಗ ಮಾಡಿರುವುದು, ಬಿಜೆಪಿ ಹೈಕಮಾಂಡಿಗೆ ಇರುವ ಪವರ್ ಮತ್ತೊಮ್ಮೆ ಸಾಬೀತಾಗಿದೆ.
Breaking: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ
ಉಸ್ತುವಾರಿಯಾಗಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಹಿರಿಯ ಮುಖಂಡ ಭೂಪೇಂದ್ರ ಯಾದವ್, ಗಾಂಧಿನಗರದಲ್ಲಿ ಬೀಡು ಬಿಟ್ಟಿದ್ದಾರೆ. ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ನಾಳೆ (ಸೆ 12) ನಡೆಯುವ ಸಾಧ್ಯತೆಯಿದೆ. ಚುನಾವಣಾ ಪೂರ್ವ ತಯಾರಿಗಾಗಿ ರೂಪಾನಿಯವರಿಂದ ರಾಜೀನಾಮೆ ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಸಿಎಂ ರೇಸಿನಲ್ಲಿರುವ ಐವರು:
ಬಿಜೆಪಿ ಹೈಕಮಾಂಡ್ ಕೃಪಾಕಟಾಕ್ಷ ಯಾರಿಗೆ ಒಲಿಯಲಿದೆ ಎನ್ನುವುದು ಗೊತ್ತಾಗಲಿದೆ
ಗುಜರಾತ್ ನಲ್ಲಿ ಪ್ರಮುಖವಾಗಿರುವ ಪಾಟೀದಾರ್ ಸಮುದಾಯವಾದ ನಾಯಕನನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆ ಮೂಲಕ, ಕಾಂಗ್ರೆಸ್ಸಿನ ರಣನೀತಿಗೆ ಈಗಲೇ ಸಡ್ಡು ಹೊಡೆಯಲು ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ. ಗುಜರಾತ್ ಮೂಲದ ಇಬ್ಬರು ನಾಯಕರು ಈ ಸಮುದಾಯದವರಾಗಿದ್ದು, ಬಿಜೆಪಿ ಹೈಕಮಾಂಡ್ ಕೃಪಾಕಟಾಕ್ಷ ಯಾರಿಗೆ ಒಲಿಯಲಿದೆ ಎನ್ನುವುದು ಇನ್ನು ಒಂದೆರಡು ದಿನಗಳಲ್ಲಿ ಗೊತ್ತಾಗಲಿದೆ.
ಪಾಟೀದಾರ್ ಸಮುದಾಯದ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ
ಮುಂದಿನ ಸಿಎಂ ಯಾರು ಎನ್ನುವ ವಿಚಾರದಲ್ಲಿ ಐವರ ಹೆಸರು ಮಂಚೂಣಿಯಲ್ಲಿ ಕೇಳಿ ಬರುತ್ತಿದೆ. ಅದರಲ್ಲಿ ಪಾಟೀದಾರ್ ಸಮುದಾಯವನ್ನು ಪ್ರತಿನಿಧಿಸುವ ಕೇಂದ್ರ ಆರೋಗ್ಯ ಸಚಿವರಾಗಿರುವ ಮನಸುಖ್ ಮಾಂಡವೀಯ ಮತ್ತು ಆರ್.ಸಿ.ಫಾಲ್ಡು ಅವರ ಹೆಸರು. ಇವರಿಬ್ಬರಲ್ಲದೇ ಇನ್ನೂ ಮೂವರು ಹೆಸರು ಕೇಳಿ ಬರುತ್ತಿದೆ. ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ, ಕೆಮಿಕಲ್ಸ್ ಮತ್ತು ರಸಗೊಬ್ಬರ ಖಾತೆಯನ್ನು ಈಗತಾನೇ ನಿಭಾಯಿಸಲು ಆರಂಭಿಸಿರುವ ಮನಸುಖ್ ಮಾಂಡವೀಯ ಅವರು ಬಿಜೆಪಿ ಹೈಕಮಾಂಡ್ ಆಯ್ಕೆಯಾದರೂ ಆಗಬಹುದು.
ಪುರುಷೋತ್ತಮ ರೂಪಾಲಿ, ನಿತಿನ್ ಪಟೇಲ್ ಮತ್ತು ಸಿ.ಆರ್. ಪಟೇಲ್
ಇವರಿಬ್ಬರಲ್ಲದೇ ಮತ್ತೆ ಮೂವರ ಹೆಸರು ಈ ಪಟ್ಟಿಯಲ್ಲಿ ಓಡಾಡುತ್ತಿದೆ. ಅವರೆಂದರೆ, ಪುರುಷೋತ್ತಮ ರೂಪಾಲಿ, ನಿತಿನ್ ಪಟೇಲ್ ಮತ್ತು ಸಿ.ಆರ್. ಪಟೇಲ್ ಹೆಸರು. ಈ ಮೂವರೂ ನಾಯಕರು ರಾಜ್ಯ ರಾಜಕೀಯದಲ್ಲಿ ಪ್ರಭಾವೀ ಸ್ಥಾನವನ್ನು ಹೊಂದಿದ್ದಾರೆ. ಹಾಲೀ ಅಸೆಂಬ್ಲಿಯ ಇನ್ನುಳಿದಿರುವ ದಿನಗಳಲ್ಲಿ ಜನಪರ ಕೆಲಸದ ಜೊತೆಗೆ, ಚುನಾವಣೆಗೂ ಸಿದ್ದವಾಗಬೇಕಾಗಿರುವುದರಿಂದ, ಹೈಕಮಾಂಡ್ ಆಯ್ಕೆಯೇ ಅಂತಿಮ ಎನ್ನುವುದು ಅತ್ಯಂತ ಸ್ಪಷ್ಟ. (ಚಿತ್ರದಲ್ಲಿ: ನಿತಿನ್ ಪಟೇಲ್)
ಗುಜರಾತ್ ಸಿಎಂ ರೂಪಾನಿ ರಾಜೀನಾಮೆ: ಸಿಎಂ ರೇಸಿನಲ್ಲಿರುವ ಐವರು
ಪಾಟೀದಾರ್ ಸಮುದಾಯ ಗುಜರಾತ್ ನಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ ಆ ಸಮುದಾಯದ ನಾಯಕನನ್ನೇ ಸಿಎಂ ಆಗಿ ವರಿಷ್ಠರು ಕೂರಿಸಬಹುದು. ಸದ್ಯ ಡಿಸಿಎಂ ಆಗಿರುವ ನಿತಿನ್ ಪಟೇಲ್ ಅವರು ಅದೇ ಸ್ಥಾನದಲ್ಲಿ ಮುಂದುವರಿಯಬಹುದು. ಆದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಮನಸುಖ್ ಮಾಂಡವೀಯ ಅಥವಾ ಆರ್.ಸಿ.ಫಾಲ್ಡು ಅವರ ಹೆಸರನ್ನೇ ಕವರ್ ನಲ್ಲಿ ಹಾಕಿ ಬಿಜೆಪಿ ಹೈಕಮಾಂಡ್ ಕಳುಹಿಸಬಹುದು ಎಂದು ಹೇಳಲಾಗುತ್ತಿದೆ.