ಒಂದೇ ಚಿತೆಯಲ್ಲಿ ಐದು ಶವಗಳ ಸಂಸ್ಕಾರ; ಗುಜರಾತ್ನಲ್ಲಿ ಹೇಗಿದೆ ಕೊರೊನಾ ಪರಿಸ್ಥಿತಿ?
ಅಹಮದಾಬಾದ್, ಏಪ್ರಿಲ್ 16: ಗುಜರಾತ್ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಚಿತಾಗಾರಗಳಲ್ಲಿ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
ಹೀಗಾಗಿ ಅತಿ ಬೇಗನೆ ಶವಸಂಸ್ಕಾರ ನೆರವೇರಿಸಲು ಈಗ ಒಟ್ಟೊಟ್ಟಿಗೆ ಹೆಣಗಳನ್ನು ಸುಡಲಾಗುತ್ತಿದೆ. ಬುಧವಾರ ರಾತ್ರಿಯಿಂದ ಸೂರತ್ನಲ್ಲಿ ಐದು ಹೆಣಗಳನ್ನು ಒಂದೇ ಚಿತೆಯಲ್ಲಿಟ್ಟು ಸಂಸ್ಕಾರ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಕಳೆದ ಎರಡು ದಿನಗಳಿಂದ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಹೀಗೆ ಒಟ್ಟೊಟ್ಟಿಗೆ ಹೆಣಗಳನ್ನು ಸುಡಲಾಗುತ್ತಿದೆ.
ಗುಜರಾತ್ APMC ಬಂದ್; ಎಚ್ಚೆತ್ತುಕೊಳ್ಳಬೇಕಾದ ಸಮಯ
18 ಅಡಿ ಎತ್ತರ, 8 ಅಡಿ ಅಗಲದ ಚಿತೆ ನಿರ್ಮಿಸಿ ಒಂದೇ ಬಾರಿ ಐದು ಶವಗಳನ್ನು ಮೂರು ಅಡಿ ಅಂತರದಲ್ಲಿಟ್ಟು ಒಟ್ಟಿಗೆ ಸಂಸ್ಕಾರ ಮಾಡಲಾಗುತ್ತಿದೆ. ಸದ್ಯಕ್ಕೆ ಇಂಥ ಮೂರು ದೊಡ್ಡ ಚಿತೆಯನ್ನು ಸಿದ್ಧಪಡಿಸಲಾಗಿದೆ.
ಆದರೆ ಈ ಮಟ್ಟದಲ್ಲಿ ಕೊರೊನಾ ಸೋಂಕಿನಿಂದ ಜನರು ಸಾಯುತ್ತಿಲ್ಲ ಎಂದು ಗುಜರಾತ್ ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ. "ಗುಜರಾತ್ನಲ್ಲಿ ಕೊರೊನಾ ಸೋಂಕಿನಿಂದಾಗಿ ಸಾಯುತ್ತಿರುವವರ ಸಂಖ್ಯೆಯನ್ನು ಸರ್ಕಾರ ಮುಚ್ಚಿಟ್ಟುಕೊಳ್ಳುತ್ತಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಕೊರೊನಾದಿಂದಾಗಿ ಮೃತಪಟ್ಟ ಶೇ 60ರಷ್ಟು ಮಂದಿಗೆ ಬೇರೆ ಆರೋಗ್ಯ ಸಮಸ್ಯೆಗಳೂ ಇದ್ದ ಕಾರಣ ಕೊರೊನಾ ಸಾವಿನ ಪಟ್ಟಿಯಲ್ಲಿ ಇದು ಬರುವುದಿಲ್ಲ" ಎಂದು ವಿವರಣೆ ನೀಡಿದ್ದಾರೆ.
ಆದರೆ ಚಿತಾಗಾರಕ್ಕೆ ಬರುತ್ತಿರುವ ಮೃತದೇಹಗಳ ಸಂಖ್ಯೆ ಹಾಗೂ ಸರ್ಕಾರ ಘೋಷಣೆ ಮಾಡಿರುವ, ಕೊರೊನಾದಿಂದ ಸಾವನ್ನಪ್ಪಿರುವವರ ಸಂಖ್ಯೆ ಭಿನ್ನವಾಗಿರುವುದಾಗಿ ತಿಳಿದುಬಂದಿದೆ. ಗುಜರಾತ್ನ ಹಲವು ಕಡೆಗಳಲ್ಲಿನ ಚಿತಾಗಾರಗಳಲ್ಲಿ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಅಂತ್ಯಸಂಸ್ಕಾರ ನಡೆಸುತ್ತಿರುವುದಾಗಿ ತಿಳಿದುಬಂದಿದೆ.