ನಿತ್ಯಾನಂದನ ಜೊತೆ ಪರಾರಿಯಾಗಿದ್ದ ಯುವತಿಯರು ಕೋರ್ಟ್ಗೆ ಹೇಳಿದ್ದೇನು?
ಅಹಮದಾಬಾದ್, ಡಿಸೆಂಬರ್ 11: ನಿತ್ಯಾನಂದನ ಜೊತೆ ಪರಾರಿಯಾಗಿರುವ ಇಬ್ಬರು ಮಹಿಳಾ ಸೇವಕಿಯರು ಕೋರ್ಟ್ ಮುಂದೆ ವೈಯಕ್ತಿಕವಾಗಿ ಹಾಜರಾಗಲು ನಿರಾಕರಿಸಿದ್ದಾರೆ. ಬದಲಾಗಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸುವುದಾಗಿ ಕೋರ್ಟ್ಗೆ ತಿಳಿಸಿದ್ದಾರೆ.
ತಂದೆ ಜನಾರ್ಧನ ಶರ್ಮಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಪ್ರಕಾರ ಕೋರ್ಟ್ ಮುಂದೆ ಹಾಜರಾಗುವಂತೆ ಹಾಗೂ ಇಬ್ಬರು ಮಕ್ಕಳನ್ನು ಕೋರ್ಟ್ಗೆ ಹಾಜರುಪಡಿಸುವಂತೆ ಗುಜರಾತ್ ಪೊಲೀಸರಿಗೆ ಹೈಕೋರ್ಟ್ ಸೂಚಿಸಿತ್ತು.
ಆದರೆ ಕೋರ್ಟ್ಗೆ ವ್ಯತಿರಿಕ್ತ ಹೇಳಿಕೆ ಸಲ್ಲಿಸಿರುವ ಲೋಪಮುದ್ರಾ ಹಾಗೂ ನಂದಿತಾ ನಾವು ಕೋರ್ಟ್ ಖುದ್ದಾಗಿ ಹಾಜರಾಗಲು ಸಧ್ಯಕ್ಕೆ ಸಾಧ್ಯವಿಲ್ಲ.
ಅಮೆರಿಕ ಅಥಾ ವೆಸ್ಇಂಡೀಸ್ನ ರಾಯಭಾರಿ ಕಚೇರಿಯಿಂದ ನೇರವಾಗಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆಗೆ ಸಿದ್ಧರಿದ್ದೇವೆ. ಅಲ್ಲಿಗೆ ಬರಲು ನಮಗೆ ತಂದೆಯಿಂದ ಜೀವಭಯವಿದೆ ಎಂದು ಕ್ಷುಲ್ಲಕ ಕಾರಣ ನೀಡಿದ್ದಾರೆ.
ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿದೇಶಕ್ಕೆ ಪರಾರಿ
ಇದರೊಂದಿಗೆ ನಿತ್ಯಾನಂದ ಸ್ವಾಮಿ ವಿದೇಶದಲ್ಲಿರುವುದು ಖಾತ್ರಿಯಾದಂತಾಗಿದೆ. ಹೀಗಾಗಿ ಕೋರ್ಟ್ನ ಮುಂದಿನ ಆದೇಶ ಹಾಗೂ ಗುಜರಾತ್ ಸರ್ಕಾರದ ಮುಂದಿನ ನಡೆ ಬಗ್ಗೆ ತೀವ್ರ ಕುತೂಹಲ ಆರಂಭವಾಗಿದೆ.
ನಿತ್ಯಾನಂದ ಸ್ವಾಮಿ ತನ್ನಿಬ್ಬರು ಮಕ್ಕಳನ್ನು ಅಪಹರಿಸಿದ್ದಾರೆ, ಕೂಡಲೇ ಮಕ್ಕಳನ್ನು ತನ್ನ ಸುಪರ್ದಿಗೆ ನೀಡಿ ಎಂದು ತಂದೆ ಜನಾರ್ಧನ ಶರ್ಮಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿದ್ದ ಹೈಕೋರ್ಟ್ ಮಕ್ಕಳನ್ನು ಕೋರ್ಟ್ಗೆ ಹಾಜರುಪಡಿಸುವಂತೆ ಗುಜರಾತ್ ಪೊಲೀಸರಿಗೆ ನೋಟಿಸ್ ನೀಡಿತ್ತು.
ಇದರ ಮಧ್ಯೆ ನಿತ್ಯಾನಂದ ಸ್ವಾಮಿಯು ಅಕ್ರಮವಾಗಿ ಪಾಸ್ಪೋರ್ಟ್ ಕೂಡ ಇಲ್ಲದೆ ವಿದೇಶಕ್ಕೆ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಹಾಗೆಯೇ ಇಕ್ವಿಡಾರ್ ಬಳಿ ದ್ವೀಪವೊಂದನ್ನು ಖರೀದಿಸಿ 'ಕೈಲಾಸ' ಎನ್ನುವ ದೇಶ ನಿರ್ಮಾಣಕ್ಕೆ ನಿತ್ಯಾನಂದ ತಯಾರಿ ನಡೆಸಿಕೊಳ್ಳುತ್ತಿರುವುದಾಗಿ ಆಶ್ರಮದ ವೆಬ್ಸೈಟ್ ತಿಳಿಸಿತ್ತು. ಆದರೆ ಇದನ್ನು ಈಕ್ವಿಡಾರ್ ಸರ್ಕಾರ ನಿರಾಕರಿಸಿತ್ತು.