ಗುಜರಾತ್ ಬಿಟ್ಟು ಪಾಕಿಸ್ತಾನದೆಡೆಗೆ ಪಥ ಬದಲಿಸಿದ 'ವಾಯು' ಚಂಡಮಾರುತ
ಅಹಮದಾಬಾದ್, ಜೂನ್ 13: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾಗಿದ್ದ ಚಂಡ ಮಾರುತ 'ವಾಯು' ಇದೀಗ ಪಥ ಬದಲಿಸಿದ್ದು, ಗುಜರಾತ್ಗೆ ಯಾವುದೇ ಅಪಾಯವಿಲ್ಲ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ವರದಿ ಮಾಡಿದೆ.
ವಾಯು ಚಂಡಮಾರತವು ಗುಜರಾತಿನ ಕರಾವಳಿ ಪ್ರದೇಶವಾದ ಪೋರಬಂದರು ಪ್ರವೇಶಿಸಿ ಅಲ್ಲಿಂದ ಮಾರ್ಗ ಬದಲಾಯಿಸಿದೆ ಅದಕ್ಕೆ ಹವಾಮಾನವೇ ಕಾರಣ ಎನ್ನಲಾಗುತ್ತಿದೆ. ದ್ವಾರಕ, ಓಖಾದಲ್ಲಿ ಸ್ವಲ್ಪ ಪ್ರಭಾವವಿರಲಿದೆ.
ಇಂದು ಉಗ್ರ ರೂಪ ಪಡೆಯಲಿರುವ 'ವಾಯು' ಚಂಡಮಾರುತ, ಗುಜರಾತಿನಲ್ಲಿ ಕಟ್ಟೆಚ್ಚರ
ಆದರೆ ವಾಯು ಚಂಡಮಾರುತ ಕೆಟಗರಿ ಎರಡಾಗಿ ಪರಿವರ್ತನೆಯಾಗಿದೆ, ಇದು ಕೆಟಗರಿ ಒಂದಕ್ಕಿಂತ ಇದು ಕಡಿಮೆ ಪ್ರಭಾವವನ್ನು ಹೊಂದಿರುತ್ತದೆ. ಇದೀಗ ಗಂಟೆಗೆ 135-145 ಕಿ.ಮೀ ವೇಗದಲ್ಲಿ ಮಾರುತ ಗಾಳಿ ಬೀಸುತ್ತಿದೆ ಒಂದೊಮ್ಮೆ ಅದು ಗಂಟೆಗೆ 175 ಕಿ.ಮೀ ವೇಗದಲ್ಲಿ ಬೀಸಿದರೆ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುತ್ತದೆ.
ಗುಜರಾತ್ ನ 5 ವಿಮಾನ ನಿಲ್ದಾಣಗಳಲ್ಲಿ ಸೇವೆ ವ್ಯತ್ಯಯವಾಗಿದೆ. ಮುಂದಿನ 24 ಗಂಟೆಗಳಲ್ಲಿ ಗುಜರಾತ್ ನ 5 ವಿಮಾನ ನಿಲ್ದಾಣಗಳು ಸ್ಥಗಿತಗೊಳ್ಳಲಿದ್ದು, ವಿಮಾನ ನಿಲ್ದಾಣದ ಮೂಲಸೌಕರ್ಯಗಳಿಗೆ ಚಂಡಮಾರುತದಿಂದ ಉಂಟಾಗುವ ನಷ್ಟವನ್ನು ಹಾಗೂ ಪ್ರಯಾಣಿಕರಿಗೆ ಉಂಟಾಗುವ ಅನಾನುಕೂಲವನ್ನು ತಡೆಗಟ್ಟಲು ಸೇವೆಗಳನ್ನು ಸ್ಥಗಿತಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ಗುಜರಾತ್ ನಲ್ಲಿ ಸೌರಾಷ್ಟ್ರ ಹಾಗೂ ಕಚ್ ಪ್ರದೇಶದಿಂದ ಸುಮಾರು 3 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಇದೀಗ ಗುಜರಾತ್ ಬಿಟ್ಟು ಪಾಕಿಸ್ತಾನದ ಕರಾಚಿಯಕಡೆಗೆ ಚಂಡ ಮಾರುತ ಪಥ ಬದಲಾಯಿಸಿದೆ. ಸೌರಾಷ್ಟ್ರ, ಗುಜರಾತ್ ಕರಾವಳಿ ಭಾಗದಲ್ಲಿ ಬಿರುಗಾಳಿಯಿಂದ ಕೂಡಿದ ಸಣ್ಣ ಮಳೆಯಾಗುತ್ತಿದೆ. ಮುಂದಿನ ಎರಡು ದಿನ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.