ಗಿರ್ ಅರಣ್ಯದ ಏಕೈಕ ಮತದಾರ ಮಹಾಂತ ಬಾಪು ನಿಧನ
ಅಹಮದಾಬಾದ್, ನವೆಂಬರ್ 02: ದೇಶದ ಜನಪ್ರಿಯ ಮತದಾರ ಎನಿಸಿಕೊಂಡಿದ್ದ ಗಿರ್ ಅರಣ್ಯ ಪ್ರದೇಶದ ನಿವಾಸಿ, ಸೋಮನಾಥ್ ಜಿಲ್ಲೆಯ ಮತಕ್ಷೇತ್ರವೊಂದರ ಏಕೈಕ ಮತದಾರ ಮಹಾಂತ ಭರತ್ ದಾಸ್ ಬಾಪು ನಿಧನರಾಗಿದ್ದಾರೆ.
ಅನಾರೋಗ್ಯ ಪೀಡಿತರಾಗಿ ರಾಜ್ ಕೋಟ್ ನ ಆಸ್ಪತ್ರೆ ಸೇರಿದ್ದ ಮಹಾಂತ ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರದಂದು ಮೃತರಾಗಿದ್ದಾರೆ ಎಂದು ಅವರ ಅನುಯಾಯಿಗಳು ತಿಳಿಸಿದ್ದಾರೆ.
ಸೋಮನಾಥ್ ಜಿಲ್ಲೆಯ ಜುನಾಗಢ್ ಲೋಕಸಭಾ ಕ್ಷೇತ್ರದ ಬನೇಜ್ ಮತಗಟ್ಟೆಯ ಏಕೈಕ ಮತದಾರರಾಗಿ ಮಹಾಂತ ಬಾಪು ಗುರುತಿಸಿಕೊಂಡಿದ್ದರು. ಏಕೈಕ ಮತದಾರನಿಗಾಗಿ ಕಾಡಿನ ನಡುವೆ ಮತಗಟ್ಟೆ ಸ್ಥಾಪಿಸಿ, ಮತದಾನ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಗಿರ್ ಅರಣ್ಯದ ಪಶ್ಚಿಮ ಪ್ರದೇಶದಲ್ಲಿರುವ ಶಿವ ದೇಗುಲ ಆಶ್ರಮವಾಸಿಯಾಗಿದ್ದ ಮಹಾಂತ ಬಾಪು ಅವರಿಗೆ ಕೆಲಕಾಲದಿಂದ ಕಿಡ್ನಿ ಸಮಸ್ಯೆ ಎದುರಾಗಿತ್ತು.
ಮಹಾಂತ ಅವರನ್ನು ರಾಜ್ ಕೋಟ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ, ಶನಿವಾರದಂದು ಗಿರ್ ಅರಣ್ಯದ ಜಾಮ್ವಾಲ ಪ್ರದೇಶದಲ್ಲಿ ಆಶ್ರಮದ ಬಳಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕೊನೆಯ ಬಾರಿ ಮತದಾನ ಮಾಡಿದ್ದರು.
ಲೋಕಸಭೆ ಚುನಾವಣೆಯ ವಿಶೇಷ ಮತದಾರ
ಗಿರ್ ಅರಣ್ಯದ ಪಶ್ಚಿಮ ಪ್ರದೇಶದಲ್ಲಿರುವ ಶಿವ ದೇಗುಲದ ಅರ್ಚಕರಾದ 62 ವರ್ಷ ವಯಸ್ಸಿನ ಮಹಾಂತ ಭರತ್ ದಾಸ್ ದರ್ಶನ್ ದಾಸ್ ಅವರು ಈ ದೇಗುಲಕ್ಕೆ ಮಹಾಭಾರತ ಕಾಲದ ನಂಟಿದೆ ಎಂದಿದ್ದಾರೆ. ಈ ಮತಗಟ್ಟೆಯಲ್ಲದೆ ಜಾಮ್ ನಗರದ ಓಖಾ ಕರಾವಳಿಯಿಂದ 30 ಕಿ.ಮೀ ದೂರದ ಸಮುದ್ರ ಮಧ್ಯ ಕಾಣಿಸುವ ಅಜಾದ್ ದ್ವೀಪದಲ್ಲಿ ಮತಗಟ್ಟೆ ಸ್ಥಾಪಿಸಿ, ಅಲ್ಲಿನ 40 ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅನುವು ಮಾಡಿಕೊಳ್ಳಲಾಯಿತು.
ಖುಷಿಯಿಂದ ಪ್ರತಿಬಾರಿ ತಮ್ಮ ಹಕ್ಕು ಚಲಾಯಿಸುತ್ತಿದ್ದರು
2007ರಿಂದ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವ ಭರತ್ದಾಸ್ ಅವರು ಲೋಕಸಭ್ ಮತದಾನ ಮಾಡಿದ ಬಳಿಕ ಮಾತನಾಡಿ, "ಒಂದು ವೋಟ್ಗಾಗಿ ಸರ್ಕಾರ ಸಾಕಷ್ಟು ಹಣವನ್ನು ವ್ಯಯಿಸಿದೆ. ನಾನು ಮತ ಚಲಾಯಿಸುವ ಮೂಲಕ ಇಲ್ಲಿ ಶೇ. ನೂರಕ್ಕೆ ನೂರು ಮತದಾನ ಮಾಡಿದಂತಾಗಿದೆ. ಇದೇ ರೀತಿ ಎಲ್ಲೆಡೆ ಮತದಾನವಾಗಬೇಕು. ಎಲ್ಲರಿಗೂ ನಾನು ಮನವಿ ಮಾಡಿಕೊಳ್ಳುತ್ತೇನೆ ಹೋಗಿ ಮತ ಚಲಾಯಿಸಿ" ಎಂದು ಕರೆ ನೀಡಿದ್ದರು.
'No one is left behind' ಎಂಬ ಧ್ಯೇಯ
'No one is left behind' ಎಂಬ ಧ್ಯೇಯದೊಂದಿಗೆ ಚುನಾವಣೆ ಪ್ರಕ್ರಿಯೆ ನಡೆಸಿದ ಚುನಾವಣಾ ಆಯೋಗವು ಗಿರ್ ಅರಣ್ಯ ಪ್ರದೇಶದಲ್ಲಿ ಏಕೈಕ ಮತದಾರನಿಗಾಗಿ ಮತಗಟ್ಟೆ ಹಾಗೂ ಸಮುದ್ರ ನಡುವೆ ಇರುವ ನಡುಗಡ್ಡೆಯಲ್ಲಿರುವ 40 ಮಂದಿಗಾಗಿ ವಿಶೇಷ ಮತಗಟ್ಟೆಯನ್ನು ಸ್ಥಾಪಿಸಿದ್ದು ವಿಶೇಷ.
ಗಿರ್ ಅರಣ್ಯ ಪ್ರದೇಶದ ಮತಗಟ್ಟೆಯಲ್ಲಿ ಮತದಾನ ಮಾಡಿದ ವ್ಯಕ್ತಿಯ ಹೆಸರು ಭರತ್ ದಾಸ್ ಬಾಪು. ದಟ್ಟಾರಣ್ಯದ ನಡುವೆ ಇರುವ ಪುರಾಣ ಪ್ರಸಿದ್ಧ ಬನೇಜ್ ದೇಗುಲದ ಬಳಿ ಈ ಮತಗಟ್ಟೆ ಸ್ಥಾಪಿಸುವುದು ಕಷ್ಟಕರವಾಗಿತ್ತು ಎಂದು ಚುನಾವಣಾಧಿಕಾರಿಗಳು ಸ್ಮರಿಸಿದ್ದಾರೆ.
400ಕ್ಕೂ ಅಧಿಕ ವಿಶೇಷ ಮತಗಟ್ಟೆ
ಗುಜರಾತಿನಲ್ಲಿ 51,851 ಮತಗಟ್ಟೆಗಳ ಪೈಕಿ 400ಕ್ಕೂ ಅಧಿಕ ಮತಗಟ್ಟೆಗಳು ಒಂದಿಲ್ಲೊಂದು ರೀತಿಯಲ್ಲಿ ವಿಶೇಷವೆನಿಸಿವೆ. ಗುಜರಾತಿನ 4 ಕೋಟಿಗೂ ಅಧಿಕ ಮತದಾರರು 371 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಿದ್ದು, ಎಲ್ಲಾ 26 ಕ್ಷೇತ್ರಗಳಲ್ಲಿ ಬಿಜೆಪಿ ಜಯ ದಾಖಲಿಸಿತ್ತು. ಮಹಾಂತ ಅವರು ಮತ ಹಾಕಿದ ಜುನಾಗಢ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಶ್ ಚೂಡಾಸಮಾ ಅವರು ಕಾಂಗ್ರೆಸ್ಸಿನ ಪೂಜಾಭಾಯ್ ಅವರನ್ನು ಸೋಲಿಸಿ ಗೆಲುವು ದಾಖಲಿಸಿದರು.