ವಿದೇಶಾಂಗ ಸಚಿವ ಜೈಶಂಕರ್ ಗುಜರಾತಿನಿಂದ ರಾಜ್ಯಸಭೆಗೆ
ನವದೆಹಲಿ, ಜೂನ್ 25: ರಾಜ್ಯ ಸಭೆ ಉಪಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಬಿಜೆಪಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಗುಜರಾತಿನಿಂದ ಕಣಕ್ಕಿಳಿಸಿದೆ.
ಲೋಕಸಭೆಗೆ ಸ್ಪರ್ಧಿಸಿ ಗೆದ್ದ ರಾಜ್ಯಸಭೆ ಸದಸ್ಯರಾಗಿದ್ದ ಅಮಿತ್ ಶಾ, ಸ್ಮೃತಿ ಇರಾನಿ, ರವಿಶಂಕರ್ ಪ್ರಸಾದ್ ಅವರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕಿದೆ.
ಅಧಿಕೃತವಾಗಿ ಬಿಜೆಪಿ ಸೇರಿದ ವಿದೇಶಾಂಗ ಸಚಿವ ಎಸ್ ಜೈಶಂಕರ್
ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಎಸ್ ಜೈಶಂಕರ್ ಅವರನ್ನು ಲೋಕಸಭೆ ಚುನಾವಣೆಯ ನಂತರ ನಡೆದ ಸಂಪುಟ ರಚನೆಯ ಸಂದರ್ಭದಲ್ಲಿ ಬಿಜೆಪಿ ವಿದೇಶಾಂಗ ಸಚಿವರನ್ನಾಗಿ ನೇಮಿಸಿತ್ತು. ಸೋಮವಾರ ಅಧಿಕೃತವಾಗಿ ಬಿಜೆಪಿಗೆ ಸೇರಿದ ಜೈಶಂಕರ್ ಅವರನ್ನು ಗುಜರಾತಿನಿಂದ ರಾಜ್ಯಸಭೆಗೆ ಆರಿಸಲಾಗುತ್ತದೆ.
1977ರ ಬ್ಯಾಚಿನ ಇಂಡಿಯನ್ ಫಾರಿನ್ ಸರ್ವೀಸ್ ಅಧಿಕಾರಿಯಾಗಿದ್ದ ಅವರು ಯುರೋಪಿನ ಅನೇಕ ರಾಜಧಾನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಶ್ರೀಲಂಕಾದಲ್ಲಿ ಶಾಂತಿ ಸ್ಥಾಪನೆಗಾಗಿ ಭಾರತ ಯತ್ನಿಸಿದ್ದಾಗ ರಾಜಕೀಯ ಸಲಹೆಗಾರ, ಕಾರ್ಯದರ್ಶಿಯಾಗಿದ್ದರು. 2018ರಲ್ಲಿ ನಿವೃತ್ತಿ ಬಳಿಕ ಟಾಟಾ ಸಮೂಹದ ಗ್ಲೋಬಲ್ ಕಾರ್ಪೊರೇಟ್ ವ್ಯವಹಾರಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.