ಆಸ್ಪತ್ರೆಯ ಐಸಿಯುದಲ್ಲಿ ಬೆಂಕಿ: ಸುಟ್ಟ ಗಾಯಗಳಿಂದ 5 ಕೋವಿಡ್ ರೋಗಿಗಳು ಸಾವು
ರಾಜ್ಕೋಟ್, ನವೆಂಬರ್ 27: ಗುಜರಾತ್ನ ರಾಜ್ಕೋಟ್ ನಗರದಲ್ಲಿ ಶುಕ್ರವಾರ ನಸುಕಿನಲ್ಲಿ ಉಮಟಾದ ಭೀಕರ ಬೆಂಕಿ ಅವಘಡದಲ್ಲಿ ಐದು ಮಂದಿ ಕೊರೊನಾ ವೈರಸ್ ಸೋಂಕಿತರು ದಹನಗೊಂಡಿದ್ದಾರೆ. ರಾಜ್ಕೋಟ್ನ ಸರ್ದಾರ್ ನಗರದ ಮಾವಡಿಯಲ್ಲಿನ ಶಿವಾನಂದ ಜನರಲ್ ಆಂಡ್ ಮಲ್ಟಿಸ್ಪೆಷಾಲಿಟಿ ಟ್ರಸ್ಟ್ ಆಸ್ಪತ್ರೆಯಲ್ಲಿನ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಇತರೆ ಭಾಗಗಳಿಗೂ ಆವರಿಸಿದೆ.
ಶಿವಾನಂದ್ ಆಸ್ಪತ್ರೆಯನ್ನು ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗೆಂದು ಮೀಸಲಿರಿಸಲಾಗಿದ್ದು, ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ 11 ರೋಗಿಗಳು ಐಸಿಯುದೊಳಗೆ ಇದ್ದರು. ಒಟ್ಟು 33 ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಐಸಿಯುದ ಒಳಗಿನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಗ್ನಿ ಅನಾಹುತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಕೂಡಲೇ ಆಸ್ಪತ್ರೆಗೆ ಧಾವಿಸಿದ ರಾಜ್ಕೋಟ್ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿದ್ದ ಎಲ್ಲ ರೋಗಿಗಳನ್ನೂ ಬೇರೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಐಸಿಯುದಲ್ಲಿದ್ದ ಅನೇಕರಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಆದರೆ ಐದು ಮಂದಿ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರು ಮಂದಿಯ ಜೀವ ಉಳಿಸಲು ಸಾಧ್ಯವಾಗಿದೆ.