ಮುಂದುವರಿದ 'ವಾಯು' ಚಂಡಮಾರುತದ ಅಬ್ಬರ: ರಾಜ್ಯದಲ್ಲೂ ಮಳೆ?
ಅಹ್ಮದಾಬಾದ್, ಜೂನ್ 12: ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಎದ್ದಿರುವ 'ವಾಯು' ಚಂಡಮಾರುತ ಬುಧವಾರ ತನ್ನ ವೇಗವನ್ನು ಹೆಚ್ಚಿಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಗುಜರಾತ್, ಮುಂಬೈಯಲ್ಲಿ ಚಂಡಮಾರುತದ ಕಾರಣ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕರ್ನಾಟಕ ಮತ್ತು ಕೇರಳದ ಕರಾವಳಿ ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.
ಅಬ್ಬರಿಸಲಿದೆ 'ವಾಯು' ಚಂಡಮಾರುತ, ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ
ಗುಜರಾತ್, ಗೋವಾ ಮತ್ತು ಮುಂಬೈಯಲ್ಲೂ ಮಳೆಯಾಗಲಿದ್ದು, ಅರಬ್ಬಿ ಸಮುದ್ರದ ಬಳಿ ಮೀನುಗಾರಿಕೆಯನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸುವಂತೆ ಸೂಚನೆ ನೀಡಲಾಗಿದೆ.
ಈಗಾಗಲೇ ವಾಯು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದು, ಗುಜರಾತಿನ ಕರಾವಳಿ ಪ್ರದೇಶ ವೆರವಲ್ ಅನ್ನು ತಲುಪಿದೆ. ಬುಧವಾರ ಮತ್ತು ಗುರುವಾರ ಗುಜರಾತಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಂಡಮಾರುತದ ಪ್ರಭಾವದಿಂದ ಈಗಾಗಲೇ ಬೆಂಗಳೂರಿನಲ್ಲೂ ತಾಪಮಾನ ಇಳಿಕೆಯಾಗಿದ್ದು, ಇಂದು ಸಹ ಮೋಡ ಕವಿದ ವಾತಾವರಣ ಕಂಡುಬರಲಿದೆ.