ಗುಜರಾತ್ ಸಂಸದ, ಮಾಜಿ ಸಚಿವ ಎಂ.ಬಿ ವಾಸವ ಬಿಜೆಪಿಗೆ ರಾಜೀನಾಮೆ
ನವದೆಹಲಿ, ಡಿಸೆಂಬರ್ 29: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಾಜಿ ಕೇಂದ್ರ ಸಚಿವ ಮನ್ಸುಖ್ ಭಾಯ್ ವಾಸವ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಗುಜರಾತ್ನ ಭರೂಚ್ ಲೋಕಸಭೆ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು ಸಂಸತ್ನ ಬಜೆಟ್ ಅಧಿವೇಶನದ ವೇಳೆ ಲೋಕಸಭೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಗುಜರಾತ್ ರಾಜ್ಯ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಅವರಿಗೆ ಪತ್ರ ಬರೆದಿರುವ ವಾಸವ, 'ನಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ. ನಾನು ಪಕ್ಷದ ಮೌಲ್ಯಗಳ ಕಾಳಜಿ ವಹಿಸಿದ್ದೆ. ಆದರೆ ಎಷ್ಟಾದರೂ ನಾನು ಸಾಮಾನ್ಯ ಮನುಷ್ಯ. ಗೊತ್ತಿದ್ದೋ, ಗೊತ್ತಿಲ್ಲದೆಯೋ ಮನುಷ್ಯ ತಪ್ಪುಗಳನ್ನು ಮಾಡುತ್ತಾನೆ. ನನ್ನ ತಪ್ಪುಗಳು ಪಕ್ಷಕ್ಕೆ ಹಾನಿಯುಂಟುಮಾಡಬಾರದು ಎಂದು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಹೇಳಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗೆ ವಿರೋಧ: 100 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆ
'ಬಜೆಟ್ ಅಧಿವೇಶನದ ಸಂದರ್ಭದಲ್ಲಿ ನಾನು ಸ್ಪೀಕರ್ ಅವರನ್ನು ಖುದ್ದು ಭೇಟಿ ಮಾಡಲಿದ್ದೇನೆ. ಲೋಕಸಭೆ ಸದಸ್ಯತ್ವಕ್ಕೆ ನನ್ನ ರಾಜೀನಾಮೆಯನ್ನು ಹಸ್ತಾಂತರಿಸಲಿದ್ದೇನೆ. ಈ ನನ್ನ ನಿರ್ಧಾರವನ್ನು ದಯಮಾಡಿ ಕೇಂದ್ರದ ನಾಯಕತ್ವಕ್ಕೆ ತಿಳಿಸಿ' ಎಂದು ತಿಳಿಸಿದ್ದಾರೆ.
ರಾಜ್ಯ ಬಿಜೆಪಿಯ ಚಟುವಟಿಕೆಗಳನ್ನು ಬಗ್ಗೆ ವಾಸವ ಅವರು ಅನೇಕ ದಿನಗಳಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಸಮಸ್ಯೆಗಳ ಬಗ್ಗೆ ಪಕ್ಷ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕಟು ಟೀಕೆಗಳನ್ನು ಮಾಡಿದ್ದರು. ನರ್ಮದಾ ಜಿಲ್ಲೆಯಲ್ಲಿ 121 ಗ್ರಾಮಗಳನ್ನು ಸೂಕ್ಷ್ಮ ಪರಿಸರ ವಲಯಗಳೆಂದು ಘೋಷಿಸಿದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಸೂಚನೆಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಜತೆಗೆ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದರು.