ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್: ವಂಜಾರಾ ಆರೋಪ ಮುಕ್ತ
ನವದೆಹಲಿ, ಮೇ 02: ನಕಲಿ ಎನ್ಕೌಂಟರ್ ಪ್ರಕರಣವೊಂದರಲ್ಲಿ ಆರೋಪಿಯಾಗಿ ಜೈಲು ಸೇರಿ, ಜಾಮೀನಿನ ಮೇಲೆ ಹೊರ ಬಂದಿದ್ದ ನಿವೃತ್ತ ಐಪಿಎಸ್ ಅಧಿಕಾರಿ, ಗುಜರಾತ್ ನ ಮಾಜಿ ಡಿಐಜಿ ಡಿಜಿ ವಂಜಾರಾಗೆ ಇಂದು ಶುಭ ಸುದ್ದಿ ಸಿಕ್ಕಿದೆ. ಇಶ್ರತ್ ಜಹಾನ್ 'ನಕಲಿ' ಎನ್ಕೌಂಟರ್ ಪ್ರಕರಣದಲ್ಲಿ ವಂಜಾರಾ ಹಾಗೂ ಎನ್ ಕೆ ಅಮೀನ್ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ.
ಗುಜರಾತ್ ರಾಜ್ಯದಲ್ಲಿ 2004ರಲ್ಲಿ ನಡೆದ ಇಶ್ರತ್ ಜಹಾನ್ 'ನಕಲಿ' ಎನ್ಕೌಂಡರ್ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಲಯವು ಗುರುವಾರದಂದು ವಂಜಾರಾ ಹಾಗೂ ಅಮೀನ್ ಅವರ ಮನವಿಯನ್ನು ಪುರಸ್ಕರಿಸಿದೆ.ಈ ಪ್ರಕರಣದಲ್ಲಿ ಮಾಜಿ ಗುಜರಾತ್ ಪೊಲೀಸ್ ಮುಖ್ಯಸ್ಥ ಪಿ ಪಿ ಪಾಂಡೆ ಅವರು ದೋಷಮುಕ್ತಗೊಂಡಿದ್ದಾರೆ.
ನಕಲಿ ಎನ್ ಕೌಂಟರ್ : ಅಮಿತ್ ಶಾಗೆ ಕೋರ್ಟಿನಿಂದ ಕ್ಲೀನ್ ಚಿಟ್
2005 ರ ಸೋಹ್ರಾಬುದ್ದೀನ್ ಶೇಖ್ ಮತ್ತು ಆತನ ಪತ್ನಿ ಎನ್ಕೌಂಟರ್ ಹಾಗೂ 2006ರ ತುಳಸಿರಾಮ್ ಪ್ರಜಾಪತಿ, ಇಶ್ರಾಂತ್ ಜಹಾನ್, ಸಾದಿಕ್ ಜಮಾಲ್, ಮತ್ತಿತರ ಎನ್ಕೌಂಟರ್ಗೆ ಸಂಬಂಧಿಸಿ ವಂಜಾರಾ ಅವರನ್ನು ಬಂಧಿಸಲಾಗಿತ್ತು.
2007 ರ, ಏಪ್ರಿಲ್ 24ರಲ್ಲಿ ಬಂಧಿತರಾಗಿದ್ದ 59 ವರ್ಷದ ವಂಜಾರಾ ಜೈಲಿನಲ್ಲಿರುವಾಗಲೇ ರಾಜೀನಾಮೆ ನೀಡಿದ್ದರು. ಅವರ ಜತೆ ಇನ್ನಿಬ್ಬರು ಐಪಿಎಸ್ ಅಧಿಕಾರಿಗಳಾದ ರಾಜ್ ಕುಮಾರ್ ಪಂಡಿನ್, ದಿನೇಶ್ ಸಹ ರಾಜೀನಾಮೆ ನೀಡಿದ್ದರು.
ಇಶ್ರತ್ ಜಹಾನ್ ಪ್ರಕರಣದಲ್ಲಿ ಈ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳ ವಿರುದ್ಧ ಷಡ್ಯಂತ್ರ, ಅಕ್ರಮ ಬಂಧನ ಹಾಗೂ ಕೊಲೆ ಆರೋಪಗಳನ್ನು ಸಿಬಿಐ ಹೊರಿಸಿತ್ತು.ಪಾಂಡೆ, ವಂಝಾರ ಹಾಗೂ ಜಿ ಎಲ್ ಸಿಂಘಲ್ ಅವರು ಸೇರಿದಂತೆ ಏಳು ಗುಜರಾತ್ ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಬಿಐ 2013ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು.
ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಇಶ್ರತ್ ಜಹಾನ್ ಹಾಗೂ ಮೂವರನ್ನು ಲಷ್ಕರ್ ಉಗ್ರ ಸಂಘಟನೆಗೆ ಸೇರಿದವರು ಎಂದು ಭಾವಿಸಿ, 2004ರಲ್ಲಿ ಎನ್ ಕೌಂಟರ್ ಮಾಡಲಾಗಿತ್ತು.