ಬಿಜೆಪಿ ಮುಖಂಡನ ಹತ್ಯೆಯ ಸಂಚು ವಿಫಲಗೊಳಿಸಿದ ಎಟಿಎಸ್
ಅಹಮದಾಬಾದ್, ಆಗಸ್ಟ್ 19: ಬಿಜೆಪಿ ಮುಖಂಡರೊಬ್ಬರ ಹತ್ಯೆಗೆ ರೂಪಿಸಿದ್ದ ಸಂಚನ್ನು ಗುಜರಾತ್ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ (ಗುಜರಾತ್ ಭಯೋತ್ಪಾದನಾ ನಿಗ್ರಹ ದಳ) ವಿಫಲಗೊಳಿಸಿದೆ.
ಬಿಜೆಪಿ ಮುಖಂಡರೊಬ್ಬರ ಹತ್ಯೆಗೆ ಗ್ಯಾಂಗ್ಸ್ಟರ್ ಛೋಟಾ ಶಕೀಲ್ ಸಂಚು ರೂಪಿಸಿದ್ದ, ಕೊಲ್ಲಲು ಛೋಟಾ ಶಕೀಲ್ ಕಳಿಸಿದ್ದ ಶಾರ್ಪ್ ಶೂಟರ್ನನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ ಎರಡು ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಆತ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ ಎಂದು ಹೇಳಿದ್ದಾರೆ.
'ಡಿ ಕಂಪನಿ'ಗೆ ಆಘಾತ, ದುಬೈನಿಂದ ಭಾರತಕ್ಕೆ ಛೋಟಾ ಶಕೀಲ್ ಆಪ್ತ ಅಹ್ಮದ್ ರಾಜಾ
ಈತ ಮುಂಬೈನವನಾಗಿದ್ದು, ಮಂಗಳವಾರ ಇಲ್ಲಿಗೆ ಬಂದಿದ್ದ. ಅಂದು ರಾತ್ರಿಯೇ ಆತ ಎಟಿಎಸ್ ಬಳಿ ಸಿಕ್ಕಿಬಿದ್ದಿದ್ದಾನೆ.
ರಾಜ್ಯ ಬಿಜೆಪಿ ಮುಖಂಡ ಗೋರ್ಧನ್ ಜಡಾಫಿಯಾ ಹತ್ಯೆಗಾಗಿ ಈ ಶೂಟರ್ ಬಂದಿದ್ದ. ಯಾವುದೇ ಹಾನಿ ಆಗುವ ಮೊದಲೇ ಎಟಿಎಸ್ ಅದನ್ನು ತಡೆದಿದೆ. ಈ ಬಗ್ಗೆ ಗೃಹ ಸಚಿವ ಪ್ರದೀಪ್ಸಿನ್ಹ್ ಜಡೇಜಾ ಅವರು ಗೋರ್ಧನ್ ಅವರಿಗೂ ಮಾಹಿತಿ ನೀಡಿದ್ದಾರೆ.
ಈ ಹಂತಕ ಅಹಮಬಾದ್ನ ರಿಲೀಫ್ ರೋಡ್ನಲ್ಲಿರುವ ಹೋಟೆಲ್ವೊಂದರಲ್ಲಿ ತಂಗಿದ್ದ. ಖಚಿತ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ ಎಟಿಎಸ್ ತಂಡದ ಮೇಲೆ ಆತ ಗುಂಡಿನ ದಾಳಿ ನಡೆಸಿದ್ದಾನೆ. ಆದರೆ ಯಾರಿಗೂ ಏನೂ ಅಪಾಯವಾಗಲಿಲ್ಲ. ನಂತರ ಅವನನ್ನು ಬಂಧಿಸಲಾಗಿದೆ ಎಂದು ಉಗ್ರ ನಿಗ್ರಹ ದಳದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಬಿಜೆಪಿ ಮುಖಂಡ ಗೋರ್ಧನ್ ಜಡಾಫಯಾ ಮಾತನಾಡಿ, ಗೃಹ ಸಚಿವರು ನನಗೆ ಕರೆ ಮಾಡಿ, ನನ್ನನ್ನ ಕೊಲ್ಲಲು ಬಂದಿದ್ದ, ಶಾರ್ಪ್ ಶೂಟರ್ನನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದರು. ಜಡಾಫಿಯಾ ಅವರು ಬಿಜೆಪಿ ಅಧ್ಯಕ್ಷರ ಜೊತೆ ನಾಲ್ಕು ದಿನಗಳ ಸೌರಾಷ್ಟ್ರ ಪ್ರವಾಸದಲ್ಲಿದ್ದರು.