ಕೊವಿಡ್-19 ರೋಗಿ ದಾಖಲಿಸಿಕೊಳ್ಳದ್ದಕ್ಕೆ ಆಸ್ಪತ್ರೆಗೆ 77 ಲಕ್ಷ ದಂಡ
ಅಹ್ಮದಾಬಾದ್, ಜೂನ್.28: ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ರೋಗಿಯನ್ನು ದಾಖಲಿಸಿಕೊಳ್ಳಲು ವಿಳಂಬ ತೋರಿದ ಖಾಸಗಿ ಆಸ್ಪತ್ರೆಗೆ 77 ಲಕ್ಷ ರೂಪಾಯಿ ದಂಡ ವಿಧಿಸಿರುವ ಘಟನೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಬೆಳಕಿಗೆ ಬಂದಿದೆ.
ಅಹ್ಮದಾಬಾದ್ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಹಿಬಾಗ್ ಪ್ರದೇಶದ ರಾಜಸ್ಥಾನ ಆಸ್ಪತ್ರೆ ಆಡಳಿತ ಮಂಡಳಿಯ 32 ಸದಸ್ಯರಿಗೂ ಪಾಲಿಕೆ ವತಿಯಿಂದ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಶನಿವಾರವಷ್ಟೇ ರಾಜಸ್ಥಾನ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಟ್ರಸ್ಟ್ ಎಲ್ಲ ಸದಸ್ಯರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು.
ಒಂದು ರಾಜ್ಯ.. ಒಂದು ತಿಂಗಳು.. 5 ಲಕ್ಷ ಜನರಿಗೆ ಕೊರೊನಾವೈರಸ್ ಪಕ್ಕಾ?
ಜೂನ್.18ರಂದು ಕೊರೊನಾವೈರಸ್ ಸೋಂಕಿತ ವ್ಯಕ್ತಿ ಚಿಕಿತ್ಸೆಗೆ ವೆಂಟಿಲೇಟರ್ ಅಗತ್ಯವಿರುವ ಹಿನ್ನೆಲೆ ರಾಜಸ್ಥಾನ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ವೇಳೆ ವೈದ್ಯರು ಸೋಂಕಿತನನ್ನು ದಾಖಲಿಸಿಕೊಳ್ಳುವಲ್ಲಿ ವಿಳಂಬ ತೋರಿದ್ದಾರೆ. ಇದರಿಂದ ಸೋಂಕಿತನು ಚಿಕಿತ್ಸೆ ಫಲಿಸದೇ ಪ್ರಾಣ ಬಿಟ್ಟಿದ್ದನು.
ಸ್ಪಷ್ಟನೆ ನೀಡುವಂತೆ ಸೂಚಿಸಿದ್ದ ಗುಜರಾತ್ ಹೈಕೋರ್ಟ್
ಕೊರೊನಾವೈರಸ್ ಸೋಂಕಿತನಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬ ತೋರಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಕಳೆದ ಜೂನ್.22ರಂದು ಗುಜರಾತ್ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು. ಆದರೆ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಅಹ್ಮದಾಬಾದ್ ಮಹಾನಗರ ಪಾಲಿಕೆಗೆ ಸೂಚನೆಯನ್ನು ನೀಡಿತ್ತು.
ಆಡಳಿತ ಮಂಡಳಿ, ಟ್ರಸ್ಟಿಗಳ ವಿರುದ್ಧ ಎಫ್ಐಆರ್
ಗುಜರಾತ್ ಹೈಕೋರ್ಟ್ ಸೂಚನೆಯಂತೆ ಶಾಹಿಬಾಗ್ ಪೊಲೀಸ್ ಠಾಣೆಯಲ್ಲಿ ಅಹ್ಮದಾಬಾದ್ ಪಾಲಿಕೆಯು ದೂರು ದಾಖಲಿಸಿತು. ರಾಜಸ್ಥಾನ ಆಸ್ಪತ್ರೆ ಆಡಳಿತ ಮಂಡಳಿಯ ಅಧ್ಯಕ್ಷರು ಸೇರಿದಂತೆ ಎಂಟು ಮಂದಿ ಸದಸ್ಯರು, 18 ಟ್ರಸ್ಟಿಗಳು ಹಾಗೂ ಪ್ರಾಧಿಕಾರದ 26 ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ(ಐಪಿಸಿ) 304 ಎ, 120 ಬಿ, 34ರ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಆಸ್ಪತ್ರೆ ಆಡಳಿತ ಮಂಡಳಿಗೆ 25 ಲಕ್ಷ, ಪ್ರತಿ ಸದಸ್ಯರಿಗೆ 2 ಲಕ್ಷ ದಂಡ
ಕೊರೊನಾವೈರಸ್ ಸೋಂಕಿತ ವ್ಯಕ್ತಿಯ ಸಾವಿಗೆ ಕಾರಣವಾದ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ಒಟ್ಟು 77 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ಪೈಕಿ ರಾಜಸ್ಥಾನ ಆಸ್ಪತ್ರೆಯ ಆಡಳಿತ ಮಂಡಳಿಗೆ 25 ಲಕ್ಷ ರೂಪಾಯಿ ದಂಡ ವಿಧಿಸಿದ್ದು, 26 ಸದಸ್ಯರಿಗೆ ತಲಾ 2 ಲಕ್ಷ ರೂಪಾಯಿ ದಂಡವನ್ನು ಹಾಕಲಾಗಿದೆ.
ಕೊವಿಡ್-19 ಸೋಂಕಿತರಿಗೆ ಬೆಡ್ ಮೀಸಲಿಡದ ಆಸ್ಪತ್ರೆ
ಅಹ್ಮದಾಬಾದ್ ನಲ್ಲಿ ಖಾಸಗಿ ಮತ್ತು ಸಹಕಾರಿ ಟ್ರಸ್ಟ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ ರಾಜಸ್ಥಾನ ಆಸ್ಪತ್ರೆಯು ಕೇಂದ್ರ ಸರ್ಕಾರದ ನಿಯಮವನ್ನು ಉಲ್ಲಂಘಿಸುತ್ತಿದೆ. ಕೊರೊನಾವೈರಸ್ ಸೋಂಕಿತರಿಗೆ ಆಸ್ಪತ್ರೆಯ ಶೇ.50ರಷ್ಟು ಬೆಡ್ ಗಳನ್ನು ಮೀಸಲು ಇರಿಸಬೇಕು ಎಂಬ ಕೇಂದ್ರ ಸರ್ಕಾರದ ಆದೇಶವೂ ಪಾಲನೆ ಆಗುತ್ತಿರಲಿಲ್ಲ. ಈ ಹಿನ್ನೆಲೆ ಕಳೆದ ಜೂನ್.22ರಂದು ಅಹ್ಮದಾಬಾದ್ ಮಹಾನಗರ ಪಾಲಿಕೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.