ಕೇಂದ್ರ ಮಾಜಿ ಸಚಿವ, ಗುಜರಾತ್ ಶಾಸಕ ದಿಗ್ವಿಜಯ್ ನಿಧನ
ಅಹಮದಾಬಾದ್, ಏಪ್ರಿಲ್ 4: ಕೇಂದ್ರದ ಪರಿಸರ ಖಾತೆ ಸಚಿವ, ಗುಜರಾತ್ ವಾಂಕಾನೇರ್ ಶಾಸಕ ದಿಗ್ವಿಜಯ್ ಸಿನ್ಹ್ ಝಲ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ವಂಕಾನೇರ್ ಕ್ಷೇತ್ರದ ಶಾಸಕರಾಗಿದ್ದ ದಿಗ್ವಿಜಯ್ ಅವರು 1932ರ ಆಗಸ್ಟ್ 20ರಂದು ರಂಜಿತ್ ವಿಲಾಸ್ ಅರಮನೆಯಲ್ಲಿ ಜನಸಿದರು. ವಾಂಕನೇರ್ ಪ್ರಾಂತ್ಯದ ಕ್ಯಾಪ್ಟನ್ ಮಹಾರಾಣ ರಾಜಶ್ರೀ ಪ್ರತಾಪ್ ಸಿನ್ಹಜಿ ಸಾಹಿಬ್ ಹಾಗೂ ಸಿಸೋಡಿಜಿ ಮಹಾರಾಣಿ ರಾಮ ಕುಮಾರಿ ಸಾಹಿಬಾ ಅವರ ಹಿರಿಯ ಪುತ್ರರಾಗಿದ್ದಾರೆ.
ರಾಜ್ ಕೋಟ್ ರಾಜ್ ಕುಮಾರ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಬಳಿಕ ದಿಗ್ವಿಜಯ್ ಅವರು ಕೇಂಬ್ರಿಜ್ ವಿವಿಯಿಂದ ಪದವಿ, ದೆಹಲಿ ವಿವಿಯ ಸೈಂಟ್ ಸ್ಟೀಫನ್ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು.
ಸ್ವಾತಂತ್ರ್ಯ ನಂತರ ವಾಂಕನೇರ್ ಪ್ರಾಂತ್ಯವು ವಿಲೀನವಾಗುವುದಕ್ಕೂ ಮುನ್ನ ಯುವರಾಜರಾಗಿ ದಿಗ್ವಿಜಯ್ ಅವರನ್ನು ಪರಿಗಣಿಸಲಾಗಿತ್ತು. 1971ರ ತನಕ ರಾಜಮನೆತನದ ಸೌಲಭ್ಯಗಳು, ಪದ್ಧತಿ ಜಾರಿಯಲ್ಲಿತ್ತು.
ಕಾಂಗ್ರೆಸ್ ಮೂಲಕ ರಾಜಕೀಯ ರಂಗ ಪ್ರವೇಶಿಸಿದ ದಿಗ್ವಿಜಯ್ ಅವರು 1962ರಲ್ಲಿ ವಾಂಕನೇರ್ ಶಾಸಕರಾದರು. ನಂತರ 80ರ ದಶಕದಲ್ಲಿ ಸುರೇಂದ್ರ ನಗರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. 1982-84ರಲ್ಲಿಪರಿಸರ ಖಾತೆ ನಿಭಾಯಿಸಿದ ಮೊದಲ ಕೇಂದ್ರ ಸಚಿವರೆನಿಸಿದರು. ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಎರಡು ಬಾರಿ ಪರಿಸರ ಸಮಸ್ಯೆಗಳ ಕುರಿತು ಭಾಷಣ ಮಾಡಿದ್ದರು.
ದೇಶದಲ್ಲಿ ರಾಷ್ಟ್ರೀಯ ವನ್ಯಜೀವಿ ಸಂರಕ್ಷಣೆ, ನ್ಯಾಷನಲ್ ಪಾರ್ಕ್ ಸ್ಥಾಪನೆ, ರೈಲ್ವೆ ಹಳಿಗಳಲ್ಲಿ ಮರದ ದಿಬ್ಬಿ ಬದಲು ಸಿಮೆಂಟ್ ಬಳಕೆ ಮೂಲಕ ಮರಗಳ ರಕ್ಷಣೆ ಮುಂತಾದ ಪ್ರಮುಖ ನಿರ್ಧಾರ ಕೈಗೊಂಡರು.
ಇಂಡಿಯನ್ ಹೆರಿಟೇಜ್ ಹೋಟೆಲ್ಸ್, ಗುಜರಾತ್ ಹೋಟೆಲ್ ಅಸೋಸಿಯೇಷನ್ ಸಂಚಾಲಕರಾಗಿ, ಚೇರ್ಮನ್ ಆಗಿದ್ದರು. ಗುಜರಾತ್ ರಾಜ್ಯದಲ್ಲಿ ಸಹಕಾರ ಸಂಘ ಬ್ಯಾಂಕ್, ವಿವಿಧ ಮಿಲ್ ಸ್ಥಾಪನೆ ಮಾಡಿದರು. ಐಟಿಡಿಸಿ ನಿರ್ದೇಶಕರಾಗಿ ಕೂಡಾ ಕಾರ್ಯ ನಿರ್ವಹಿಸಿದರು. ಅಖಿಲ ಭಾರತ ಕ್ಷತೀಯ ಮಹಾಸಭಾದ ಅಧ್ಯಕ್ಷರಾಗಿ 1989ರಿಂದ ಕಾರ್ಯ ನಿರ್ವಹಿಸುತ್ತಿದ್ದರು.